ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿ ಕಂಪ್ಲೀಟ್ ಯುಟರ್ನ್
ಬೆಂಗಳೂರು, ಫೆ 8: ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ನೀಡಿದ ರಾಜೀನಾಮೆ ಇನ್ನೂ ಆಂಗೀಕಾರವೂ ಆಗಿಲ್ಲ, ಅತ್ತ ತಿರಸ್ಕೃತವೂ ಗೊಂಡಿಲ್ಲ.
ದೆಹಲಿ ಚುನಾವಣೆಯ ಪ್ರಚಾರ ಕಾರ್ಯ ಮುಗಿದಿರುವುದರಿಂದ, ಈ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕರೂ ಸಿಗಬಹುದು. ಇದೇ ಬರುವ ಫೆಬ್ರವರಿ ಹದಿನೇಳರಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆ: ಟ್ರಬಲ್ ಶೂಟರ್ ಡಿಕೆಶಿಗೆ ದೆಹಲಿ ಮುಖಂಡರಿಂದಲೇ ಟ್ರಬಲ್!
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಮಂಚೂಣಿಯಲ್ಲಿ ಕೇಳಿಬರುತ್ತಿದ್ದ ಹೆಸರೆಂದರೆ ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್, ಕೃಷ್ಣ ಭೈರೇಗೌಡ ಮತ್ತು ಈಶ್ವರ್ ಖಂಡ್ರೆ ಅವರದ್ದು. ಈ ಪೈಕಿ, ಒಬ್ಬರು ಈಗ ಯುಟರ್ನ್ ಹೊಡೆದಿದ್ದಾರೆ.
"ದಿನೇಶ್ ಗುಂಡೂರಾವ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯಲಿ" ಎನ್ನುವ ಹೇಳಿಕೆಯನ್ನು ಸಚಿವ ಎಂ.ಬಿ.ಪಾಟೀಲ್ ನೀಡಿದ್ದಾರೆ. ಪ್ರಬಲ ಆಕಾಂಕ್ಷಿಯೊಬ್ಬರಿಂದ ಈ ರೀತಿಯ ಹೇಳಿಕೆ ಬಂದಿರುವುದು ಕಾಂಗ್ರೆಸ್ ವಲಯದಲ್ಲಿ ಅಚ್ಚರಿಯನ್ನು ಮೂಡಿಸಿದೆ.
"ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ, ಇಬ್ಬರೂ ತಮ್ಮತಮ್ಮ ಸ್ಥಾನದಲ್ಲಿ ಮುಂದುವರಿಯಲಿ" ಎನ್ನುವ ಪಾಟೀಲ್ ಹೇಳಿಕೆಯ ಹಿಂದೆ ಇನ್ನೊಂದು ರಾಜಕೀಯ ಅಡಗಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಬಣದ ಹೊರತಾಗಿ, ಬೇರೊಬ್ಬರು ಈ ಆಯಕಟ್ಟಿನ ಹುದ್ದೆಯನ್ನು ನಿಭಾಯಿಸುವುದನ್ನು ತಪ್ಪಿಸಲು, ಈ ರೀತಿಯ ಹೇಳಿಕೆಯನ್ನು ಹರಿಯಬಿಡಲಾಗಿದೆ ಎನ್ನುವ ಮಾತೂ ಕೇಳಿಬರುತ್ತಿದೆ.