ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ
ಆರೋಪ, ಪ್ರತ್ಯಾರೋಪ, ಹಣ ಹಂಚಿಕೆ ಮುಂತಾದ ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದ ನಂಜನಗೂಡು ಮತ್ತು ಗುಂಡ್ಲುಪೇಟೆ ಅಸೆಂಬ್ಲಿ ಉಪಚುನಾವಣೆಯ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ತನ್ನ ವರದಿಯನ್ನು ಸಿಎಂ ಕಚೇರಿಗೆ ನೀಡಿದೆ.
ಬೆಂಗಳೂರು, ಏ 10: ಚಾಮರಾಜನಗರ ಲೋಕಸಭಾ ವ್ಯಾಪ್ತಿಯ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿ ಮತದಾನವಾಗಿದ್ದು, ಚುನಾವಣಾ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ತನ್ನ ವರದಿಯನ್ನು ನೀಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಎರಡು ಕ್ಷೇತ್ರಗಳ ಚುನಾವಣಾ ಪ್ರಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಖುದ್ದು ಮುಂದೆ ನಿಂತು ಮುನ್ನಡೆಸಿದ್ದರು.
ಆರೋಪ, ಪ್ರತ್ಯಾರೋಪ, ಹಣ ಹಂಚಿಕೆ ಮುಂತಾದ ಹಲವು ರಾಜಕೀಯ ಬೆಳವಣಿಗೆಗೆ ಕಾರಣವಾಗಿದ್ದ ಈ ಉಪಚುನಾವಣೆಯ ಫಲಿತಾಂಶದ ಬಗ್ಗೆ ಗುಪ್ತಚರ ಇಲಾಖೆ ತನ್ನ ವರದಿಯನ್ನು ಸಿಎಂ ಕಚೇರಿಗೆ ನೀಡಿದೆ ಎನ್ನುವ ಮಾಹಿತಿಯಿದೆ. [ನೆಗೆದುಬಿದ್ದು ನೆಲ್ಲಿಕಾಯಿಯಾದ ಕರ್ನಾಟಕ ಗುಪ್ತಚರ ವರದಿ]
ಎರಡೂ ಕ್ಷೇತ್ರಗಳಲ್ಲಿ ಅತ್ಯಂತ ಗೌಪ್ಯವಾಗಿ ಸಂಗ್ರಹಿಸಿರುವ ವರದಿ ಮತ್ತು ಶೇಕಡಾವಾರು ಮತದಾನವನ್ನು ಆಧರಿಸಿ ಇಲಾಖೆ ತನ್ನ ವರದಿಯನ್ನು ನೀಡಿದೆ.
ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸಿನ ನಡುವೆ ಅತ್ಯಂತ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು ಮತ್ತು ಜಾತಿ ಲೆಕ್ಕಾಚಾರವೇ ಉಪಚುನಾವಣೆಯ ಹೈಲೆಟ್ಸ್ ಎನ್ನುವ ಅಂಶವನ್ನು ವರದಿಯಲ್ಲಿ ಹೇಳಲಾಗಿದೆ. [ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶದ ಮುಖ್ಯಾಂಶಗಳು]
ಗುಪ್ತಚರ ವರದಿಯ ಪ್ರಕಾರ ಎರಡು ಕ್ಷೇತ್ರಗಳಲ್ಲಿ ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ? ಮುಂದೆ ಓದಿ..
ಲಕ್ಶ್ಮಿ ಹೆಬ್ಬಾಳ್ಕರ್ ಹಣಹಂಚುವ ವಿಡಿಯೋ
ಚುನಾವಣಾ ಆಯೋಗದ ಕಟ್ಟುನಿಟ್ಟಿನ ಆದೇಶದ ನಡುವೆಯೂ ಎರಡೂ ಕ್ಷೇತ್ರಗಳಲ್ಲಿ ಮತದಾರರಿಗೆ ದುಡ್ಡು, ಮದ್ಯಮಾಂಸ ಯಥೇಚ್ಚವಾಗಿ ಹರಿದಿದೆ ಎನ್ನುವ ಮಾಹಿತಿಯಿದೆ. ಇದಕ್ಕೆ ಪೂರಕ ಎನ್ನುವಂತೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಶ್ಮಿ ಹೆಬ್ಬಾಳ್ಕರ್ ಹಣಹಂಚುವ ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗಿದ್ದು.
ದಲಿತ ಮತ್ತು ಲಿಂಗಾಯಿತ ಮತಗಳು ಒಟ್ಟಾಗಿವೆ ಎನ್ನುವ ಮಾಹಿತಿ
ಪ್ರಮುಖವಾಗಿ ನಂಜನಗೂಡಿನಲ್ಲಿ ದಲಿತ ಮತ್ತು ಲಿಂಗಾಯಿತ ಮತಗಳು ಒಟ್ಟಾಗಿವೆ ಎನ್ನುವ ಮಾಹಿತಿಯನ್ನು ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ. ಬದನಾಳು ಗಲಭೆಯಿಂದ ಪ್ರಮುಖವಾಗಿ ದಲಿತ ಮತಗಳು ಬಿಜೆಪಿಯ ಪರವಾಗಿ ಬಿದ್ದಿವೆ ಎಂದು ಗುಪ್ತಚರ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಶ್ರೀನಿವಾಸ ಪ್ರಸಾದ್ ಜಯ ಸಾಧ್ಯತೆ
ನಂಜನಗೂಡು ಕ್ಷೇತ್ರದಲ್ಲಿ ಮನೆಮನೆಯ ಸದಸ್ಯರ ಹೆಸರನ್ನು ಹೇಳುವಷ್ಟು ಚಿರಪರಿಚಿತರಾಗಿರುವ ಶ್ರೀನಿವಾಸ ಪ್ರಸಾದ್ ಸುಮಾರು ಮೂರರಿಂದ ಐದು ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್ಸಿನ ಕಳಲೆ ಕೇಶವ ಮೂರ್ತಿ ವಿರುದ್ದ ಜಯ ಸಾಧಿಸುವ ಸಾಧ್ಯತೆ ಇದೆ ಎನ್ನುವ ವರದಿಯನ್ನು ಗುಪ್ತಚರ ಇಲಾಖೆ ನೀಡಿದೆ ಎನ್ನುವ ಸುದ್ದಿ ಈಸಂಜೆಯಲ್ಲಿ ಪ್ರಕಟವಾಗಿದೆ.
ನಿರ್ಣಾಯಕ ವೀರಶೈವ ಮತಗಳು
ಸಚಿವ ಸ್ಥಾನ ಕೈತಪ್ಪಿ, ಕಾಂಗ್ರೆಸ್ಸಿಗೆ ಶ್ರೀನಿವಾಸ ಪ್ರಸಾದ್ ರಾಜೀನಾಮೆ ನೀಡಿದ ನಂತರ ನಡೆಸಿದ ಸ್ವಾಭಿಮಾನ ಸಮಾವೇಶ, ಯಡಿಯೂರಪ್ಪ ಮೂಲಕ ನಿರ್ಣಾಯಕ ವೀರಶೈವ ಮತಗಳು ಬಿಜೆಪಿ ಪರವಾಗಿ ಬಿದ್ದಿದೆ.
ಪತಿಯ ಅನುಕಂಪ ಗೀತಾಗೆ ಸಿಗುವುದು ಕಷ್ಟ
ಗುಂಡ್ಲುಪೇಟೆಯಲ್ಲಿ ಪತಿಯ ಸಾವಿನ ಅನುಕಂಪ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ ಕೈಹಿಡಿಯುವ ಸಾಧ್ಯತೆ ಕಮ್ಮಿ. ಬಿಜೆಪಿ ಅಭ್ಯರ್ಥಿ ನಿರಂಜನ್ ಕುಮಾರ್ ಕಳೆದ ಚುನಾವಣೆಯಲ್ಲಿ ಕಮ್ಮಿ ಅಂತರಗಳ ಮೂಲಕ ಚುನಾವಣೆಯಲ್ಲಿ ಸೋತಿದ್ದು, ಯಡಿಯೂರಪ್ಪ ಭರ್ಜರಿ ಪ್ರಚಾರದಿಂದಾಗಿ ಈ ಕ್ಷೇತ್ರದಲ್ಲಿ ಯಾರು ಗೆದ್ದರೂ ಅಂತರ ತೀರಾ ಕಮ್ಮಿಯಿರಲಿದೆ ಎನ್ನುವ ವರದಿಯನ್ನು ಇಲಾಖೆ ನೀಡಿದೆ.