ಕಾರ್ಣಿಕ ಭವಿಷ್ಯ ನಿಜ, ನಮ್ಮ ಕಾಂಗ್ರೆಸ್ ರಾಜ್ಯಭಾರ : ವರ್ತೂರ್ ಪ್ರಕಾಶ್
ಕೋಲಾರ, ಫೆಬ್ರವರಿ 09: ಮೈಲಾರದ ಗೊರವಯ್ಯನ ಕಾರ್ಣಿಕ ಭವಿಷ್ಯ ನಿಜವಾಗಲಿದೆ. ರಾಜ್ಯದಲ್ಲಿ ಇನ್ಮುಂದೆ ನಮ್ಮ ಪಕ್ಷದ್ದೆ ಅಧಿಕಾರ, ರಾಜ್ಯಭಾರ ನನ್ನದೇ ಎಂದು ಹಾಲಿ ಶಾಸಕ ಹಾಗೂ 'ನಮ್ಮ ಕಾಂಗ್ರೆಸ್' ಪಕ್ಷದ ಸಂಸ್ಥಾಪಕ ಅಧ್ಯಕ್ಷ ವರ್ತೂರು ಪ್ರಕಾಶ್ ಭವಿಷ್ಯ ನುಡಿದಿದ್ದಾರೆ.
ಪತ್ರಕರ್ತರ ಭವನದಲ್ಲಿ ನಡೆದ ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನಾ ಸಮಾರಂಭದಲ್ಲಿ ವರ್ತೂರು ಪ್ರಕಾಶ್ ಅವರು ಭಾಗವಹಿಸಿದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಮುಂದಿನ ರಾಜ್ಯಭಾರ ನನ್ನದೇ. ನಾನೇ ರಾಜ್ಯಭಾರ ಮಾಡುವುದು' ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಯ ಮೈಲಾರಲಿಂಗ ಜಾತ್ರೆಯಲ್ಲಿ ಗೊರವಯ್ಯ ಕಾರ್ಣಿಕ ಈ ಬಾರಿ ನೂಡಿದಿರುವ ಭವಿಷ್ಯದ ಬಗ್ಗೆ ಗೊಂದಲ ಮಾಡಿದೆ. ಆದರೆ, ಅಂತಿಮವಾಗಿ 'ಆಕಾಶ ಗಿಡಕ್ಕೆ ಗಿಳಿ ಕಿತ್ತಿತಲೇ ಪರಾಕ್' ಎಂಬ ನುಡಿಯನ್ನು ಅಧಿಕೃತಗೊಳಿಸಲಾಗಿದೆ. ಇದು ತಮ್ಮ ಪರವಾದ ಭವಿಷ್ಯ ನುಡಿ, ಗೊರವಯ್ಯ ನುಡಿದಿರುವುದು ನಿಜವಾಗಲಿದೆ ಎಂಬ ವಿಶ್ವಾಸದಲ್ಲಿ ಪ್ರಕಾಶ್ ಇದ್ದಾರೆ.
'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಮೈಲಾರ ಕಾರ್ಣಿಕ ಭವಿಷ್ಯ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 'ನಮ್ಮ ಕಾಂಗ್ರೆಸ್' ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅಧಿಕಾರಕ್ಕೆ ಬರುವುದು ಖಚಿತ. ಫೆಬ್ರವರಿ ತಿಂಗಳ ಕೊನೆಯಲ್ಲಿ ಅಭ್ಯಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ಕಾರ್ಣಿಕ ಭವಿಷ್ಯ ನಿಜ ಮಾಡುವೆ ಎಂದು ಹೇಳಿದರು.