ಬಜೆಟ್ಟಿನಲ್ಲಿ ಮುಸ್ಲಿಂ ಸಮುದಾಯಕ್ಕೆ ಭರ್ಜರಿ ಬಳುವಳಿ
Recommended Video
ಬೆಂಗಳೂರು, ಫೆಬ್ರವರಿ 16 : ನಾವು ಯಾವುದೇ ಜಾತಿಯನ್ನು ಓಲೈಸುವುದಿಲ್ಲ, ನಮ್ಮದು ಜಾತ್ಯತೀತ ಸರಕಾರ ಎಂದು ಹೋದಲ್ಲೆಲ್ಲ ಘಂಟಾಘೋಷವಾಗಿ ಸಾರುವ ಸಿದ್ದರಾಮಯ್ಯನವರು, ಪ್ರಸ್ತುತ ಸರಕಾರದ ಕಟ್ಟಕಡೆಯ ಬಜೆಟ್ಟಿನಲ್ಲಿ ಅಲ್ಪಸಂಖ್ಯಾತರ ಪರ ತಮಗಿರುವ ಒಲವನ್ನು ಮತ್ತೆ ತೋರಿದ್ದಾರೆ.
ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ 2018ರ ದಿನಾಂಕ ಘೋಷಣೆಯಾಗುವುದೊಂದೇ ಬಾಕಿಯಿದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ಘೋಷಣೆಯಾಗುವ ಎಲ್ಲ ಸಾಧ್ಯತೆಗಳೂ ಇವೆ. ಹೀಗಿರುವಾಗ, ಸಿದ್ದರಾಮಯ್ಯನವರು ಸಹಜವಾಗಿ ಬಜೆಟ್ಟಿನಲ್ಲಿ ಚುನಾವಣಾ ದಾಳ ಉರುಳಿಸಿದ್ದಾರೆ.
Live : ಕರ್ನಾಟಕ ಬಜೆಟ್ 2018, ಮುಖ್ಯಾಂಶಗಳು
ಮುಸ್ಲಿಂ ಸಮುದಾಯ ಮಾತ್ರವಲ್ಲ, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರು, ಕ್ರೈಸ್ತ ಮತ್ತು ಸಿಖ್ ಸಮುದಾಯದವರಿಗೂ ಭರ್ಜರಿ ಬಳುವಳಿಗಳನ್ನು ನೀಡಿರುವುದನ್ನು ನೋಡಿದರೆ, ಸಿದ್ದರಾಮಯ್ಯನವರು ತಮ್ಮ ಚುನಾವಣಾ ಗೇಮ್ ಪ್ಲಾನ್ ಅನ್ನು ಚೆನ್ನಾಗಿ ಮಂಡಿಸಿದ್ದಾರೆ.
ಬಜೆಟ್ : ಸಿದ್ದು ಸರ್ಕಾರಕ್ಕೊಂದಷ್ಟು ಮೆಚ್ಚುಗೆ, ಮತ್ತಷ್ಟು ತರಾಟೆ!
ಹಾಗೆ ನೋಡಿದರೆ, ಹಿಂದೂಗಳಿಗೆ ವಿಶೇಷವಾಗಿ ಏನನ್ನೂ ಸಿದ್ದರಾಮಯ್ಯ ನೀಡಿಲ್ಲ. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಅಡಿಯಲ್ಲಿ ಬಾಧಿತ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಸನ ಎಂದು 20 ಕೋಟಿ ರುಪಾಯಿ ಮೀಸಲಿಟ್ಟಿದ್ದಾರೆ. ಇದೊಂದು ಬಿಟ್ಟರೆ ಹಿಂದೂ ಎಂಬ ಪದವೇ ಇಡೀ ಬಜೆಟ್ಟಿನಲ್ಲಿ ಎಲ್ಲೂ ಸಿಗುವುದಿಲ್ಲ.
ಅಲ್ಪಸಂಖ್ಯಾತರ ವೃತ್ತಿ ಪ್ರೋತ್ಸಾಹಕ್ಕೆ ಅನುದಾನ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ ವೃತ್ತಿ ಪ್ರೋತ್ಸಾಹ ಯೋಜನೆಯಡಿ ಭಾರೀ ಅನುದಾನವನ್ನು ಘೋಷಿಸಲಾಗಿದೆ. ವಿವಿಧ ವೃತ್ತಿಗಳಿಗೆ ಬ್ಯಾಂಕ್ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ನೀಡಲು 30 ಕೋಟಿ ರುಪಾಯಿಗಳ ಮೊತ್ತದ ಹೊಸ ಯೋಜನೆ.
ಕ್ರೈಸ್ತ, ಜೈನ ಮತ್ತು ಸಿಖ್ ಸಮುದಾಯಕ್ಕೆ 80 ಕೋಟಿ
ಕ್ರೈಸ್ತ ಸಮುದಾಯದ ಅಭಿವೃದ್ಧಿ ಹಾಗೂ ವಿವಿಧ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ 200 ಕೋಟಿ ರೂ. ಅನುದಾನ. ಜೈನ ಮತ್ತು ಸಿಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 80 ಕೋಟಿ ರೂ.ಗಳ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳ ಅನುಷ್ಠಾನ.
ದಾರುಲ್-ಉಲೂಮ್ ಕಾಲೇಜಿಗೆ ಸಮುದಾಯ ಭವನ
ದಾರುಲ್-ಉಲೂಮ್ ಸಬೀಲುರ್ ರೆಹಮಾನ್ ರಿಷಾದ್, ಅರೇಬಿಕ್ ಕಾಲೇಜು ಬೆಂಗಳೂರು ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಸೆಂಟ್ರಲ್ ಕಾಲೇಜು ವೈವಿಧ್ಯತೆ ಮತ್ತು ಅಲ್ಪಸಂಖ್ಯಾತರ ಅಧ್ಯಯನ ಪೀಠ ಸ್ಥಾಪನೆ.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ
ಅಲ್ಪಸಂಖ್ಯಾತರ ವಿದ್ಯಾರ್ಥಿನಿಲಯ/ ವಸತಿ ಶಾಖೆಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅತ್ಯುತ್ತಮ ಫಲಿತಾಂಶ ಗಳಿಸಿದ ಅಲ್ಪಸಂಖ್ಯಾತ ಸಮುದಾಯದ ವಸತಿ ಶಾಲೆ/ ಕಾಲೇಜುಗಳಿಗೆ ಪ್ರತಿಭಾ ಪುರಸ್ಕಾರ.
ಮದರಸಾಗಳ ಆಧುನೀಕರಣಕ್ಕೆ 15 ಕೋಟಿ
ಮುಸ್ಲಿಂ ಶಿಕ್ಷಣ ಸಂಸ್ಥೆ ಮದರಸಾಗಳ ಆಧುನೀಕರಣ, ಔಪಚಾರಿಕ ಶಿಕ್ಷಣ ಒದಗಿಸಲು ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಂತ ಹಂತವಾಗಿ 15 ಕೋಟಿ ರೂ.ಗಳ ಸಹಾಯಧನ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮೂಲಕ 15 ಕೋಟಿ ರೂ.ಗಳ ವೆಚ್ಚದಲ್ಲಿ ಮಹಿಳೆಯರಿಗೆ ಕಾರ್ಯಾರಂಭ (Start up) ಸಾಲ ಸೌಲಭ್ಯ ಯೋಜನೆ.
ವಕ್ಫ್ ಪರಿಷತ್ತಿಗೆ ಭರ್ಜರಿ ಬಳುವಳಿ
ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ರಜತ ಮಹೋತ್ಸವ ಅಂಗವಾಗಿ ಮುಂದಿನ 5 ವರ್ಷಗಳಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲು 2018-19ರಲ್ಲಿ ಕಾರ್ಪಸ್ ಫಂಡ್ಗೆ 20 ಕೋಟಿ ರೂ. ಅನುದಾನ.
ಮುಸ್ಲಿಂ ಬಡಾವಣೆಯ ಅಭಿವೃದ್ಧಿಗೆ 800 ಕೋಟಿ
ಮುಸ್ಲಿಂ ಸಮುದಾಯದವರೇ ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 800 ಕೋಟಿ ರುಪಾಯಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೀಸಲಿಟ್ಟಿದ್ದಾರೆ.