ನಾಡದೇವತೆ ತಾಯಿ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿದ ಸಚಿವ ಮುರುಗೇಶ್ ನಿರಾಣಿ!
ಬೆಂಗಳೂರು, ಸೆ. 14: ಮಂಡ್ಯದ ಮೈಶುಗರ್ ಸಕ್ಕರೆ ಕಾರ್ಖಾನೆ ವಿಚಾರ ರಾಜಕೀಯ ತಿರುವು ಪಡೆದು ಕೊಂಡಿತ್ತು. ಈ ಕಾರ್ಖಾನೆಯನ್ನು ಉದ್ಯಮಿ ಹಾಗೂ ಸಚಿವ ಮುರುಗೇಶ್ ನಿರಾಣಿ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಪಾಂಡಪುರ ಸಕ್ಕರೆ ಕಾರ್ಖಾನೆಯನ್ನು ನಿರಾಣಿ ಗ್ರೂಪ್ ಆಫ್ ಕಂಪನೀಸ್ ವಹಿಸಿಕೊಂಡ ಬಳಿಕ, ಈ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಮಂಗಳವಾರ ವಿಧಾನ ಪರಿಷತ್ನಲ್ಲಿ ಸ್ವತಃ ಬೃಹತ್ ಕೈಗಾರಿಕಾ ಸಚಿವರೂ ಆಗಿರುವ ಉದ್ಯಮಿ ಮುರುಗೇಶ್ ನಿರಾಣಿ ರೈತರಿಗೆ ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ. ಸದನದ ಮೂಲಕ ಮಾಹಿತಿ ಕೊಟ್ಟಿರುವುದರಿಂದ ಸಚಿವ ನಿರಾಣಿ ಅವರ ಮಾತಿಗೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವ ಬಂದಿದೆ.
ಮಂಡ್ಯ ಜಿಲ್ಲೆ ಮೈಸೂರು ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಸಂಬಂಧ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆ ಭಾಗದ ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆದು ಸೂಕ್ತವಾದ ತೀರ್ಮಾನವನ್ನು ಕೈಗೊಳ್ಳಲಾಗುವುದೆಂದು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರು ವಿಧಾನ ಪರಿಷತ್ನಲ್ಲಿ ಹೇಳಿದ್ದಾರೆ.
ಮಂಗಳವಾರ ನಿಯಮ 330ರ ಅಡಿ ಸದಸ್ಯರು ಪಾಂಡವಪುರ ಸಕ್ಕರೆ ಕಾರ್ಖಾನೆ ಕುರಿತಾಗಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪರವಾಗಿ ಸುದೀರ್ಘ ಉತ್ತರ ನೀಡಿದ ಸಚಿವ ನಿರಾಣಿ ಅವರು, ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆದು ಸೂಕ್ತವಾದ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಸದನಕ್ಕೆ ಆಶ್ವಾಸನೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ನಾಡ ದೇವತೆ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಮಹತ್ವದ ಮಾತೊಂದನ್ನು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿರುವುದು ಕುತೂಹಲ ಮೂಡಿಸಿದೆ.
ಮೈಶುಗರ್ ಸಕ್ಕರೆ ಕಾರ್ಖಾನೆ ಕುರಿತು ನಿರಾಣಿ ಸ್ಪಷ್ಟನೆ!
ತಮ್ಮ ಮೇಲೆ ಕೇಳಿ ಬಂದ ಆರೋಪಗಳಿಗೆ ಸದನದಲ್ಲಿ ಸ್ಪಷ್ಟನೆ ನೀಡಿದ ನಿರಾಣಿ, "ನಾನು ರೈತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಭೋಗ್ಯಕ್ಕೆ ಪಡೆದು ಪುನಾರಂಭ ಮಾಡಿದ್ದೇವೆ. ಅದರಲ್ಲೂ ನನಗೆ ಕಹಿ ಅನುಭವ ಆಗಿದೆ ಎಂದರು.
ನಾನು ನೂರಕ್ಕೆ ನೂರರಷ್ಟು ಈ ಸದನದಿಂದ ಸ್ಪಷ್ಟಪಡಿಸುವುದು ಏನೆಂದರೆ, ಯಾವುದೇ ಕಾರಣಕ್ಕೂ ಮೈ ಶುಗರ್ ಕಾರ್ಖಾನೆಗೆ ಬಿಡ್ ಮಾಡುವುದಿಲ್ಲ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದರು.
ಪಾಂಡವಪುರಕ್ಕೆ ಬಂದಾಗ ನನ್ನ ಮೇಲೆ ಹಲವು ಆಪಾದನೆ!
ಮೈ ಶುಗರ್ ಕಾರ್ಖಾನೆಯನ್ನು ನಾನು ಪಡೆಯುವ ಸಲುವಾಗಿ ಇಲ್ಲಿ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಯಾರೂ ಹೊರಗೆ ಹೋಗದ ಕಾಲದಲ್ಲಿ ನಾನು ಪಾಂಡವಪುರ ಕಾರ್ಖಾನೆಯನ್ನು ಪ್ರಾರಂಭ ಮಾಡಿದ್ದೆ. ಆದರೂ ನಮ್ಮ ಮೇಲೆ ಆಪಾದನೆಗಳು ನಿಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದುವರೆಗೆ ನನಗೆ ಬೋಗ್ಯದ ದಾಖಲಾತಿಗಳೇ ಆಗಿಯೇ ಇಲ್ಲ. ನಂಬಿಕೆಯಿಂದ ನಾನು ಪಾಂಡವಪುರ ಸಕ್ಕರೆ ಕಾರ್ಖಾನೆ ಮೇಲೆ 50 ಕೋಟಿ ರೂ. ವೆಚ್ಚ ಮಾಡಿದ್ದೇನೆ. ಲೀಸ್ ಡೀಡ್ ಇಲ್ಲದೆಯೂ ರೈತರಿಗೆ ಅನ್ಯಾಯ ಆಗಬಾರದು ಎಂದು ಕಾರ್ಖಾನೆಯನ್ನು 90 ದಿನಗಳಲ್ಲಿ ಪ್ರಾರಂಭ ಮಾಡಿದ್ದೇವೆ. ಆದರೆ ನಾನು ಪಾಂಡವಪುರಕ್ಕೆ ಬಂದಾಗ ಹಲವರು ನನ್ನ ಮೇಲೆ ಆಪಾದನೆ ಮಾಡಿದರು ಎಂದರು.
ನಾಡದೇವತೆ ಚಾಮುಂಡೇಶ್ವರಿ ಮೇಲೆ ಆಣೆ ಮಾಡಿದ ನಿರಾಣಿ!
ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭ ಮಾಡಿದಾಗ ಅದರಿಂದ ಬಂದ ಲಾಭವನ್ನು ದಕ್ಷಿಣ ಕರ್ನಾಟಕಕ್ಕೆ ಬಳಸಿಕೊಳ್ಳಲು ನಿರ್ಧಾರ ಮಾಡಿದ್ದೆ. ನಾಡದೇವತೆ ಚಾಮುಂಡೇಶ್ವರಿ ಮೇಲೆ ಆಣೆ. ಇಲ್ಲಿಂದ ಬಂದ ಲಾಭವನ್ನು ಉತ್ತರ ಕರ್ನಾಟಕಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂದು ಸಚಿವ ನಿರಾಣಿ ಹೇಳಿದ್ದಾರೆ.
ಕೆಲವರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಅನೇಕ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿದ್ದು ಬೀಗ ಹಾಕುವ ಹಂತಕ್ಕೆ ಬಂದಿವೆ. ಎಂ.ಕೆ. ಹುಬ್ಬಳ್ಳಿ, ಸಂಕೇಶ್ವರ, ರನ್ನ, ಸೇರಿದಂತೆ ಮತ್ತಿತರ ಕಾರ್ಖಾನೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಇದಕ್ಕೆಲ್ಲ ಯಾರು ಕಾರಣ? ಎಂದು ಸದನದಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಪ್ರಶ್ನೆ ಮಾಡಿದರು.
Recommended Video
ಕಾರ್ಖಾನೆ ನಡೆಸುವುದು ಮಾತನಾಡಿದಂತಲ್ಲ!
ಹೊರಗಡೆ ಮಾತನಾಡುವುದಕ್ಕೂ ಒಂದು ಕಾರ್ಖಾನೆ ನಡೆಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಪಾಂಡವಪುರ ಹಾಗೂ ಮೈಶುಗರ್ ಕಾರ್ಖಾನೆಯ ಉದ್ದೇಶವೇ ರೈತರ ಹಿತ ಕಾಪಾಡುವುದು ಎಂದರು. ಸಕಾಲದಲ್ಲಿ ರೈತರ ಕಬ್ಬನ್ನು ಅರೆದು
ಅವರಿಗೆ ಹಣ ಪಾವತಿಸಬೇಕು. ಜೊತೆಗೆ ಕಾರ್ಮಿಕರಿಗೆ ತಿಂಗಳಿಗೆ ವೇತನವನ್ನು ನೀಡಬೇಕು. ಇಷ್ಟೆಲ್ಲಾ ಮಾಡಿಯೂ ನಾವು ಸುಳ್ಳು ಆರೋಪಗಳನ್ನು ಎದುರಿಸಬೇಕು ಎಂದರು.
ನಿವೃತ್ತ ಅಧಿಕಾರಿ ರಂಗರಾಜನ್ ವರದಿಯ ಪ್ರಕಾರ ಕಾರ್ಖಾನೆ ಒಟ್ಟು ಲಾಭಂಶದಲ್ಲ ಶೇ. 75 ರಷ್ಟನ್ನು ರೈತರು, ಕಾರ್ಮಿಕರು, ಕಾರ್ಖಾನೆಯ ಪುನಶ್ಚೇತನ, ಮೂಲಭೂತ ಸೌಕರ್ಯಗಳ ಬಳಕೆಗೆ ಬಳಸಿಕೊಳ್ಳಬೇಕು. ಕೇವಲ ಸರ್ಕಾರದ ಮೇಲೆ ಅವಲಂಬಿತರಾಗದೆ, ಕಾರ್ಖಾನೆಯನ್ನು ಆಡಳಿತ ಮಂಡಳಿಯವರು ಮುನ್ನಡೆಸಬೇಕು. ಇಲ್ಲಿರುವ ಲೋಪದೋಷಗಳನ್ನು ಪತ್ತೆ ಮಾಡಿದರೆ, ಎಲ್ಲವೂ ಸರಿ ಹೋಗಲಿದೆ ಎಂದು ವಿಧಾನ ಪರಿಷತ್ನಲ್ಲಿ ಸಚಿವ ನಿರಾಣಿ ಅಭಿಪ್ರಾಯಪಟ್ಟರು.