ಮೂರು ದಿನಗಳಲ್ಲಿ ಸ್ಫೋಟಕಗಳನ್ನು ಹಿಂದಿರುಗಿಸಲು ಗಣಿ ಇಲಾಖೆ ಸೂಚನೆ!
ಬೆಂಗಳೂರು, ಫೆ. 27: ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ಪ್ರದೇಶಗಳಲ್ಲಿ ಕಾನೂನು ಬಾಹಿರವಾಗಿ ಸ್ಪೋಟಕ ವಸ್ತುಗಳನ್ನು ಮೂರು ದಿನದೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಂದಿತಿರುಗಿಸಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿರುವ ಅವರು, ಯಾರ್ಯಾರು ತಮ್ಮ ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ನಡೆಯುವ ಸ್ಥಳಗಳಲ್ಲಿ ಸ್ಫೋಟಕ್ಕಾಗಿ ಸ್ಪೋಟಕಗಳನ್ನು ಸಂಗ್ರಹಿಸಿದ್ದೀರೊ? ಮೂರು ದಿನದಲ್ಲಿ ಹಿಂತಿರುಗಿಸದಿದ್ದರೆ ಕಾನೂನು ಕ್ರಮ ಖಚಿತ ಎಂದು ಎಚ್ಚರಿಸಿದ್ದಾರೆ.
ಈಗಾಗಲೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದ್ದು, ಕಾನೂನು ಬಾಹಿರವಾಗಿ ನಡೆಯುವ ಕಲ್ಲು ಕ್ವಾರಿಗಳ ಮೇಲೆ ಹದ್ದಿನ ಕಣ್ಣಿಡುವಂತೆ ಸೂಚನೆ ಕೊಡಲಾಗಿದೆ. ಒಂದು ವೇಳೆ ಯಾರಾದರೂ ಹಿಂತಿರುಗಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಚಿವ ನಿರಾಣಿ ಹೇಳಿದ್ದಾರೆ. ಮೂರು ದಿನಗಳ ನಂತರ ನಮ್ಮ ಇಲಾಖೆ ಅಧಿಕಾರಿಗಳು ಎಲ್ಲ ಕಡೆ ತಪಾಸಣೆ ನಡೆಸಲಿದ್ದಾರೆ. ಹಾಗೊಂದು ವೇಳೆ ಯಾರಾದರೂ ಸಂಗ್ರಹಿಸಿಟ್ಟಿಕೊಂಡಿರುವುದು ಕಂಡುಬಂದರೆ ಕ್ರಷರ್ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸ್ಫೋಟಕ ಬಳಸಲು ಅನುಮತಿ ಅಗತ್ಯ
ಇನ್ನು ಮುಂದೆ ಸ್ಫೋಟಕ ವಸ್ತುಗಳನ್ನು ಬಳಸಬೇಕಾದರೆ ಸರ್ಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು.ಇದಕ್ಕಾಗಿ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು. ಅದಕ್ಕಾಗಿ ಹೊಸ ಕಾನೂನುನನ್ನು ಕೂಡ ಜಾರಿ ಮಾಡಲಾಗುವುದು. ಶಿವಮೊಗ್ಗ ಮತ್ತು ಗುಡಿಬಂಡೆ ಘಟನೆಯ ನಂತರ ನಾವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ. ಭವಿಷ್ಯದಲ್ಲಿ ಸಣ್ಣ ಅವಘಡ ಕೂಡ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಕ್ವಾರಿ ಮಾಲೀಕರು-ನೌಕರರಿಗೆ ತರಬೇತಿ
ಶಿವಮೊಗ್ಗ ಕ್ವಾರಿಯಲ್ಲಿ ನಡೆದ ಜಿಲೆಟಿನ್ ಸೋಟ ಪ್ರಕರಣದ ಬಳಿಕ ಕ್ವಾರಿಯಲ್ಲಿ ಸಂಗ್ರಹಿಸಿದ್ದ ಸೋಟಕಗಳನ್ನು ಇಲಾಖೆಗೆ ಹಸ್ತಾಂತರಿಸುವಂತೆ ಸೂಚಿಸಲಾಗಿತ್ತು. ಸರಿಯಾದ ತರಬೇತಿ ಇಲ್ಲದೆ ಕ್ವಾರಿಗಳಲ್ಲಿ ಸೋಟಕ ಬಳಸುತ್ತಿರುವುದರಿಂದ ಇಂತಹ ದುರಂತಗಳು ನಡೆಯುತ್ತಿವೆ. ಹೀಗಾಗಿ ಕ್ವಾರಿ ಮಾಲೀಕರು ಮತ್ತು ಕೆಲಸಗಾರರಿಗೆ ಮೂರರಿಂದ ಏಳು ದಿನಗಳ ಕಾಲ ತರಬೇತಿ ನೀಡಲು ಇಲಾಖೆ ಮುಂದಾಗಿದೆ ಎಂದು ಸಚಿವ ನಿರಾಣಿ ಹೇಳಿದ್ದಾರೆ.
ಕಠಿಣ ಕಾನೂನು ಕ್ರಮ
ಅಕ್ರಮವಾಗಿ ಸೋಟಕ ಪೂರೈಸಿದ ಹಾಗೂ ಸಾಗಾಣಿಕೆ ಮಾಡಿದವರನ್ನು ಪತ್ತೆ ಮಾಡಿ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಮರಳು ಹಾಗೂ ಜಲ್ಲಿ ಕಲ್ಲು ಇಲ್ಲದೆ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆಗುವುದಿಲ್ಲ. ಮರಳು, ಜಲ್ಲಿ ಕ್ರಶರ್ ಬಂದ್ ಮಾಡಿದರೆ ಅಭಿವೃದ್ಧಿ ಕೆಲಸಗಳು ನಿಂತು ಹೋಗುತ್ತವೆ. ಸರ್ಕಾರಕ್ಕೆ ಬರುವ ಆದಾಯವನ್ನು ತಪ್ಪಿಸಿ ನಂಬರ್ 2 ನಲ್ಲಿ ಮರಳು ಹಾಗೂ ಜಲ್ಲಿ ಕಲ್ಲು ದಂಧೆ ಮಾಡುವುದನ್ನು ತಡೆದು ಸರ್ಕಾರಕ್ಕೆ ಆದಾಯ ತರುವ ನಿಟ್ಟಿನಲ್ಲಿ ಗಣಿ ನೀತಿಯನ್ನು ಸರಳೀಕರಿಸಿ ಹೊಸ ಗಣಿ ನೀತಿಯನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಸಚಿವ ನಿರಾಣಿ ವಿವರಿಸಿದರು.
ಸಭೆಯಲ್ಲಿ ಅಧಿಕಾರಿಗಳು ಭಾಗಿ
ಸಭೆಯಲ್ಲಿ ಶಾಸಕರಾದ ಬಸವರಾಜ್ ದಡೆಸೂಗೂರು, ಪರಣ್ಣಮನವಳ್ಳಿ, ಜಿಲ್ಲಾಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್, ಮುಖಂಡ ಅಮರೇಶ್ ಕರಡಿ ಮತ್ತಿತರರು ಭಾಗವಹಿಸಿದ್ದರು.