ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ : ಯಾರು, ಏನು ಹೇಳಿದರು?
ಬೆಂಗಳೂರು, ಅಕ್ಟೋಬರ್ 12 : ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ರಾಜೀನಾಮೆಯನ್ನು ಇನ್ನೂ ರಾಜ್ಯಪಾಲರು ಅಂಗೀಕಾರ ಮಾಡಿಲ್ಲ. ಸಚಿವರ ರಾಜೀನಾಮೆ ಬಗ್ಗೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.
ಕೊಳ್ಳೇಗಾಲ ಕ್ಷೇತ್ರದ ಬಿಎಸ್ಪಿ ಶಾಸಕ ಎನ್.ಮಹೇಶ್ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಗುರುವಾರ ಸಂಜೆ ಅವರು ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದರು.
ಸಚಿವ ಸ್ಥಾನಕ್ಕೆ ಎನ್.ಮಹೇಶ್ ರಾಜೀನಾಮೆ, ಮೈತ್ರಿ ಸರ್ಕಾರಕ್ಕೆ ಪೆಟ್ಟು
'ಕ್ಷೇತ್ರಕ್ಕೆ ಮತ್ತು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಹೆಚ್ಚು ಗನಮ ನೀಡಬೇಕು ಎಂಬ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ' ಎಂದು ಎನ್.ಮಹೇಶ್ ಹೇಳಿದ್ದಾರೆ. ಆದರೆ, ಪಕ್ಷದ ಕಾರ್ಯಕರ್ತರು, ಮುಖಂಡರು ಇದನ್ನು ನಂಬುತ್ತಿಲ್ಲ.
ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆ ಬಿಎಸ್ಪಿಯ ಎನ್.ಮಹೇಶ್?
ವಿರೋಧ ಪಕ್ಷ ಬಿಜೆಪಿ ಸಚಿವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದೆ. 'ಮಹೇಶ್ ರಾಜೀನಾಮೆ ವಿಚಾರಕ್ಕೂ ನಮಗೂ ಸಂಬಂಧವಿಲ್ಲ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ರಾಜೀನಾಮೆ ಬಗ್ಗೆ ಯಾರು, ಏನು ಹೇಳಿದರು? ನೋಡೋಣ ಬನ್ನಿ....
ಸಂಪುಟ ವಿಸ್ತರಣೆ ಜೊತೆ ಹಲವು ಸಚಿವರ ಖಾತೆ ಬದಲಾವಣೆ
ಎಚ್.ಡಿ.ರೇವಣ್ಣ ಹೇಳಿದ್ದೇನು?
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು, 'ಎನ್.ಮಹೇಶ್ ಅವರು ಒಳ್ಳೆಯ ವ್ಯಕ್ತಿ. ಮೂರು ತಿಂಗಳಿನಲ್ಲಿಯೇ ಇಲಾಖೆಯಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ವೈಯಕ್ತಿಕ ಕಾರಣ, ಪಕ್ಷದ ಹಿತದೃಷ್ಟಿಯಿಂದ ರಾಜೀನಾಮೆ ನೀಡಿದ್ದಾರೆ. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಮೇಲಿನ ಬೇಸರದಿಂದ ರಾಜೀನಾಮೆ ನೀಡಿಲ್ಲ' ಎಂದು ಹೇಳಿದರು.
ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಎನ್.ಮಹೇಶ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ರಾಜೀನಾಮೆ ವಿಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಯಾವುದಾದದರೂ ಒಂದು ಕಾರಣಕ್ಕೆ ಸರ್ಕಾರ ಬಿದ್ದರೆ ಮುಂದೆ ನೋಡೋಣ. ರಾಜೀನಾಮೆ ವೈಯಕ್ತಿಕ ವಿಚಾರ. ರಾಜೀನಾಮೆಗೆ ವಿಶೇಷ ಕಾರಣ ಏನು ಎಂದು ತಿಳಿದಿಲ್ಲ' ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.
ಪಕ್ಷ ಸಂಘಟನೆಗಾಗಿ ರಾಜೀನಾಮೆ
'ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಭಿನ್ನಮತ ಮತ್ತು ಅಸಮಾಧಾನವಿಲ್ಲ. ಎನ್.ಮಹೇಶ್ ಅವರು ಪಕ್ಷ ಸಂಘಟನೆಗಾಗಿ ರಾಜೀನಾಮೆ ನೀಡಿದ್ದಾರೆ. ಅವರಿಗೆ ಸಚಿವ ಸ್ಥಾನ ನಿಭಾಯಿಸಲು ಆಗಲಿಲ್ಲ ಅನ್ನೋದು ಸುಳ್ಳು. ನಾಲ್ಕು ತಿಂಗಳಿನಲ್ಲಿ ಕೊಟ್ಟ ಎಲ್ಲಾ ಕೆಲಸಗಳನ್ನು ಅವರು ನಿಭಾಯಿಸಿದ್ದಾರೆ. ರಾಜೀನಾಮೆಗೆ ಕಾರಣವನ್ನೂ ಅವರೇ ಕೊಟ್ಟಿದ್ದಾರೆ' ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಮೈತ್ರಿ ಸರ್ಕಾರ ಬೀಳುವ ಮೊದಲ ಹೆಜ್ಜೆ
'ಎನ್.ಮಹೇಶ್ ಅವರು ರಾಜೀನಾಮೆ ನೀಡಿರುವುದು ರಾಜ್ಯದಲ್ಲಿ ಮೈತ್ರಿ ಸರ್ಕಾರ ಬೀಳುವುದಕ್ಕೆ ಮೊದಲ ಹೆಜ್ಜೆಯಾಗಿದೆ. ಯಾವ ಕ್ಷಣದಲ್ಲಿ ಏನು ಆಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಸಂಪುಟ ವಿಸ್ತರಣೆ ಆದ ಕೂಡಲೇ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ' ಎಂಮದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದರು.
ಜಿ.ಟಿ.ದೇವೇಗೌಡ ಹೇಳುವುದೇನು?
'ಸಮ್ಮಿಶ್ರ ಸರ್ಕಾರದಲ್ಲಿ ಹಲವು ಬೆಳವಣಿಗೆ ನಡೆಯುತ್ತಿವೆ ಎಂಬುದು ಸುಳ್ಳು. ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿಲ್ಲ. ಎನ್.ಮಹೇಶ್ ರಾಜೀನಾಮೆಗೂ ಆಪರೇಷನ್ ಕಮಲದಂತಹ ಚಟುವಟಿಕೆಗೂ ಯಾವುದೇ ಸಂಬಂಧವಿಲ್ಲ' ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.