ಕರ್ನಾಟದ ನೆರೆ ಮರೆತ ಮೋದಿ, ಮುಂಬೈಗೆ ಪ್ರಯಾಣ
ಬೆಂಗಳೂರು, ಸೆಪ್ಟೆಂಬರ್ 07: ಯಡಿಯೂರಪ್ಪ ಸಿಎಂ ಆದ ಬಳಿಕ ಮೊದಲ ಬಾರಿಗೆ ರಾಜ್ಯಕ್ಕೆ ಬಂದಿದ್ದ ಮೋದಿ, ರಾಜ್ಯದ ನೆರೆಯ ಬಗ್ಗೆ ಗಮನವಹಿಸದೆ ಹಾಗೆಯೇ ವಾಪಸ್ ಮರಳಿದ್ದಾರೆ.
ನಿನ್ನೆ ರಾತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಇಸ್ರೊದ ಚಂದ್ರಯಾನ 2 ನಲ್ಲಿ ಅಂತಿಮ ಕ್ಷಣಗಳಿಗೆ ಸಾಕ್ಷಿ ಆಗುವ ಉದ್ದೇಶದಿಂದ ಬಂದಿದ್ದ ಅವರನ್ನು ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರು, ರಾಜ್ಯ ಸಚಿವರು, ರಾಜ್ಯಪಾಲರು ಸ್ವಾಗತಿಸಿದ್ದರು.
ತಡವಾಗಿ ಬಂದಿದ್ದ ಅವರು, ಯಾವುದೇ ಸಭೆಗಳನ್ನು ಮಾಡದೆ ವಿಶ್ರಾಂತಿ ಪಡೆದುಕೊಂಡರು, ನಂತರ ಇಂದಾದರೂ ಅವರು ರಾಜ್ಯದ ಸಿಎಂ ಅವರೊಂದಿಗೆ ಸಭೆ ನಡೆಸಿ ನೆರೆ ಪರಿಹಾರದ ಕುರಿತು ಅನುದಾನ ಬಿಡುಗಡೆ ಮಾಡುವ ನಿರೀಕ್ಷೆ ಇತ್ತು ಆದರೆ ಅದು ಸುಳ್ಳಾಗಿದೆ. ಬಂದಷ್ಟೇ ವೇಗವಾಗಿ ಅವರು ಹಿಂತುರಿಗಿದ್ದಾರೆ.
ಬೆಳಿಗ್ಗೆ ಇಸ್ರೊದಿಂದ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, ಅಲ್ಲಿಂದ ನೇರವಾಗಿ ಮುಂಬೈಗೆ ತೆರಳಿ ಮೆಟ್ರೊ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದಾರೆ.
ಮೋದಿ ಅವರು ರಾಜ್ಯಕ್ಕೆ ಬಂದಾಗ ಅವರೊಂದಿಗೆ ಬರದ ವಿಷಯ ಚರ್ಚೆ ಮಾಡಿ, ಶೀಘ್ರ ಸಹಾಯ ಬಿಡುಗಡೆಗೆ ಒತ್ತಾಯ ಮಾಡುವುದಾಗಿ ಸಿಎಂ ಯಡಿಯೂರಪ್ಪ ಮತ್ತು ಇನ್ನೂ ಕೆಲವು ಸಚಿವರು ಹೇಳಿದ್ದರು. ಆದರೆ ಮೋದಿ ಅವರು ಮಾತಿಗೆ ದೊರೆತಿಲ್ಲ.
ಈ ಹಿಂದೆ ಯಡಿಯೂರಪ್ಪ ಅವರು ದೆಹಲಿಗೆ ಹೋಗಿ ಎರಡು ಬಾರಿ ಮೋದಿ ಅವರನ್ನು ಭೇಟಿ ಆಗಿ ನೆರೆಗೆ ಪರಿಹಾರ ನೀಡಲು ಮನವಿ ಮಾಡಿದ್ದಾರೆ. ಕೇಂದ್ರದಿಂದ ತಂಡವೊಂದು ಬಂದು ವರದಿ ಮಾಡಿಕೊಂಡು ಹೋಗಿದೆ ಇಷ್ಟಾದರೂ ಇನ್ನೂ ನೆರೆ ಪರಿಹಾರ ಬಿಡುಗಡೆ ಮಾಡಿಲ್ಲ.