ಬಿಜೆಪಿ ಮುಖಂಡ ಯೋಗೀಶ ಕೊಲೆ; ಸುಪಾರಿ ಹಂತಕರು ನ್ಯಾಯಾಂಗ ಬಂಧನಕ್ಕೆ
ಧಾರವಾಡ ಮಾರ್ಚ್ 7: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 6 ಸುಪಾರಿ ಹಂತಕರನ್ನು ಸಿಬಿಐ ಅಧಿಕಾರಿಗಳು ಬಿಗಿ ಭದ್ರತೆಯಲ್ಲಿ ಇಲ್ಲಿನ ಪ್ರಧಾನ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಿದ್ದರು.
ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಜಯಲಕ್ಷ್ಮೀ ಘಾನಾಪುರ ಅವರು, ಆರೋಪಿಗಳನ್ನು ಮಾ. 20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನ್ಯಾಯಾಲಯ 6 ಆರೋಪಿಗಳನ್ನು ವಿಚಾರಣೆ ನಡೆಸಿ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಶನಿವಾರ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆರು ಆರೋಪಿಗಳಾದ ದಿನೇಶ, ಅಶ್ವಥ್, ಸುನೀಲಕುಮಾರ್, ನಾಜೀರ ಅಹ್ಮದ , ಶಾನವಾಜ್ ಹಾಗೂ ನೂತನ್ ನನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಯೋಗೇಶ್ ಗೌಡ ಹತ್ಯೆ; ಸಿಬಿಐ ತನಿಖೆಗಿದ್ದ ತಡೆಯಾಜ್ಞೆ ತೆರವು
ಸಿಬಿಐ ಅಧಿಕಾರಿಗಳು ಮಾ. 2ರಿಂದ 7ರವರೆಗೆ 6 ಆರೋಪಿಗಳನ್ನು ಧಾರವಾಡ, ದಾಂಡೇಲಿ ಸೇರಿದಂತೆ ಇನ್ನೂ ಹಲವು ಅಜ್ಞಾತ ಸ್ಥಳಗಳಿಗೆ ಕರೆದೊಯ್ದು ತೀವ್ರ ವಿಚಾರಣೆಗೊಳಪಡಿಸಿದ್ದರು. 5 ದಿನಗಳ ಕಾಲ ಆರೋಪಿಗಳಿಂದ ಹತ್ಯೆಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಅಂಶಗಳನ್ನು ತನಿಖಾ ವೇಳೆ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ನ್ಯಾಯಾಲಯದ ಆದೇಶದಂತೆ ಆರೋಪಿಗಳನ್ನು ಉಪನಗರ ಪೊಲೀಸ್ ಠಾಣೆಯ ಪೊಲೀಸರ ಭದ್ರತೆಯಲ್ಲಿ ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಯಿತು.