ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದವರು ಯಾರು?
ಬೆಂಗಳೂರು, ಜ. 16: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಹಂಗಾಮಿ ಅಧ್ಯಕ್ಷರಾಗಿದ್ದ ನಳಿನ್ ಕುಮಾರ್ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಚುನಾವಣಾ ವೀಕ್ಷಕರಾಗಿದ್ದ ಸಚಿವ ಸಿ.ಟಿ. ರವಿ ಅಧಿಕೃತವಾಗಿ ಪ್ರಕಟಿಸಿದ್ದಾರೆ. ರಾಜ್ಯ ಬಿಜೆಪಿ ನೂತನ ಅಧ್ಯಕ್ಷರಾಗಿ ನಳೀನ್ ಕುಮಾರ್ ಕಟೀಲ್ ಅವಿರೋಧ ಆಯ್ಕೆಯಾಗಿದ್ದಾರೆ.
ಬಿಜೆಪಿ 18 ಸಂಘಟನಾತ್ಮಕ ಜಿಲ್ಲೆಗಳ ನೂತನ ಅಧ್ಯಕ್ಷರ ಪಟ್ಟಿ
ಮುಂದಿನ ಮೂರು ವರ್ಷಗಳ ಅವಧಿಗೆ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಪಕ್ಷ ಸಂಘಟನೆ ಮಾಡಲಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ನೂತನ ಅಧ್ಯಕ್ಷ ಕಟೀಲ್ ಅವರು ವ್ಯಕ್ತಪಡಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಸ್ಥಾನಗಳನ್ನು ಗೆಲ್ಲುವ ಗುರಿ
ಗುಜರಾತ್ ಮಾದರಿಯಲ್ಲಿ ಪಕ್ಷ ಸಂಘಟನೆ ಮಾಡುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಗುರಿ ಹಾಕಿಕೊಂಡಿದ್ದೇವೆ ಎಂದಿದ್ದಾರೆ ಕಟೀಲ್. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಆಯ್ಕೆಯಾದ ಬಳಿಕ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನನ್ನನ್ನು ನೇಮಕ ಮಾಡಿದ್ದರು. ಈಗ ಚುನಾವಣೆ ನಡೆದು ಪೂರ್ಣಪ್ರಮಾಣದ ಅರ್ಧಯಕ್ಷನಾಗಿದ್ದೇನೆ ಎಂದು ಕಟೀಲ್ ಹೇಳಿದ್ದಾರೆ.
ಗುಜರಾತ್ ಮಾದರಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇವೆ. ಜೊತೆಗೆ ಮಂಡಲ ಮಟ್ಟದ ಘಟಕಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸಲಾಗುವುದು. ತಾಲ್ಲೂಕು, ಜಿಲ್ಲಾ ಪಂಚಾಯ್ತಿ, ವಿಧಾನ ಪರಿಷತ್ ಚುನಾವಣೆಗಳನ್ನು ಎದುರಿಸಬೇಕಿದೆ. ಇದೆಲ್ಲವನ್ನು ಮಾಡಲು ಗುಜರಾತ್ ನಲ್ಲಿ ಮಾಡಿರುವಂತೆ ಪಕ್ಷದ ಸಿದ್ದಾಂತಗಳನ್ನು ನಿರಂತರ ಅಭ್ಯಾಸ ವರ್ಗಗಳ ಮೂಲಕ ಕಾರ್ಯರೂಪಕ್ಕೆ ತರುವುದು ಮುಂದಿನ ಮೂರು ವರ್ಷಗಳ ನಮ್ಮ ಅಜೆಂಡಾ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ರಾಜ್ಯಾದ್ಯಂತ ಪಕ್ಷ ಸಂಘಟನೆ-ಪ್ರವಾಸ ಮಾಡಿದ್ದೇನೆ
ನಾನು ರಾಜ್ಯಾಧ್ಯಕ್ಷನಾಗಿ ನಿಯೋಜಿತನಾದಾಗ ಮಂಗಳೂರಿನವರು, ಕರಾವಳಿಯವರು ಇಡೀ ರಾಜ್ಯಕ್ಕೆ ಹೇಗೆ ನಿರ್ವಹಣೆ ಮಾಡುತ್ತಾರೆ?. ಇಡೀ ರಾಜ್ಯದ ಪರಿಸ್ಥಿತಿ ಗೊತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆರೋಪಕ್ಕೆ ಉತ್ತರ ರೂಪದಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ. ವಿಧಾನಸಭೆ ಉಪಚುನಾವಣೆ ಹಾಗೂ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದ್ದೇವೆ. ಆದರೆ ನಾನು ಈಗಾಗಲೇ ರಾಜ್ಯದ ಅವಲೋಕನ ಮಾಡಿದ್ದೇನೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರ ಸಂಪರ್ಕ ಮಾಡಿದ್ದೇನೆ. ಎಲ್ಲಾ ಜಿಲ್ಲೆಗಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.
ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ಅವಿರೋಧ ಆಯ್ಕೆ!
ಆಯ್ಕೆ ಪ್ರಕ್ರಿಯೆ ಬಳಿಕ ಚುನಾವಣೆ ವೀಕ್ಷಕರಾಗಿದ್ದ ಸಚಿವ ಸಿ.ಟಿ. ರವಿ ಮಾತನಾಡಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ನಳೀನ್ ಕುಮಾರ್ ಕಟೀಲ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇಪ್ಪತ್ತು ಮಂದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದ್ದರು. ಪಕ್ಷದ ಸಕ್ರೀಯ ಸದಸ್ಯರು ರಾಜ್ಯಾದ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇತ್ತು. ಬೆಳಿಗ್ಗೆ 9 ರಿಂದ 10 ಗಂಟೆವರೆಗೆ ಒಂದೇ ನಾಮಪತ್ರ ಸಲ್ಲಿಕೆ ಆಗಿತ್ತು. ಹೀಗಾಗಿ ನಳೀನ್ ಕುಮಾರ್ ಕಟೀಲ್ ಅವರ ನಾಮಪತ್ರ ಮಾತ್ರ ಅಧಿಕೃತವಾಗಿತ್ತು. ನಳೀನ್ ಕುಮಾರ್ ಕಟೀಲ್ ಅವಿರೋಧವಾಗಿ ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ವೀಕ್ಷಕರಾಗಿದ್ದ ಸಿ.ಟಿ. ರವಿ ಘೋಷಣೆ ಮಾಡಿದ್ದಾರೆ.
ಚುನಾವಣಾಧಿಕಾರಿಯಾಗಿ ಮಾಜಿ ಎಂಎಲ್ಸಿ ಅಶ್ವಥ್ ನಾರಾಯಣ, ಸಹ ಚುನಾವಣಾಧಿಕಾರಿಯಾಗಿ ಹಾಲಪ್ಪ ಆಚಾರ್ ಕಾರ್ಯನಿರ್ವಹಣೆ ಮಾಡಿದ್ದಾರೆ. 2023ರವರಗೆ ನಳೀನ್ ಕುಮಾರ್ ಕಟೀಲ್ ಕಾರ್ಯಾವಧಿ ಇರುತ್ತದೆ ಎಂದು ಸಿ.ಟಿ. ರವಿ ಹೇಳಿದ್ದಾರೆ. ಚುನಾವಣೆ ಬಳಿಕ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆವರಿಗೆ ಚುನಾವಣಾ ವೀಕ್ಷಕರಾಗಿದ್ದ ಸಿ.ಟಿ. ರವಿ ಪ್ರಮಾಣಪತ್ರ ವಿತರಣೆ ಮಾಡಿದ್ದಾರೆ.
ಆರಂಭದಲ್ಲೇ ಸಿಎಂ ಆದೇಶ ದಿಕ್ಕರಿಸಿದ್ದ ಕಟೀಲ್
ರಾಜ್ಯದ 47,300 ಬೂತ್ ಕಮಿಟಿಗಳಿಗೆ ಅಧ್ಯಕ್ಷರುಗಳ ಆಯ್ಕೆ ಆಗಿದೆ. 37 ಸಂಘಟನಾತ್ಮಕ ಜಿಲ್ಲೆಗಳಲ್ಲಿ 20 ಜಿಲ್ಲೆಗಳಲ್ಲಿ ಬಿಜೆಪಿ ಜಿಲ್ಲಾ ಅದ್ಯಕ್ಷರುಗಳ ನೇಮಕವೂ ಆಗಿದೆ. ಆದರೆ ಜಿಲ್ಲಾ ಘಟಕಗಳಿಗೆ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಭಿನ್ನಮತ ಬಹಿರಂಗವಾಗಿತ್ತು.
ಕೆಜೆಪಿಯಿಂದ ಬಿಜೆಪಿಗೆ ಬಂದವರಿಗೆ ಹಿಂದೆ ಬಿಜೆಪಿ ಅಧ್ಯಕ್ಷರಾಗಿದ್ದ ಯಡಿಯೂರಪ್ಪ ಆಧ್ಯತೆ ಕೊಟ್ಟಿದ್ದಾರೆ ಎಂಬ ಆರೋಪವನ್ನು ಬಿಜೆಪಿ ನಾಯಕರೇ ಮಾಡಿದ್ದರು. ಅದರ ಸಾಕಷ್ಟು ಪರಿಣಾಮ ನಂತರ ನಡೆದಿದ್ದ ವಿಧಾನಸಭಾ ಚುನಾವಣೆ ಫಲಿತಾಂಶದ ಮೇಲೆ ಆಗಿತ್ತು ಅಂತಾ ಬಿಜೆಪಿ ನಾಯಕರೇ ಹೇಳಿದ್ದರು.
ನಂತರ ಕಟೀಲ್ ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಬಿಬಿಎಂಪಿ ಮೇಯರ್ ಆಯ್ಕೆ ಚುನಾವಣೆ ಸಂದರ್ಭದಲ್ಲಿಯೂ ಅಭ್ಯರ್ಥಿ ಆಯ್ಕೆ ಕುರಿತಂತೆ ಕಟೀಲ್ ಬಹಿರಂಗ ಹೇಳಿಕೆ ಮೂಲಕ ಸಿಎಂ ಯಡಿಯೂರಪ್ಪ ಅವರ ನಿರ್ಧಾರಗಳನ್ನು ಪ್ರಶ್ನೆ ಮಾಡಿದ್ದರು. ಇದೀಗ ಮುಂದಿನ ಮೂರು ವರ್ಷಗಳ ಅವಧಿಗೆ ಕಟೀಲ್ ಅಧ್ಯಕ್ಷರಾಗಿದ್ದಾರೆ. ಮುಂದೆ ಸರ್ಕಾರ ಹಾಗೂ ಪಕ್ಷದ ಮಧ್ಯೆ ಕೊಂಡಿಯಂತೆ ಕಟೀಲ್ ಕೆಲಸ ಮಾಡ್ತಾರಾ ನೋಡಬೇಕಿದೆ.