ಮುಜರಾಯಿ ದೇವಾಲಯಗಳ ಹುಂಡಿ ಶ್ರೀಮಂತರ ಪಾಲು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ದೇವಸ್ಥಾನಗಳಿಗೆ ಸಹಾಯಕ ಆಯುಕ್ತರಾದ ಶ್ರೀಮತಿ ಲಕ್ಷ್ಮೀರವರು ಭೇಟಿ ನೀಡಿ ಆವತಿ ತಿಮ್ಮರಾಯಸ್ವಾಮಿ, ಕೊಡಗುರ್ಕಿ ಕತ್ತಿಮಾರಮ್ಮ ದೇವಾಲಯ, ಬನ್ನಿಮಂಗಲ ಆಂಜನೇಯಸ್ವಾಮಿ, ದೇವಾಲಯ ಕಾರಹಳ್ಳಿ ಆಂಜನೇಯಸ್ವಾಮಿ ದೇವಾಲಯ, ವಿಶ್ವನಾಥಪುರ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಸುಮಾರು ಎಂಟು ದೇವಾಲಯಗಳಿಗೆ ಭೇಟಿ ನೀಡಿ ದೇವಾಲಯದ ಹುಂಡಿಗಳನ್ನು ಸೀಸ್ ಮಾಡಿ, ಇಲಾಖೆಯ ವಶಕ್ಕೆ ಪಡೆದಿದ್ದರು.
ಆದರೆ ಶ್ರಾವಣ, ಭಾದ್ರಪದ ಮಾಸದಲ್ಲಿ ಹೆಚ್ಚು ಭಕ್ತಾದಿಗಳು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ದೇವಾಲಯಗಳಲ್ಲಿ ಆದಾಯವು ಹೆಚ್ಚಿರುತ್ತದೆ ಎನ್ನುವ ಕಾರಣಕ್ಕೆ ಸ್ಥಳೀಯರು ಧಾರ್ಮಿಕ ದತ್ತಿ ಅಧಿಕಾರಿಗಳ ಆದೇಶಕ್ಕೆ ಕ್ಯಾರೇ ಎನ್ನದೇ ಖಾಸಗಿ ಹುಂಡಿಗಳನ್ನು ಇಟ್ಟುಕೊಂಡು ದೇವಾಲಯದ ಆದಾಯವನ್ನು ದುರುಪಯೋಗ ಪಡಿಸಿಕೊಂಡಿರುವ ಸುದ್ದಿ ಇದೆ.
ದೇವಾಲಯಗಳ ಸ್ಥಿತಿ-ಗತಿಗಳ ಬಗ್ಗೆ ಯಾವುದೇ ವರದಿಯನ್ನು ಸರಕಾರ ಪಡೆದಿಲ್ಲ. ರಾಜ್ಯದ 'ಎ' ಮತ್ತು 'ಬಿ' ವರ್ಗದ ದೇವಾಲಯಗಳಿಗಷ್ಟೆ ಸೀಮಿತವಾಗಿರುವ ಧಾರ್ಮಿಕ ದತ್ತಿ ಇಲಾಖೆ, ಆದಾಯ ತರುತ್ತಿರುವ ದೇವಾಲಯಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡಿದೆ. 'ಸಿ' ದರ್ಜೆಯ ದೇವಾಯಲಗಳ ಅಧ್ಯಯನ ನಡೆಸಿಲ್ಲ. ರಾಜ್ಯದಲ್ಲಿ ಸುಮಾರು ಹತ್ತು ಸಾವಿರ ದೇವಾಲಯಗಳು 'ಬಿ' ದರ್ಜೆಗೆ ಏರಿವೆ.
ಅವುಗಳ ಆದಾಯ ಸ್ಥಳೀಯ ರಾಜಕಾರಣಿಗಳು ಮತು ಶ್ರೀಮಂತ ಮುಖಂಡರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಎಚ್ಚೆತ್ತುಕೊಂಡ ಒಬ್ಬ ಮುಜರಾಯಿ ಸಹಾಯಕ ಆಯುಕ್ತರು ಕೆಲವು ದೇವಾಲಯಗಳಲ್ಲಿ ಆದಾಯ ಮೂಲವಾದ ಹುಂಡಿಗಳನ್ನು ಮುಜರಾಯಿ ವಶಕ್ಕೆ ಪಡೆದು ಹುಂಡಿಗಳ ಬೀಗವನ್ನು ಸೀಲ್ ಮಾಡಿ ಬಂದಿದ್ದರು.
ಅಂತಹ ದೇವಾಲಯಗಳಲ್ಲಿ ಸ್ಥಳೀಯ ಶ್ರೀಮಂತ ಮುಖಂಡರು ಧಾರ್ಮಿಕ ದತ್ತಿ ಇಲಾಖೆ ವಶಕ್ಕೆ ಪಡೆದ ಹುಂಡಿಗಳನ್ನು ಮರೆಮಾಡಿ ಬೇರೆ ಖಾಸಗಿ ಹುಂಡಿಗಳನ್ನಿಟ್ಟು ಹಣ ಸಂಗ್ರಹಿಸಿದ ಉದಾಹರಣೆ ಈ ಎರಡು ಮಾಸಗಳಲ್ಲಿ ನಡೆದಿದೆ. ಧಾರ್ಮಿಕ ದತ್ತಿ ಅಧಿಕಾರಿಗಳ ಗಮನಕ್ಕೆ ದೂರವಾಣಿಯ ಮೂಲಕ ಮಾಹಿತಿ ನೀಡಿದರೂ ಕಾಟಾಚಾರಕ್ಕೆ ಕಂದಾಯ ನಿರೀಕ್ಷಕರನ್ನು ಕಳುಹಿಸಿ, ಸುಮ್ಮನಾಗಿದೆ. ಅತ್ತ ಸಾರ್ವಜನಿಕರ ಹಣ ಶ್ರೀಮಂತರ ಪಾಲಾಗುವುದನ್ನು ನೋಡಿಯೂ ನೋಡದಂತೆ ಪರೋಕ್ಷವಾಗಿ ಸಹಕರಿಸಿದ್ದಾರೆ.
ಇಂತಹ ಅಧಿಕಾರ ವರ್ಗ ಹಣ ದುರುಪಯೋಗವಾಗುವುದನ್ನು ಕಣ್ಣಾರೆ ಕಂಡರೂ ಸುಮ್ಮನಿರುವುದು ಏಕೆ? ಲಕ್ಷಾಂತರ ರೂಪಾಯಿ ಹಣ ಸೋರಿಕೆಯಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರಲು ಕಾರಣವಾದರೂ ಏನು? ಧಾರ್ಮಿಕ ದತ್ತಿ ಇಲಾಖೆಯ ಜಾಣಕುರುಡು ಮಾಯವಾಗಬೇಕಿದೆ.