ನಮ್ಮ ಮೆಟ್ರೋ: ತಪ್ಪಿತು ಅನಾಹುತ; ಆದ್ರೆ ಮುಂದೇನೋ?
ಹೌದು ಇದೆಲ್ಲ ಯಾಕೆ ಹೇಳಲಾಗುತ್ತಿದೆ ಅಂದರೆ ರಾಜಧಾನಿಯಲ್ಲೀಗ 'ನಮ್ಮ ಮೆಟ್ರೋ' ಕಾಮಗಾರಿ ಭರದಿಂದ ಸಾಗುತ್ತಿದೆ. ಕೆಆರ್ ಮಾರುಕಟ್ಟೆ ಪ್ರದೇಶದಲ್ಲಿ ವಿಕ್ಟೋರಿಯಾ ಆಸ್ಪತ್ರೆ ಎದುರಿಗೂ ಸುರಂಗ ಕೊರೆದು ರೈಲು ಮಾರ್ಗ ಹಾಕಲಾಗುತ್ತಿದೆ. ಇದೇ ಜಾಗದಲ್ಲಿ ಕಳೆದ ನವೆಂಬರಿನಲ್ಲಿ ಟಿಪ್ಪು ಕಾಲದ 2 ಫಿರಂಗಿಗಳು, ಗುಂಡುಗಳು ಸಿಕ್ಕಿದ್ದವು.
ಸರಿಯಾಗಿ ಇದೇ ಜಾಗದಲ್ಲಿ ಎಂದಿನಂತೆ ಕಾಮಗಾರಿ ನಡೆಯುತ್ತಿದ್ದಾಗ ನಿನ್ನೆ ಶುಕ್ರವಾರ ಮಧ್ಯಾಹ್ನ ಏಕಾಏಕಿ ರಸ್ತೆ ಕುಸಿದು ಬಿದ್ದಿದೆ. ಹಾಗೆ ಕುಸಿಯುತ್ತಾ ಕುಸಿಯುತ್ತಾ ನೋಡನೋಡುತ್ತಿದ್ದಂತೆ ಬರೋಬ್ಬರಿ 30 ಅಡಿ ಆಳದ ಕಂದಕವೇರ್ಪಟ್ಟಿದೆ. ಭೂತಾಯಿ ಹೀಗೆ ಬಾಯ್ತೆರೆದಾಗ ಸದ್ಯ ಯಾವುದೇ ವಾಹನಗಳನ್ನು ಸ್ವಾಹಾ ಅಂದಿಲ್ಲ.
ತಕ್ಷಣ ನಮ್ಮ ಮೆಟ್ರೋ ಕಾರ್ಮಿಕರು ಸ್ಥಳವನ್ನು ಸುತ್ತುವರಿದು ವಾಹನ ಸಂಚಾರಕ್ಕೆ ರಸ್ತೆಯನ್ನು ಬಂದ್ ಮಾಡಿದರು ಅನ್ನಿ. ಅದಾದನಂತರ ರಾತ್ರಿಯಾದರೂ ಇನ್ನೂ ಆ ಕಂದಕವನ್ನು ಮುಚ್ಚುವ ಕಾರ್ಯದಲ್ಲಿ ತೊಡಗಿದ್ದರೆ, ಹಿರಿಯ ಅಧಿಕಾರಿಗಳು ಆ ಜಾಗದಲ್ಲಿ ದಿಢೀರನೆ ಮಣ್ಣು ಕುಸಿದಿದ್ದೇಕೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಈ ಮಧ್ಯೆ, ನಮ್ಮ ಮೆಟ್ರೋ ಹಿರಿಯ ಅಧಿಕಾರಿಗಳು ಮಾಧ್ಯಮದವರೂ ಸೇರಿದಂತೆ ಯಾರನ್ನೂ ಸ್ಥಳಕ್ಕೆ ಬಿಡುತ್ತಿಲ್ಲ. ಇದರಿಂದ ಸದರಿ ಜಾಗದ ಬಗ್ಗೆ ಅನುಮಾನಗಳ ಹುತ್ತ ಎದ್ದಿದೆ. ಇನ್ನೂ ಏನು ಕಾದಿದೆಯೋ ಎಂಬ ಭೀತಿ ಆವರಿಸಿದೆ.
ಇನ್ನು ಹಬ್ಬದ ಹಿನ್ನೆಲೆಯಲ್ಲಿ All roads lead to KR market ಎಂಬಂತಹ ಸಮಯವಾಗಿದ್ದರಿಂದ ವಾಹನ ಸವಾರರು ಬದುಕಿದೆಯಾ ಬಡಜೀವವವೇ ಅಂದುಕೊಂಡರೂ ಭಾರಿ ಸಂಚಾರ ದಟ್ಟಣೆ ಉಂಟಾಗಿ ವಿಪರೀತ ಸಮಸ್ಯೆ ಎದುರಿಸುವಂತಾಗಿದೆ. ತಡರಾತ್ರಿಯ ವೇಳೆಗೆ ವಾಹನ ಸಂಚಾರ ನಿಯಂತ್ರಣಕ್ಕೆ ಬಂದಿದ್ದು, ರಸ್ತೆಯಲ್ಲಿ ಕಂದಕ ಮುಚ್ಚುವ ಕಾರ್ಯ ಪ್ರಗತಿಯಲ್ಲಿರುವುದರಿಂದ ಇಂದೂ ಸಹ ವಾಹನ ದಟ್ಟಣೆ ಉಂಟಾಗಬಹುದು. ಹಾಗಾಗಿ ಹಬ್ಬಕ್ಕಾಗಿ ಅದೂ ಇದೂ ಎಂದು ಖರೀದಿ ಮಾಡಲು ಮಾರುಕಟ್ಟೆಯತ್ತ ಹೆಜ್ಜೆ ಹಾಕುವ ಮುನ್ನ ಸಂಚಾರ ದಟ್ಟಣೆ ಬಗ್ಗೆ ಮುಂಜಾಗ್ರತೆ ವಹಿಸಿ.