ಅಟಲ್ ಆತ್ಮಕ್ಕೆ ಶಾಂತಿ ನೀಡಲೆಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ
ಮೈಸೂರು, ಆಗಸ್ಟ್ 16: ಅಜಾತ ಶತ್ರು ವಾಜಪೇಯಿ ಸುಮಾರು 50 ವರ್ಷಗಳ ಕಾಲ ಸ್ವಚ್ಛ ರಾಜಕೀಯ ಬದುಕು ಕಂಡ ಕವಿ ಹೃದಯದ ಶ್ರೇಷ್ಠ ವಾಗ್ಮಿ, ಚಿಂತಕ, ಮಾನವತಾವಾದಿ. ರಾಜಕೀಯ ಮುತ್ಸದ್ದಿಯಾಗಿ, ಕವಿಯಾಗಿ, ಶ್ರೇಷ್ಟ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರ.
ಅವರ ಆದರ್ಶ ಹಾಗೂ ಪ್ರಾಮಾಣಿಕ ಜೀವನ ಇಂದಿನ ರಾಜಕಾರಣಿಗಳಿಗೆ ಮಾದರಿ. ಅವರ ದೇಶ ಪ್ರೇಮ ಮತ್ತು ನಿಷ್ಕಳಂಕ ವ್ಯಕ್ತಿತ್ವ ನಮಗೆಲ್ಲರಿಗೂ ಆದರ್ಶ. ಸುಮಾರು ಐದು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಪ್ರಸಿದ್ದವಾದವರು ವಾಜಪೇಯಿಯವರು ಇಂದು ನಮ್ಮನ್ನು ಅಗಲಿರುವುದು ದೇಶದ ಜನತೆಗೆ ತುಂಬಲಾರದ ನಷ್ಟವಾಗಿದೆ ಎಂದು ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ವಿಷಾದ ವ್ಯಕ್ತ ಪಡಿಸಿದ್ದಾರೆ.
ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ
ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ದೇಶದ ನಾಲ್ಕೂ ಮೂಲೆಗಳಿಗೂ ಸಂಪರ್ಕ ಕಲ್ಪಿಸುವ ಭಾರತಾಂಬೆಯ ಕೊರಳಿಗೆ ಹಾರ ಹಾಕುವ ರೀತಿಯಂತೆ ಯೋಜಿಸಲಾದ " ಗಾರ್ಲಂಡ್ ಪ್ರಾಜೆಕ್ಟ್" ಎಂದೇ ಖ್ಯಾತಿ ಪಡೆದಿದ್ದ 15 ಸಾವಿರ ಕಿ.ಮೀ. ಉದ್ದದ "ಸುವರ್ಣ ಚತುಷ್ಪಥ" ಹೆದ್ದಾರಿಯನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸಿದ ವಾಜಪೇಯಿಯವರ ಸಾಧನೆ ಅಸಾಮಾನ್ಯವಾದುದು.
ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯನ್ನು ಜಾರಿಗೆ ತರುವ ಮೂಲಕ ಹಳ್ಳಿಹಳ್ಳಿಗಳಿಗೂ ರಸ್ತೆಯನ್ನು ಒದಗಿಸಿದ್ದು, 'ಸರ್ವ ಶಿಕ್ಷಾ ಅಭಿಯಾನ' ಮೂಲಕ ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡಲು ಮುಂದಾಗಿದ್ದ ವಾಜಪೇಯಿಯವರ ದೂರದೃಷ್ಟಿತ್ವದ ಫಲವಾಗಿದೆ.
ಮದುವೆಗೆ ಸಮಯವೇ ಸಿಗದ ವಾಜಪೇಯಿ, ಇಷ್ಟ- ಕಷ್ಟದ ಸಂಗತಿಗಳ ಪ್ರಶ್ನೋತ್ತರ
ಸುವರ್ಣ ಚತುಷ್ಪಥ ಯೋಜನೆಯ ಬೆನ್ನಲ್ಲೇ ಉತ್ತರ ಭಾರತದ 14 ನದಿಗಳನ್ನು ದಕ್ಷಿಣ ಭಾರತದ 16 ನದಿಗಳೊಂದಿಗೆ ಜೋಡಿಸುವ ಯೋಜನೆಯಾದ ರಾಷ್ಟ್ರೀಯ ನದಿ ಜೋಡಣೆ ಯೋಜನೆಗೆ ರೂಪುರೇಷೆ ಸಿದ್ದ ಪಡಿಸಿದ್ದ ಅವರು 2004 ರಲ್ಲಿ ಕಾಮಗಾರಿ ಆರಂಭಗೊಂಡು 2016ರಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸಮಯ ನಿಗದಿ ಪಡಿಸಿದ್ದರು.
1939ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸೇರ್ಪಡೆಯಾಗಿ, 1942ರಲ್ಲಿ ಕ್ವಿಟ್ ಇಂಡಿಯ ಚಳವಳಿಯ ಮೂಲಕ, ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ನಿಕಟವರ್ತಿಯಾಗಿ ಬೆಳೆದು, 1957 ರಲ್ಲಿ ಮೊದಲ ಬಾರಿಗೆ ಲೋಕ ಸಭೆಯ ಸದಸ್ಯರಾಗಿ ಆಯ್ಕೆಯಾಗಿ ಭಾರತೀಯ ರಾಷ್ಟ್ರ ರಾಜಕಾರಣದಲ್ಲಿ ಸಭ್ಯ, ಗೌರವಾನ್ವಿತ ಮುತ್ಸದ್ದಿ ಎಂದು ತಮ್ಮ ರಾಜಕೀಯ ವಿರೋಧಿಗಳಿಂದಲೇ ಕರೆಸಿ ಕೊಂಡವರು ಅಟಲ್ ಬಿಹಾರಿ ವಾಜಪೇಯಿಯವರು.
ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು
1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಪಾಲಾಗಿದ್ದರು. 1977 ರಲ್ಲಿ ಜನತಾ ಸಂಘದ ಮೊದಲ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ಆಯ್ಕೆಯಾಗಿ ಅದೇ ವರ್ಷ ಅಮೆರಿಕದ ಅಸೆಂಬ್ಲಿ ಉದ್ದೇಶಿಸಿ ಮಾತನಾಡಿದ್ದು ಆ ಸಂದರ್ಭದಲ್ಲಿ ಹಿಂದಿಯಲ್ಲಿ ಅಮೆರಿಕದ ಅಸೆಂಬ್ಲಿಯನ್ನ ಉದ್ದೇಶಿಸಿ ಮಾತನಾಡಿದ ಏಕೈಕ ಭಾರತೀಯ ವಾಜಪೇಯಿರವರು ಇಹಿತಿಹಾಸ ನಿರ್ಮಿಸಿದ್ದರು.
ಈ ದೇಶದ ಮಹಾ ಚೈತನ್ಯವಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರ ದೇಶದ ಪ್ರಗತಿ ಹಾದಿಯಲ್ಲಿ ಕಂಡ ಕನಸು ನನಸಾಗಲಿ ಮತ್ತು ಇವರ ಅಪಾರ ಅಭಿಮಾನಿಗಳಿಗೆ, ಬಂದು-ಮಿತ್ರರಿಗೆ ದುಃಖ ಭರಿಸುವ ಶಕ್ತಿ ಹಾಗೂ ಇವರ ಆತ್ಮಕ್ಕೆ ಶಾಂತಿ ನೀಡಲೆಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಮೈಸೂರು, ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಹೇಳಿದ್ದಾರೆ.