11 ಗ್ರಾಮಗಳ ಹೆಸರು ಬದಲಾವಣೆ; ಕೇರಳ ಸಿಎಂಗೆ ಯಡಿಯೂರಪ್ಪ ಪತ್ರ
ಬೆಂಗಳೂರು, ಜೂನ್ 28; ಕೇರಳ ಸರ್ಕಾರದ ಕಾಸರಗೋಡಿನ ಕನ್ನಡ ಪ್ರಾಬಲ್ಯವಿರುವ ಗ್ರಾಮಗಳ ಹೆಸರನ್ನು ಬದಲಾವಣೆ ಮಾಡಿದೆ. ಕನ್ನಡದಿಂದ ಮಲಯಾಳಂಗೆ ಹೆಸರು ಬದಲಾವಣೆ ಮಾಡಿದ್ದು, ಈ ಕುರಿತು ಫಲಕಗಳನ್ನು ಸಹ ಅಳವಡಿಕೆ ಮಾಡಲಾಗಿದೆ.
Recommended Video
ಕರ್ನಾಟಕದಲ್ಲಿ ಕೇರಳ ಸರ್ಕಾರದ ಈ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಮವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ವಿಚಾರದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರವನ್ನು ಬರೆದಿದ್ದಾರೆ.
ಗ್ರಾಮಗಳ ಹೆಸರು ಬದಲಾವಣೆ; ಕೇರಳ ಸರ್ಕಾರಕ್ಕೆ ಸಿಎಂ ಪತ್ರ
ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾತನಾಡುವ ಕಾಸರಗೋಡು ಮತ್ತು ಮಂಜೇಶ್ವರ ಐತಿಹಾಸಿಕ ಹಿನ್ನಲೆ, ಸಂಸ್ಕೃತಿಯನ್ನು ಹೊಂದಿವೆ. ಇಲ್ಲಿನ ಗ್ರಾಮಗಳ ಹೆಸರಿನೊಂದಿಗೆ ಜನರು ಬಾಂಧವ್ಯ ಹೊಂದಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕನ್ನಡಿಗರು ಇರುವ 11 ಗ್ರಾಮಗಳ ಹೆಸರು ಬದಲಿಸಿದ ಕೇರಳ
ಸ್ಥಳೀಯ ಸಂಸ್ಥೆಗಳು ಸ್ಥಳೀಯ ಜನರು ತಮ್ಮ ಅಭಿಪ್ರಾಯವನ್ನು ತಿಳಿಸಲು ಸಹ ಅವಕಾಶ ನೀಡದೆ ಗ್ರಾಮಗಳ ಹೆಸರುಗಳನ್ನು ಬದಲಾವಣೆ ಮಾಡಿವೆ. ಇದು ಸ್ಥಳೀಯ ಭಾವನೆಗೆ ಧಕ್ಕೆ ತರುವ ವಿಚಾರವಾಗಿದೆ.
ಇದು ಕನ್ನಡ ಮತ್ತು ತುಳು ಸಂಸ್ಕೃತಿಗೆ ಧಕ್ಕೆ ತರುತ್ತದೆ. ಅಲ್ಲಿ ವಾಸಿಸುತ್ತಿರುವ ಜನರ ಸೌಹಾರ್ದತೆಗೆ ಧಕ್ಕೆ ಬರುವ ಸಾಧ್ಯತೆ ಇದೆ. ಈಗಿರುವ ಹೆಸರುಗಳು ಕನ್ನಡ ಮತ್ತು ತುಳು ಭಾಷೆಯಿಂದ ಕೂಡಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮೇಲಿನ ಎಲ್ಲಾ ಅಂಶಗಳನ್ನು ಪರಿಗಣಿಸಿ ಗ್ರಾಮಗಳ ಹೆಸರು ಬದಲಾವಣೆ ಮಾಡುವುದನ್ನು ಪುನರ್ ಪರಿಶೀಲಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ಇದು ಕೇರಳ ಸರ್ಕಾರದ ತೀರ್ಮಾನವಲ್ಲ, ಸ್ಥಳೀಯ ಆಡಳಿತ ತೀರ್ಮಾನ ಎಂದು ಭಾವಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇರಳದ ಕಾಸರಗೋಡು ಮತ್ತು ಮಂಜೇಶ್ವರ ತಾಲ್ಲೂಕುಗಳ ಕೆಲವು ಗ್ರಾಮಗಳ ಕನ್ನಡ ಹೆಸರುಗಳನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಮುಖ್ಯಮಂತ್ರಿ @BSYBJP ರವರು ಕೇರಳದ ಮುಖ್ಯಮಂತ್ರಿ @vijayanpinarayi ಅವರಿಗೆ ಪತ್ರ ಬರೆದಿದ್ದಾರೆ. @CMOKerala pic.twitter.com/qOg9p7Mwco
— CM of Karnataka (@CMofKarnataka) June 28, 2021
ಕರ್ನಾಟಕದ ಭಾಗವೇ ಆಗಿದ್ದ ಮತ್ತು ಹೆಚ್ಚು ಕನ್ನಡಿಗರನ್ನೇ ಹೊಂದಿರುವ ಗಡಿ ಜಿಲ್ಲೆಯಾದ ಕಾಸರಗೋಡಿನ ಕನ್ನಡ ಪ್ರಾಬಲ್ಯವಿರುವ 11 ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಕೇರಳ ಸರ್ಕಾರ ಭಾಷಾಂತರ ಮಾಡಿದೆ.
ಕೇರಳ ಸರ್ಕಾರ ಕಾಸರಗೋಡು ಜಿಲ್ಲೆಯ ಮಧೂರು ಎಂಬ ಗ್ರಾಮವನ್ನು ಮಧುರಂ, ಕಾರಡ್ಕವನ್ನು ಕಡಗಮ್, ಪಿಳಿಕುಂಜೆಯನ್ನು ಪಿಳಿಕುನ್ನು, ಮಂಜೇಶ್ವರವನ್ನು ಮಂಜೇಶ್ವರಂ, ಕುಂಬಳವನ್ನು ಕುಂಬ್ಳಾ, ನೆಲ್ಲಿಕುಂಜವನ್ನು ನೆಲ್ಲಿಕುನ್ನಿ, ಮಲ್ಲಅನ್ನು ಮಲ್ಲಂ, ಬೇದಡ್ಕವನ್ನು ಬೇಡಗಮ್, ಆನೆಬಾಗಿಲುವನ್ನು ಆನೆವಾಗಿಲ್, ಹೊಸದುರ್ಗವನ್ನು ಪುದಿಯಕೋಟ, ಸಸಹಿತ್ಲುವನ್ನು ಶೈವಲಖ್ ಎಂದು ಬದಲಾಯಿಸಲು ತೀರ್ಮಾನ ಮಾಡಿದೆ.