ಎಂಟಿಬಿ ನಾಗರಾಜ್-ಎಚ್.ವಿಶ್ವನಾಥ್ ಪರಿಷತ್ ಗೆ ಆಯ್ಕೆ ಪಕ್ಕಾ
ಬೆಂಗಳೂರು, ಡಿಸೆಂಬರ್ 11: ಯಡಿಯೂರಪ್ಪ ಬಯಸಿದಂತೆಯೇ ಉಪಚುನಾವಣೆ ಫಲಿತಾಂಶ ಬಂದಿದೆ. ಆದರೆ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಸೋತಿರುವುದು ಸಣ್ಣ ಬೇಸರ ಮೂಡಿಸಿದೆ. ಆದರೆ ಈ ಇಬ್ಬರನ್ನೂ ಯಡಿಯೂರಪ್ಪ ಕೈಬಿಟ್ಟಿಲ್ಲ.
ಮೈತ್ರಿ ಸರ್ಕಾರ ಮುರಿದು, ಯಡಿಯೂರಪ್ಪ ಸಿಎಂ ಆಗಲು ಸಹಾಯ ಮಾಡಿದ ಈ ಇಬ್ಬರನ್ನೂ ಸಚಿವರನ್ನಾಗಿ ಮಾಡಲೇ ಬೇಕು ಎಂದು ಯಡಿಯೂರಪ್ಪ ನಿರ್ಧರಿಸಿದ್ದು, ಉಪಚುನಾವಣೆಯಲ್ಲಿ ಸೋತಿರುವ ಇಬ್ಬರನ್ನೂ ಪರಿಷತ್ ಸದಸ್ಯರನ್ನಾಗಿಸಲು ನಿರ್ಧರಿಸಿದ್ದಾರೆ.
ಅಶ್ಲೀಲ ವಿಡಿಯೊ ನಕಲಿ, ಸಂಪುಟ ಸೇರಲು ಸಜ್ಜಾದ ಲಿಂಬಾವಳಿ
ವಿಧಾನಸಭೆಗೆ ಆಯ್ಕೆ ಆಗಲು ಸಾಧ್ಯವಾಗದ ಎಂಟಿಬಿ ನಾಗರಾಜ್ ಮತ್ತು ಎಚ್.ವಿಶ್ವನಾಥ್ ಪರಿಷತ್ ಸದಸ್ಯರಾಗಲಿದ್ದಾರೆ. ಇದು ಬಹುತೇಕ ಪಕ್ಕಾ ಆಗಿದ್ದು, ಇಬ್ಬರು ಹಾಲಿ ಸದಸ್ಯರಿಂದ ರಾಜೀನಾಮೆ ಕೊಡಿಸಿ ಈ ಇಬ್ಬರನ್ನೂ ವಿಧಾನಸೌಧಕ್ಕೆ ಕರೆತರಲು ಯಡಿಯೂರಪ್ಪ ನಿಶ್ಚಯಿಸಿದ್ದಾರೆ.
ಹಾಲಿ ಬಿಜೆಪಿ ಪರಿಷತ್ ಸದಸ್ಯರೊಂದಿಗೆ ಮಾತುಕತೆ
ಈಗಾಗಲೇ ಇಬ್ಬರು ಬಿಜೆಪಿ ಪರಿಷತ್ ಸದಸ್ಯರ ಬಳಿ ಮಾತುಕತೆ ಮುಗಿದಿದ್ದು, ರವಿಕುಮಾರ್ ಮತ್ತು ತೇಜಸ್ವಿನಿ ರಮೇಶ್ಗೌಡ ಅವರು ತಮ್ಮ ಸ್ಥಾನವನ್ನು ತ್ಯಜಿಸಿ ಮಾಜಿ ಅನರ್ಹರಿಗೆ ಅವಕಾಶ ಮಾಡಿಕೊಡಲಿದ್ದಾರೆ. ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ ಹೆಚ್ಚಿರುವ ಕಾರಣ ಇಬ್ಬರನ್ನೂ ಸುಲಭವಾಗಿ ಗೆಲ್ಲಿಸಿಕೊಂಡು ಮೇಲ್ಮನೆ ಸದಸ್ಯರನ್ನಾಗಿಸಬಹುದು.
ಇಬ್ಬರಿಗೂ ಸಚಿವ ಸ್ಥಾನವೂ ಪಕ್ಕಾ
ಈ ಇಬ್ಬರಿಗೆ ಸಚಿವ ಸ್ಥಾನವನ್ನೂ ಯಡಿಯೂರಪ್ಪ ನೀಡಲಿದ್ದಾರೆ ಎಂಬ ಮಾತುಗಳೂ ಸಹ ಗಟ್ಟಿಯಾಗಿದ್ದು, ಅದೇ ಕಾರಣಕ್ಕೆ ಇಬ್ಬರನ್ನೂ ಪರಿಷತ್ ಸದಸ್ಯರನ್ನಾಗಿಸಲಾಗುತ್ತಿದೆ. ಸೋತರೂ ಸಚಿವ ಸ್ಥಾನ ನೀಡುವುದಾಗಿ ಹಿಂದೆಯೇ ಮಾತು ಕೊಟ್ಟಿದ್ದರು ಯಡಿಯೂರಪ್ಪ.
ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿದ್ದೇನು?
ಎಂಟಿಬಿ ಮನೆಗೆ ಭೇಟಿ ಕೊಟ್ಟಿದ್ದ ಬಿಎಸ್ವೈ
ನಿನ್ನೆಯಷ್ಟೆ ಯಡಿಯೂರಪ್ಪ ಅವರು ಎಂಟಿಬಿ ನಾಗರಾಜ್ ಮನೆಗೆ ಭೇಟಿ ನೀಡಿ ಎಂಟಿಬಿ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಜೊತೆಗೆ ತಮ್ಮೊಂದಿಗೆ ನಾನಿರುವುದಾಗಿ ಭರವಸೆ ನೀಡಿದ್ದರು. ವಿಶ್ವನಾಥ್ ಅವರೊಂದಿಗೂ ಯಡಿಯೂರಪ್ಪ ಮಾತನಾಡಿ ಧೈರ್ಯ ನುಡಿದಿದ್ದರು.
ನಂಬಿದವರ ಕೈಬಿಟ್ಟಿಲ್ಲ ಯಡಿಯೂರಪ್ಪ
ಯಡಿಯೂರಪ್ಪ ರಾಜಕೀಯ ಇತಿಹಾಸ ಗಮನಿಸಿದರೆ ಅವರು ತಮ್ಮನ್ನು ನಂಬಿದವರನ್ನು ಎಂದಿಗೂ ಕೈಬಿಟ್ಟವರಲ್ಲ. ಕೆಜೆಪಿ ಯಿಂದ ಬಿಜೆಪಿಗೆ ವಾಪಸ್ ಬಂದಾಗಲೂ ತಮ್ಮೊಂದಿಗೆ ಕೆಜೆಪಿಗೆ ಬಂದಿದ್ದವರೆಲ್ಲರಿಗೂ ಸೂಕ್ತಸ್ಥಾನ-ಮಾನ ಕೊಟ್ಟರು. ಯಡಿಯೂರಪ್ಪ ಆಪ್ತರ ವಿರುದ್ಧ ಬಿಜೆಪಿಯ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರವನ್ನೇ ಕೆಡವಲು ಯತ್ನಿಸಿದಾಗಲೂ ಯಡಿಯೂರಪ್ಪ ಅವರು ಆಪ್ತರನ್ನು ಬಲಿಪಡೆದಿರಲಿಲ್ಲ.
ಮಾಜಿ ಅನರ್ಹರನ್ನು ಬಿಟ್ಟು, ಮತ್ಯಾರು ಸೇರಲಿದ್ದಾರೆ ಯಡಿಯೂರಪ್ಪ ಸಂಪುಟ?