ಸಿದ್ದರಾಮಯ್ಯ ಭೇಟಿ ಮಾಡಿದ ಶಾಸಕ ಎಂ.ಟಿ.ಬಿ.ನಾಗರಾಜ್
Recommended Video
ಬೆಂಗಳೂರು, ಸೆಪ್ಟೆಂಬರ್ 25 : ಕಾಂಗ್ರೆಸ್ ಶಾಸಕ ಎಂ.ಟಿ.ಬಿ.ನಾಗರಾಜ್ ಮನವೊಲಿಸುವ ಕಾರ್ಯ ಇನ್ನೂ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾಗಬೇಕು ಎಂದು ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಪ್ರಯತ್ನ ನಡೆಸುತ್ತಿದ್ದಾರೆ.
ಮಂಗಳವಾರ ಎಂ.ಟಿ.ಬಿ.ನಾಗರಾಜ್ ಅವರು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೂಚನೆಯಂತೆ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.
ಸಚಿವ ಸಂಪುಟ ವಿಸ್ತರಣೆಗೆ ಸಿದ್ದರಾಮಯ್ಯ 4 ಸೂತ್ರಗಳು!
ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಎಂ.ಟಿ.ಬಿ.ನಾಗರಾಜ್ ಅವರು, 'ಸಚಿವ ಸ್ಥಾನದ ಬಗ್ಗೆ ಅಸಮಾಧಾನವಿಲ್ಲ. ಸಚಿವ ಸ್ಥಾನ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ನಮ್ಮಲ್ಲಿ ಅನುದಾನ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನವಿದೆ' ಎಂದು ಹೇಳಿದರು.
ಜಮೀರ್ ಅಹಮದ್ ಕಾಂಗ್ರೆಸ್ನ ಹೊಸ ಟ್ರಬಲ್ ಶೂಟರ್
ಸಿದ್ದರಾಮಯ್ಯ ಭೇಟಿ ನಂತರ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಎಂ.ಟಿ.ಬಿ.ನಾಗರಾಜ್ ತೆರಳಿದರು. ಶಾಸಕರು ಬೆಂಗಳೂರಿನಲ್ಲಿ ಇಷ್ಟೊಂದು ನಾಯಕರನ್ನು ಭೇಟಿ ಆಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪರಿಷತ್ ಚುನಾವಣೆ ಮುಗಿವವರೆಗೆ ಸಂಪುಟ ವಿಸ್ತರಣೆ ಇಲ್ಲ, ನಿಜ ಕಾರಣವೇನು?
ಹೈಕಮಾಂಡ್ಗೆ ಬಿಟ್ಟ ವಿಚಾರ
ಸಿದ್ದರಾಮಯ್ಯ ಅವರನ್ನು ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಮಾತನಾಡಿದ ಎಂ.ಟಿ.ಬಿ.ನಾಗರಾಜ್ ಅವರು, 'ನಮ್ಮಲ್ಲಿ ಅನುದಾನ ಮತ್ತು ಅಭಿವೃದ್ಧಿ ವಿಚಾರದಲ್ಲಿ ಅಸಮಾಧಾನವಿದೆ. ಸಚಿವ ಸ್ಥಾನದ ಬಗ್ಗೆ ಅಸಮಾಧಾನವಿಲ್ಲ. ಸಚಿವ ಸ್ಥಾನ ನೀಡುವುದು ಹೈಕಮಾಂಡ್ಗೆ ಬಿಟ್ಟ ವಿಚಾರ. ವೇಣುಗೋಪಾಲ್ ಅವರು ಸಿದ್ದರಾಮಯ್ಯ ಭೇಟಿಯಾಗಲು ಸೂಚಿಸಿದ್ದರು. ಆದ್ದರಿಂದ ಭೇಟಿ ಮಾಡಿದ್ದೆ' ಎಂದರು.
ಹೊಸಕೋಟೆ ನಿವಾಸಕ್ಕೆ ತೆರಳಿದ್ದರು
ಸಚಿವ ಸ್ಥಾನದ ಬೇಡಿಕೆ ಮುಂದಿಟ್ಟುಕೊಂಡು ಅಸಮಾಧಾನಗೊಂಡಿರುವ ಎಂ.ಟಿ.ಬಿ.ನಾಗರಾಜ್ ಅವರನ್ನು ಸಮಾಧಾನಪಡಿಸಲು ಹಲವು ಸಚಿವರು ಪ್ರಯತ್ನ ನಡೆಸಿದ್ದಾರೆ. ಭಾನುವಾರ ಡಿ.ಕೆ.ಶಿವಕುಮಾರ್, ಕೃಷ್ಣ ಬೈರೇಗೌಡ, ಜಮೀರ್ ಅಹಮದ್ ಖಾನ್ ನಾಗರಾಜ್ ಅವರ ಹೊಸಕೋಟೆ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು.
ಕೆ.ಸಿ.ವೇಣುಗೋಪಾಲ್ ಭೇಟಿ
ಭಾನುವಾರ ಹೊಸಕೋಟೆ ನಿವಾಸದಲ್ಲಿ ನಡೆದ ಸಂಧಾನ ಸಭೆ ಮುರಿದುಬಿದ್ದಿತ್ತು. ಆದ್ದರಿಂದ, ಡಿ.ಕೆ.ಶಿವಕುಮಾರ್ ಮತ್ತು ಜಮೀರ್ ಅಹಮದ್ ಖಾನ್ ಅವರು ಎಂ.ಟಿ.ಬಿ.ನಾಗರಾಜ್ ಅವರನ್ನು ಕುಮಾರಕೃಪಾ ಅತಿಥಿಗೃಹಕ್ಕೆ ಕರೆದುಕೊಂಡು ಬಂದಿದ್ದರು.
ಕೆ.ಸಿ.ವೇಣುಗೋಪಾಲ್ ಜೊತೆ ಮಾತುಕತೆ ನಡೆಸಿದ್ದ ಎಂ.ಟಿ.ಬಿ.ನಾಗರಾಜ್ ಅವರು ಇಂದೇ ಸಚಿವ ಸ್ಥಾನ ನೀಡುವ ಭರವಸೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು.
ಬೇಡಿಕೆ ಇಟ್ಟಿದ್ದಾರೆ
ಎಂ.ಟಿ.ಬಿ.ನಾಗರಾಜ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಲವಾರು ಬಾರಿ ಮಾಧ್ಯಮಗಳ ಜೊತೆ ಮಾತನಾಡುವಾಗ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಎಂ.ಟಿ.ಬಿ.ನಾಗರಾಜ್ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಸಹ ಹಬ್ಬಿದ್ದವು.
2018 ವಿಧಾನಸಭೆ ಚುನಾವಣೆಯಲ್ಲಿ 98,824 ಮತಗಳನ್ನು ಪಡೆದು ಅವರು ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿಯ ಶರತ್ ಬಚ್ಚೇಗೌಡ ಅವರನ್ನು ಸೋಲಿಸಿದ್ದಾರೆ. ಹೊಸಕೋಟೆಯಲ್ಲಿ ಕಾಂಗ್ರೆಸ್ ಸಮಾವೇಶ ನಡೆದಿತ್ತು. ಆಗ ರಾಹುಲ್ ಗಾಂಧಿ ಅವರು ಎಂ.ಟಿ.ಬಿ.ನಾಗರಾಜ್ ಗೆಲ್ಲಿಸುವಂತೆ ಕರೆ ಕೊಟ್ಟಿದ್ದರು.