ಗೊರವನಹಳ್ಳಿ ದೇವಸ್ಥಾನ ಮುಜರಾಯಿ ಇಲಾಖೆಗೆ?
ತುಮಕೂರು, ನ.29: ಕೊರಟಗೆರೆ ಬಳಿಯ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಮೊನ್ನೆ ಬುಧವಾರ ಕಾಲ್ತುಳಿತ ನಡೆದು ಭಕ್ತರು ಪಡಿಪಾಟಲು ಅನುಭವಿಸಿದ ಬಳಿಕ ಎಚ್ಚೆತ್ತಿರುವ ಸ್ಥಳೀಯ ಆಡಳಿತವು ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕೊರಟಗೆರೆ ತಹಸೀಲ್ದಾರ್ ರಾಮಚಂದ್ರಪ್ಪ ಅವರು ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಿದ್ದಾರೆ. ವರದಿಯ ಪ್ರಕಾರ ದೇವಾಲಯವನ್ನು ಸರಕಾರವು ಮುಜರಾಯಿ ಇಲಾಖೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. (ಎಲ್ಲಾ ದೇವರ ದಯೆ- ಅರ್ಚಕರಿಗೆ ಸೂಪರ್ ಬಂಪರ್!)
ನ. 27ರಿಂದ 29 ರವರೆಗೆ ಮಹಾಲಕ್ಷ್ಮಿ ಸನ್ನಿಧಿಯಲ್ಲಿ ಲಕ್ಷ ದಿಪೋತ್ಸವ, ರಜತ ಮಹೋತ್ಸವ, ಮುತ್ತಿನ ಪಲ್ಲಕಿ ಉತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಮಾರಂಭವನ್ನು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಮಹರ್ಷಿ ಡಾ. ಆನಂದ ಗುರೂಜಿ ಅವರು ಪಾಲ್ಗೊಂಡಿದ್ದರು.
ಭಕ್ತರಿಗೆ ಮೊನ್ನೆ ಬುಧಾವಾರ ವಿಶಿಷ್ಟ ಉಂಗುರ ನೀಡುವುದಾಗಿಯೂ, ಅದರಿಂದ ಭಕ್ತರ ಸಮಸ್ಯೆಗಳು ಪರಿಹಾರವಾಗಲಿವೆ. ದೇವಿಯ ಸನ್ನಿಧಿಯಲ್ಲಿ ಪವಾಡ ಜರುಗಲಿದೆ ಎಂದು ಹೇಳಿದ್ದರು
ಆದರೆ ಅಲ್ಲಿ ನಡೆದಿದ್ದೇ ಬೇರೆ. ಕಾಲ್ತುಳಿತ ನಡೆದು ಭಕ್ತರು ತೀವ್ರ ತೊಂದರೆ ಅನುಭವಿಸಿದ್ದರು. ಈ ಪಡಿಪಾಟಲನ್ನು ಕಣ್ಣಾರೆ ಕಂಡಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಬಿಕೆ ರಾಮಚಂದ್ರಪ್ಪ ಅವರು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವಿರುದ್ಧ ಕೊರಟಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ ಹಾಗೂ ಈ ದೇವಾಲಯವನ್ನು ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಿ ಆಡಳಿತಾಧಿಕಾರಿಯನ್ನು ನೇಮಿಸುವಂತೆಯೂ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಕೊರಟಗೆರೆಯ ಕೆಲವು ವಕೀಲರು ಕೂಡ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸದೆ ತೊಂದರೆ ಮಾಡಿದ ಶ್ರೀ ಮಹಾಲಕ್ಷ್ಮಿ ಚಾರಿಟಬಲ್ ಟ್ರಸ್ಟ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.