ನನ್ನ ಮಗ ನನ್ನ ಮಾತು ಕೇಳುತ್ತಿಲ್ಲ: ಬಚ್ಚೇಗೌಡ ಹೇಳಿಕೆಯ ಹಿಂದೆ ಬಿಜೆಪಿಗೆ ಸ್ಪಷ್ಟ ಸಂದೇಶ
ಭಗೀರಥ ಪ್ರಯತ್ನದ ನಂತರ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದ ಬಿಜೆಪಿ, ಸದ್ಯ ಉಪಚುನಾವಣೆಯನ್ನು ಸಮರ್ಥವಾಗಿ ಎದುರಿಸಲೇ ಬೇಕಾದ ಅನಿವಾರ್ಯತೆಯಲ್ಲಿದೆ.
ಹದಿನೈದು ಕ್ಷೇತ್ರಗಳ ಪೈಕಿ ಪಕ್ಷಕ್ಕೆ ಕಗ್ಗಂಟಾಗಿ ಪರಿಣಮಿಸಿರುವುದು ಹೊಸಕೋಟೆ. ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್ ಕುಟುಂಬ, ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿರುವುದೇ ಇದಕ್ಕೆ ಕಾರಣ.
ಹೊಸಕೋಟೆ ಕ್ಷೇತ್ರ ಟಿಕೆಟ್ ಬಿಕ್ಕಟ್ಟು: ಬಿಜೆಪಿಯಲ್ಲಿ ಕೆಂಪು ಬಾವುಟ
ಈ ಎರಡು ಕುಟುಂಬಗಳ ಸದಸ್ಯರ ಪೈಕಿ ಯಾರಿಗೆ ಟಿಕೆಟ್ ಸಿಕ್ಕರೂ, ಇನ್ನೊಬ್ಬರಿಂದ ಅಪಸ್ವರ ಏಳುವುದು ಖಂಡಿತ. ಹಾಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ, ಯಾವರೀತಿ ಈ ಕಗ್ಗಂಟಿನ ಗಂಟನ್ನು ಬಿಡಿಸುತ್ತಾರೆ ಎನ್ನುವುದು ನೋಡಬೇಕಿದೆ.
ಯಡಿಯೂರಪ್ಪ ನಿವಾಸದ ಮುಂದೆ ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ
ಈ ನಡುವೆ, ಮುಖ್ಯಮಂತ್ರಿಗಳನ್ನು ಮಂಗಳವಾರ (ಸೆ 24) ಬಚ್ಚೇಗೌಡ್ರು ಮತ್ತು ಎಂಟಿಬಿ ಭೇಟಿಯಾಗಿ ಬಂದಿದ್ದರು. ಇದರಲ್ಲಿ, ಸಿಎಂ ಭೇಟಿಯ ನಂತರ ಬಚ್ಚೇಗೌಡ್ರು ನೀಡಿದ ಹೇಳಿಕೆ ಬಿಜೆಪಿಗೆ ಸ್ಪಷ್ಟ ಸಂದೇಶವನ್ನು ರವಾನಿಸಿದಂತಿದೆ.
ಯುವ ನಾಯಕನಾಗಿ ಬೆಳೆಯುತ್ತಿರುವ ಶರತ್, ಉಪಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿ
ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಚ್ಚೇಗೌಡ್ರ ಪುತ್ರ ಶರತ್, ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್ ವಿರುದ್ದ, 7,597 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಕ್ಷೇತ್ರದಲ್ಲಿ ಯುವ ನಾಯಕನಾಗಿ ಬೆಳೆಯುತ್ತಿರುವ ಶರತ್, ಉಪಚುನಾವಣೆಯಲ್ಲೂ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ. ಆದರೆ, ಮುಖ್ಯಮಂತ್ರಿಗಳು ಎಂಟಿಬಿ ನಾಗರಾಜ್ (ಅಥವಾ ಅವರ ಕುಟುಂಬಕ್ಕೆ) ಅವರಿಗೆ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದಾರೆ. ಇದು ಪಕ್ಷದ ಹಿರಿಯ ಮುಖಂಡ ಬಚ್ಚೇಗೌಡ್ರ ಬೇಸರಕ್ಕೂ ಕಾರಣವಾಗಿದೆ.
ಮಗನ ಮನವೊಲಿಸಿ ಎನ್ನುವ ಯಡಿಯೂರಪ್ಪನವರ ಮನವಿ
ಮಗನ ಮನವೊಲಿಸಿ ಎನ್ನುವ ಯಡಿಯೂರಪ್ಪನವರ ಮನವಿಗೆ ಬಚ್ಚೇಗೌಡ್ರು ಪ್ರತಿಕ್ರಿಯೆ ಅಷ್ಟೇನೂ ಪೂರಕವಾಗಿಲ್ಲ. ಸಿಎಂ ಭೇಟಿಯ ನಂತರ ಮಾತನಾಡಿದ ಬಚ್ಚೇಗೌಡ್ರು, " ಬಿಜೆಪಿ ಟಿಕೆಟಿಗಾಗಿ ನನ್ನ ಪುತ್ರ ಪಟ್ಟು ಹಿಡಿದಿದ್ದಾನೆ. ನಾನು ಏನೇ ಹೇಳಿದರು ಕೂಡಾ, ನನ್ನ ಮಗ ಮಾತು ಕೇಳುತ್ತಿಲ್ಲ. ಬಿಜೆಪಿ ಟಿಕೆಟ್ ಸಿಗದೇ ಹೋದಲ್ಲಿ, ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾನೆ" ಎಂದು ಬಚ್ಚೇಗೌಡ್ರು ಹೇಳಿಕೆ ನೀಡಿದ್ದಾರೆ.
ನನ್ನ ಮಗನನ್ನು ಸಮಾಧಾನ ಪಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ
' ನನ್ನ ಮಗನನ್ನು ಸಮಾಧಾನ ಪಡಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಎಂಟಿಬಿಗೆ ಟಿಕೆಟ್ ನೀಡುವುದಕ್ಕೆ ಶರತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಯಾವುದೇ ಕಾರಣಕ್ಕೂ ಚುನಾವಣೆಯಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಈ ಎಲ್ಲಾ ವಿಚಾರವನ್ನು ಮುಖ್ಯಮಂತ್ರಿಗಳಿಗೆ ಹೇಳಿದ್ದೇನೆ" ಎಂದು ಬಚ್ಚೇಗೌಡ್ರು ನೀಡಿರುವ ಹೇಳಿಕೆ, ಬಿಎಸ್ವೈಗೆ ತಲೆನೋವು ತಂದಿದೆ.
ಹೊಸಕೋಟೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್
ಇನ್ನೊಂದು ಕಡೆ ಶರತ್ ಬಚ್ಚೇಗೌಡ ಅವರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಹೊಸಕೋಟೆ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಭೈರತಿ ಕುಟುಂಬದ ಮೂಲಕ, ಶರತ್ ಅವರನ್ನು ತನ್ನತ್ತ ಸೆಳೆಯಲು ಪ್ರಯತ್ನ ನಡೆಸುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದು ಬಿಜೆಪಿಗೆ ಸಂಕಷ್ಟವನ್ನು ತಂದೊಡ್ಡುವ ಸಾಧ್ಯತೆಯಿಲ್ಲದಿಲ್ಲ.
ಎಂಟಿಬಿ ನಾಗರಾಜ್ ಸಹ ಬಿಜೆಪಿ ಟಿಕೆಟ್ಗಾಗಿ ಪಟ್ಟು
ಮತ್ತೊಂದೆಡೆ ಎಂಟಿಬಿ ನಾಗರಾಜ್ ಸಹ ಬಿಜೆಪಿ ಟಿಕೆಟ್ಗಾಗಿ ಪಟ್ಟು ಹಿಡಿದಿದ್ದು, ತಮ್ಮ ಪುತ್ರ ನಿತಿನ್ ಪುರುಷೋತ್ತಮ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮುಂದುವರೆಸಿದ್ದಾರೆ. ಎಂಟಿಬಿ ಸಿಎಂ ನಿವಾಸಕ್ಕೆ ಭೇಟಿ ನೀಡಿದ್ದು, ಟಿಕೆಟ್ಗಾಗಿ ಮಾತುಕತೆ ನಡೆಸಿದ್ದಾರೆ. ಕೊಟ್ಟ ಮಾತಿನ ಮೇಲೆ ನಿಂತುಕೊಳ್ಳಿ ಎಂದು ಯಡಿಯೂರಪ್ಪನವರಿಗೆ ತಾಕೀತು ಮಾಡಿದ್ದಾರೆ ಎನ್ನುವ ಮಾಹಿತಿಯಿದೆ.