ಮೈಲಾರನ ಸನ್ನಿಧಿಯಲ್ಲಿ ಗೊರವಯ್ಯ ನುಡಿದ ಭವಿಷ್ಯ
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ನೈಋತ್ಯಕ್ಕಿರುವ ಮೈಲಾರ ಲಿಂಗೇಶ್ವರ ದೇವಾಲಯಕ್ಕೆ ಶತ ಶತಮಾನಗಳ ಇತಿಹಾಸವಿದೆ. ತುಂಗಭದ್ರಾ ನದಿ ತಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಈ ದೇವಾಲಯದಲ್ಲಿ ಶಿವನನ್ನು ಆರಾಧಿಸಲಾಗುತ್ತದೆ.
ಕುರುಬ ಗೌಡ ಸಮುದಾಯದರು ಆರಾಧಿಸುವ ಈ ಶಿವನ ಸನ್ನಿಧಿಯಲ್ಲಿ ನಡೆಯುವ ವಾರ್ಷಿಕ ಕಾರ್ಣಿಕೋತ್ಸವ ಜಗತ್ಪ್ರಸಿದ್ದ. ಹಾಗೇ, ಒಂದೇ ವಾಕ್ಯದಲ್ಲಿ ಗೊರವಯ್ಯ ನುಡಿಯುವ ಭವಿಷ್ಯ ಕೂಡಾ ಅಷ್ಟೇ ಹೆಸರುವಾಸಿ. (ವಿಭಿನ್ನ ಭವಿಷ್ಯ ನುಡಿದ ಕೋಡಿಶ್ರೀಗಳು)
ಕ್ಷೇತ್ರದ ಬಗ್ಗೆ: ಈ ಕ್ಷೇತ್ರಕ್ಕಿರುವ ಪೌರಾಣಿಕ ಹಿನ್ನಲೆ ಏನಂದರೆ, ಹಿಂದೆ ಮಲ್ಲಾಸುರ ಮತ್ತು ಮಣಿಕಾಸುರ ರಾಕ್ಷಸ ಸಹೋದರರು ಸುಧೀರ್ಘ ತಪಸ್ಸು ನಡೆಸಿ ಮಾನವನಿಂದ ಮರಣ ಬಾರದಂತೆ ಬ್ರಹ್ಮ ದೇವರಿಂದ ವರವನ್ನು ಪಡೆದಿರುತ್ತಾರೆ.
ವರ ಪಡೆದ ನಂತರ ಸಮಾಜ ಕಂಟಕರಾದಾಗ ಮುನಿಗಳು ಶಿವನ ಮೊರೆ ಹೋಗುತ್ತಾರೆ. ಶಿವ ಮೈಲಾರನ ಅವತಾರ ತಾಳಿ ಏಳು ಕೋಟಿ ಗೊರವರನ್ನು ಕಟ್ಟಿಕೊಂಡು ಈ ರಾಕ್ಷಸರ ವಿರುದ್ದ ಯುದ್ದಕ್ಕೆ ನಿಲ್ಲುತ್ತಾನೆ. ಹತ್ತು ದಿನಗಳ ಯುದ್ದದ ನಂತರ ಮೈಲಾರ (ಶಿವ) ತನ್ನ ಶಕ್ತಿಯನ್ನು ಕಳೆದುಕೊಂಡು ಯುದ್ದರಂಗದಿಂದ ಕಾಲ್ಕಿತ್ತು ತುಂಗಭದ್ರಾ ನದಿಯಲ್ಲಿ ಅವಿತು ಕೊಳ್ಳುತ್ತಾನೆ.
ಅಲ್ಲಿ ಶಿವನ ಗಣಗಳಲ್ಲಿ ಒಂದಾದ ವೀರಭದ್ರನು ತನ್ನ ಕೇಶವನ್ನು ನೆಲಕ್ಕೆ ಸ್ಪರ್ಶಿಸಿದಾಗ ಪಂಚ ಯುದ್ದ ವೀರರು ಹುಟ್ಟಿಕೊಳ್ಳುತ್ತಾರೆ. ಅದರಲ್ಲಿ ಒಬ್ಬ ಕಂಚವೀರ. ಈತ ಇಬ್ಬರು ರಾಕ್ಷಸರನ್ನು ಸೋಲಿಸಿ ಮೈಲಾರನಿಗೆ ಒಪ್ಪಿಸುತ್ತಾನೆ. (ಮುಂದಿನ ಪ್ರಧಾನಿ ಯಾರು, ಭವಿಷ್ಯ)
ಮೈಲಾರ ಈ ಇಬ್ಬರೂ ರಾಕ್ಷಸರನ್ನು ಸಂಹರಿಸುತ್ತಾನೆ. ಅಂತೆಯೇ, ಶಿವ ಮೈಲಾರನ ರೂಪದಲ್ಲಿ ಗೊರವರ ಜೊತೆ ಯುದ್ದಕ್ಕೆ ಬಂದಿದ್ದರಿಂದ ಈ ಸಮುದಾಯದವರೊಬ್ಬರು ಕಟ್ಟುನಿಟ್ಟಿನ ವೃತಾಚರಣೆ ನಡೆಸಿ ಮೈಲಾರ ಉತ್ಸವದ ಕೊನೆಯ ದಿನ ದೈವವಾಣಿ ನುಡಿಯುವುದು ಸಂಪ್ರದಾಯ. ಶಿವನೇ ಇವರ ರೂಪದಲ್ಲಿ ಕಾಣಿಸಿಕೊಂಡು ಭವಿಷ್ಯ ನುಡಿಯುತ್ತಾನೆ ಎನ್ನುವುದೂ ನಂಬಿಕೆ.
ಗೊರವಯ್ಯ ಇದುವರೆಗೆ ನುಡಿದ ಭವಿಷ್ಯ, ಅದು ನಿಜವಾಯಿತೇ? ಈ ಬಾರಿ ನುಡಿದ ಭವಿಷ್ಯದ ಕುತೂಹಲಕಾರಿ ಸಂಗತಿ ಸ್ಲೈಡಿನಲ್ಲಿ...
ಗೊರವಯ್ಯ ಭವಿಷ್ಯವಾಣಿಯ ಮೊದಲು
ಭವಿಷ್ಯವಾಣಿ ನುಡಿಯುವ ಕಾರ್ಣಿಕೋತ್ಸವದ ಮೊದಲು ಗೊರವಯ್ಯ ಒಂಬತ್ತು ದಿನಗಳ ಕಟ್ಟುನಿಟ್ಟಿನ ಉಪವಾಸ, ಜಪ, ತಪದಲ್ಲಿರುತ್ತಾನೆ. ತದನಂತರ ಕ್ಷೇತ್ರದ ಧರ್ಮದರ್ಶಿ ಯವರೊಂದಿಗೆ ಮತ್ತು ವಿಜಯನಗರದ ಅರಸರು ಅರ್ಪಿಸಿದ್ದ ಮೂರ್ತಿಯೊಂದಿಗೆ ಕುದುರೆ ಏರಿ ಡಂಕನಮರಡಿ ಎನ್ನುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಧರ್ಮದರ್ಶಿಗಳಿಂದ ಬಂಡಾರದ ಆಶೀರ್ವಾದ ಪಡೆದು ಕ್ಷೇತ್ರದ ಪರಂಪರೆಯಂತೆ 15 ಅಡಿ ಎತ್ತರದ ಬಿಲ್ಲುಗಂಬವನ್ನು ಸರ ಸರನೇರಿ, ಆಕಾಶವನ್ನು ನೋಡುತ್ತಾ ಒಂದು ವಾಕ್ಯದ ಭವಿಷ್ಯವನ್ನು ನುಡಿಯುತ್ತಾನೆ.
ಕೆಂಪು ಕೆಂಪು ನೊಣಗಳಿಗೆ ತೊಂದರೆ
ಕ್ಷೇತ್ರದ ಈಗಿನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಪ್ರಕಾರ ಈ ಹಿಂದೆ " ಕೆಂಪು ನೊಣಕ್ಕೆ ತೊಂದರೆ ಆದೀತಲೇ ಪರಾಕ್" ಎಂದು ಭವಿಷ್ಯ ನುಡಿದ್ದಿದ್ದರಂತೆ. ಅದರಂತೆ ಆ ವರ್ಷದಲ್ಲಿ (1857) ಸಿಪಾಯಿದಂಗೆ ನಡೆದು ಮೊದಲ ಬಾರಿಗೆ ಬ್ರಿಟಿಷರು (ಕೆಂಪುನೊಣ) ಹಿನ್ನಡೆ ಅನುಭವಿಸಿದರಂತೆ.
ಆಕಾಶಕ್ಕೆ ಮಬ್ಬು ಕವಿತಲೇ
"ಆಕಾಶಕ್ಕೆ ಮಬ್ಬು ಕವಿತಲೇ ಪರಾಕ್" ಎಂದು ಭವಿಷ್ಯ ನುಡಿದಿದ್ದಾಗ ಅಂದಿನ ಪ್ರಧಾನಿ ಇಂದಿರಾ ಗಾಂಧಿ (1984) ಅವರನ್ನು ದಾರುಣವಾಗಿ ಹತ್ಯೆಗೈಯಲಾಗಿತ್ತು.
ಮುತ್ತು ಒಡೆದು ಮೂರು ಭಾಗ
"ಮುತ್ತು ಒಡೆದು ಮೂರು ಭಾಗವಾದೀತಲೇ ಪರಾಕ್" ಎಂದು ಗೊರವಯ್ಯ ಭವಿಷ್ಯ ನುಡಿದ ವರ್ಷದಲ್ಲಿ (1991) ಪ್ರಧಾನಿ ರಾಜೀವ್ ಗಾಂಧಿ ಅವರು ಪೆರಂಬದೂರಿನಲ್ಲಿ ಬಾಂಬ್ ಸ್ಫೋಟಕ್ಕೆ ಬಲಿಯಾಗಿದ್ದರು. ಸ್ಪೋಟದಲ್ಲಿ ರಾಜೀವ್ ಗಾಂಧಿ ದೇಹ ಮೂರು ಭಾಗವಾಗಿತ್ತು.
ಈ ಬಾರಿ ನುಡಿದ ಭವಿಷ್ಯವೇನು?
ಈ ಬಾರಿ ಗೊರವಪ್ಪನ ಅನಾರೋಗ್ಯದಿಂದಾಗಿ ಅವರ ಹಿರಿಯ ಮಗ ಮಂಜಪ್ಪ ಸ್ವಾಮಿ ಕಾರ್ಣಿಕೋತ್ಸವದಲ್ಲಿ ಭವಿಷ್ಯ ನುಡಿದರು. "ತುಂಬಿದ ಕೊಡ ಮೂರು ಭಾಗವಾದೀತಲೇ ಪರಾಕ್" ಎಂದು ದೈವವಾಣಿ ನುಡಿದು ಬಿಲ್ಲುಗಂಬದಿಂದ ಜಿಗಿದಿದ್ದಾರೆ. ರಾಜಕೀಯ ಪಕ್ಷದವರೂ ದೈವವಾಣಿಯನ್ನು ತಮ್ಮ ತಮ್ಮ ಅನುಕೂಲಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುತ್ತಿದ್ದಾರೆ. ಆದರೆ ಈ ವರ್ಷ ಮಳೆ ಬೆಳೆ ಹೆಚ್ಚಾಗಿ, ರಾಜಕೀಯ ಪಕ್ಷಗಳ ಆಂತರಿಕ ಜಗಳದಿಂದ ಇಬ್ಬಾಗವಾಗಲಿದೆ ಎನ್ನುವುದು ಜನರು ಅರ್ಥೈಸಿಕೊಂಡ ರೀತಿ.