ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷರಾಗಿ ಇನ್ಫಿ ಮೂರ್ತಿ ನೇಮಕ
Recommended Video
ಬೆಂಗಳೂರು, ಜೂನ್ 13: ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರನ್ನು ನೇಮಕ ಮಾಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಯೋಜನಾ ಮಂಡಳಿಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೋರುವ ಸಲುವಾಗಿ ಜೂನ್ 06ರಂದು ನಾರಾಯಣ ಮೂರ್ತಿ ಅವರನ್ನು ಭೇಟಿ ಮಾಡಿದ್ದೆ. ಈ ಮಂಡಳಿಯಲ್ಲಿ ಅವರು ಹೆಸರಿಸುವ ತಜ್ಞರೇ ಇರಲಿದ್ದಾರೆ. ಇದುವರೆಗೂ ಮಂಡಳಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಲಾಗುತ್ತಿತ್ತು.
ನಮ್ಮ ಹೆಚ್ ಡಿ ಕೆ ಅವರು ಇನ್ಫೋಸಿಸ್ ಸ್ಥಾಪಕ ಅಧ್ಯಕ್ಷ ಎನ್.ಆರ್ ನಾರಾಯಣಮೂರ್ತಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದ ಚಿತ್ರ ಸಂಪುಟ ಇಲ್ಲಿದೆ.#HDKumaraSwamy #NammaHDK pic.twitter.com/IKMKTivlLi
— Namma HDK (@nammahdk) June 1, 2018
ಇನ್ನು ಮುಂದೆ ಮಂಡಳಿಗೆ ಸಂಪುಟ ದರ್ಜೆ ಸ್ಥಾನ ನೀಡಿ ವಿಧಾನಸೌಧ ಅಥವಾ ವಿಕಾಸಸೌಧದಲ್ಲಿ ಕೊಠಡಿ ನೀಡಲಾಗುವುದು. ನಿರುದ್ಯೋಗ ಸಮಸ್ಯೆ ಬಗೆಹರಿಸಲ ರಾಜ್ಯದಲ್ಲಿ ಉದ್ಯಮಿಗಳ ಸ್ಥಾಪನೆ ಮತ್ತು ಸಂಪನ್ಮೂಲ ಕ್ರೋಢೀಕರಣ, ಹೊಸ ಯೋಜನೆಗಳ ಅನುಷ್ಠಾನದ ಉದ್ದೇಶದಿಂದ ಇದೇ ಮೊದಲ ಬಾರಿಗೆ ಉದ್ಯಮಿಯೊಬ್ಬರನ್ನು ಇಂತಹ ಉನ್ನತ ಹುದ್ದೆಗೆ ನೇಮಿಸಲಾಗುತ್ತಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿಯನ್ನು ಭೇಟಿ ಮಾಡಿದ ಕುಮಾರಸ್ವಾಮಿ
ಆರ್ಥಿಕ ತಜ್ಞ ಡಾ. ಡಿ.ಎಂ. ನಂಜುಂಡಪ್ಪ ನಂತರ ಯೋಜನಾ ಮಂಡಳಿಗೆ ಸಂಬಂಧಪಟ್ಟ ಸರ್ಕಾರಗಳು ರಾಜಕೀಯ ನೇಮಕಾತಿಗಳನ್ನೇ ಇದುವರೆಗೂ ಮಾಡಿವೆ. ಇಂತಹ ಮಂಡಳಿಗಳಿಂದ ಸರ್ಕಾರಕ್ಕೆ ಹೊರೆಯಾಗಿದೆಯೇ ಹೊರತು ಜನರಿಗೆ ಅನುಕೂಲವಾಗುವ ಯಾವುದೇ ಮೌಲ್ಯಯುತ ವರದಿಗಳ ಬಂದಿಲ್ಲ. ಮೈತ್ರಿ ಸರ್ಕಾರ ರಚನೆಗೂ ಮುನ್ನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಜನರಿಗೆ ಭರವಸೆಯ ಮಹಾಪೂರವನ್ನೇ ಹರಿಸಿವೆ.
ಇವುಗಳ ಅನುಷ್ಠಾನ ಹಾಗೂ ಸರ್ಕಾರದ ದೈನಂದಿನ ಕಾರ್ಯಕ್ರಮಗಳಿಗೆ ಸಂಪನ್ಮೂಲದ ಕೊರತೆ ಇದೆ.ಇರುವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿ, ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಜೊತೆಗೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸರ್ಕಾರಕ್ಕೆ ಉದ್ಯಮಿಗಳು ಹಾಗೂ ಆರ್ಥಿಕ ತಜ್ಞರ ಅವಶ್ಯವಿದೆ.
ನಾರಾಯಣ ಮೂರ್ತಿ ಅಂಥವರಿಗೆ ಇದರ ಹೊಣೆಗಾರಿಕೆ ವಹಿಸುವುದರಿಂದ ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಉದ್ದಿಮೆದಾರರು ಮುಂದೆ ಬರುತ್ತಾರೆ. ಹೊಸ ಉದ್ದಿಮೆಗಳು ಸ್ಥಾಪಿತವಾಗುವುದರಿಂದ ಒಂದೆಡೆ ನಿರುದ್ಯೋಗ ಸಮಸ್ಯೆ ನಿವಾರಣೆ ಜೊತೆಗೆ ರಾಜ್ಯದ ಬೊಕ್ಕಸವೂ ತುಂಬುತದೆ. ತಜ್ಞರ ಸಮಿತಿ ಸರ್ಕಾರಕ್ಕೆ ಆಗಿಂದಾಗ್ಗೆ ಮಾರ್ಗದರ್ಶನ ನೀಡುವುದರಿಂದ ಹೊಸ ಕಾರ್ಯಕ್ರಮಗಳಿಗೆ ಸಹಕಾರಿಯಾಗಲಿದೆ.
ನೀರಾವರಿ, ವಿದ್ಯುತ್ ಮತ್ತು ಮೂಲಸೌಕರ್ಯ ಕಲ್ಪಿಸಲು ಅಗತ್ಯ ಬಂಡವಾಳವನ್ನು ಬಡ್ಡಿ ರಹಿತವಾಗಿ ವಿದೇಶಗಳಿಂದ ತರಲು ಇವರ ನೇತೃತ್ವ ನೆರವಾಗಲಿದೆ ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಈ ತೀರ್ಮಾನಕ್ಕೆ ಬಂದಿದ್ದಾರೆ.