ಎಂಟಿಬಿ-ವಿಶ್ವನಾಥ್ ಮುಳುವಾದ ಸುಪ್ರೀಂ ಹಳೇ ತೀರ್ಪು: ಬಿಎಸ್ವೈ ಗೆ ನೆಮ್ಮದಿ
ಬೆಂಗಳೂರು, ಜನವರಿ 28: ಸಂಪುಟ ವಿಸ್ತರಣೆ ಸಂಕಟಕ್ಕೆ ಸಿಲುಕಿರುವ ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ಕೇಳುತ್ತಿರುವ ಸೋತವರಿಂದ ತಪ್ಪಿಸಿಕೊಳ್ಳಲು ಸುಪ್ರೀಂಕೋರ್ಟ್ನ ತೀರ್ಪು ನೆರವಿಗೆ ಬಂದಿದೆ.
Recommended Video
ಹೌದು, ಸಚಿವ ಸ್ಥಾನ ಕೇಳುತ್ತಿರುವ, ಉಪಚುನಾವಣೆಯಲ್ಲಿ ಸೋತಿರುವ ಎಂಟಿಬಿ ನಾಗರಾಜು ಹಾಗೂ ಎಚ್.ವಿಶ್ವನಾಥ್ ಅವರನ್ನು ಸಚಿವ ಸ್ಥಾನ ಆಕಾಂಕ್ಷಿ ಪಟ್ಟಿಯಿಂದ ಹೊರಗಿಡಲು ಯಡಿಯೂರಪ್ಪ ಅವರಿಗೆ ಸುಪ್ರೀಂಕೋರ್ಟ್ ತೀರ್ಪು ನೆರವಿಗೆ ಬಂದಿದೆ.
ಕಾಂಗ್ರೆಸ್ ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರನ್ನು ಅನರ್ಹಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಪ್ರಕರಣದ ವಿಚಾರಣೆ ನಡೆದು, 'ಅನರ್ಹತೆ ಶಿಕ್ಷೆ ಸರಿಯಾಗಿಯೇ ಇದೆ, ಆದರೆ ಅವರು ಉಪ ಚುನಾವಣೆಗೆ ನಿಲ್ಲಬಹುದು ಆದರೆ ಚುನಾವಣೆ ಗೆಲ್ಲುವವರೆಗೆ ಯಾವುದೇ ಹುದ್ದೆ ಅಥವಾ ಮಂತ್ರಿಗಿರಿ ಪಡೆಯುವ ಹಾಗಿಲ್ಲ' ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು.
ಸೋತವರಿಗೆ ಮಂತ್ರಿಗಿರಿ ಇಲ್ಲ: ಯಡಿಯೂರಪ್ಪ
ಈಗ ಇದೇ ತೀರ್ಪನ್ನು ಯಡಿಯೂರಪ್ಪ ಅವರು, ಉಪಚುನಾವಣೆ ಸೋತರೂ ಮಂತ್ರಿಗಿರಿಗಾಗಿ ಪಟ್ಟು ಹಿಡಿದಿರುವ ಎಂಟಿಬಿ ನಾಗರಾಜು ಮತ್ತು ವಿಶ್ವನಾಥ್ ವಿರುದ್ಧ ಪ್ರಯೋಗಿಸುತ್ತಿದ್ದು, 'ಸೋತವರಿಗೆ ಮಂತ್ರಿಗಿರಿ ಕೊಡಲಾಗದು' ಎಂಬ ತಮ್ಮ ಹೇಳಿಕೆಗೆ ಸುಪ್ರೀಂಕೋರ್ಟ್ ಅವರ ಪ್ರಕರಣದಲ್ಲಿಯೇ ಕೊಟ್ಟಿದ್ದ ತೀರ್ಪನ್ನು ಹೇಳಿಕೆಗೆ ಕಾರಣವಾಗಿ ನೀಡುತ್ತಿದ್ದಾರೆ.
ಸುಪ್ರೀಂ ತೀರ್ಪಿನ ಸಾರಾಂಶ ಏನು?
ಅಂದಿನ ಸುಪ್ರೀಂಕೋರ್ಟ್ ತೀರ್ಪಿ ಸಾರಾಂಶ ಹೀಗಿತ್ತು; ಅನ್ವಯ ಆಗಿನ ಸ್ಪೀಕರ್ ರಮೇಶ್ ಕುಮಾರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಶಾಸಕರ ಶಾಸಕತ್ವ ರದ್ದು ಮಾಡಿ ಅನರ್ಹಗೊಳಿಸಿದ್ದು ಸರಿಯಾಗಿಯೇ ಇದೆ. ಆದರೆ ಅವರು ಉಪಚುನಾವಣೆ ಸ್ಪರ್ಧಿಸಬಹುದು ಮತ್ತು ಗೆದ್ದ ನಂತರ ಯಾವುದೇ ಹುದ್ದೆ ಬೇಕಾದರೂ ಪಡೆಯಬಹುದು, ಆದರೆ ಚುನಾವಣೆ ಗೆಲ್ಲುವ ತನಕವೂ ಅವರು ಅನರ್ಹರೇ ಆಗಿರುತ್ತಾರೆ.
ಮಂತ್ರಿಗಿರಿ ಪಡೆಯಲು ಎಂಟಿಬಿ-ವಿಶ್ವನಾಥ್ ಅರ್ಹರಲ್ಲ?
ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಎಂಟಿಬಿ ನಾಗರಾಜು ಮತ್ತು ಎಚ್.ವಿಶ್ವನಾಥ್ ಅವರು ಮಂತ್ರಿಗಿರಿ ಪಡೆಯಲು ಅರ್ಹರಲ್ಲ. ಶಂಕರ್ ಸಹ ಅರ್ಹರಲ್ಲ. ಯಾವುದಾದರೂ ಚುನಾವಣೆ ಗೆದ್ದ ನಂತರವಷ್ಟೆ ಅವರು ಮಂತ್ರಿಗಿರಿ ಪಡೆಯಬಲ್ಲರು.
ಪರಿಷತ್ ಚುನಾವಣೆ ಹತ್ತಿರದಲ್ಲೇ ಇದೆ
ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ವಿಧಾನಸಭೆ ಉಪಚುನಾವಣೆ ಇಲ್ಲ. ವಿಧಾನಪರಿಷತ್ನ ಒಂದು ಸ್ಥಾನಕ್ಕೆ ಚುನಾವಣೆ ಇದೆಯಾದರೂ ಆ ಸ್ಥಾನವನ್ನು ಈಗಾಗಲೇ ಉಪಮುಖ್ಯಮಂತ್ರಿ ಆಗಿರುವ ಲಕ್ಷ್ಮಣ್ ಸವದಿಗೆ ಮೀಸಲಿಡಲಾಗಿದೆ.
ಯಡಿಯೂರಪ್ಪ ಗೆ ನೆಮ್ಮದಿ ತಂದ ಹಳೆಯ ತೀರ್ಪು
ಸುಪ್ರೀಂಕೋರ್ಟ್ ನ ತೀರ್ಪು ಯಡಿಯೂರಪ್ಪ ಅವರಿಗೆ ನೆಮ್ಮದಿಯನ್ನೇ ತಂದಿದೆ. ತೀರ್ಪು ಮುಂದಿಟ್ಟುಕೊಂಡು, ಸಚಿವ ಸ್ಥಾನಕ್ಕಾಗಿ ಪಟ್ಟುಹಿಡಿದಿರುವ ಎಂಟಿಬಿ ನಾಗರಾಜು ಹಾಗೂ ವಿಶ್ವನಾಥ್ ಅವರನ್ನು ಸಚಿವ ಸ್ಥಾನದಿಂದ ಸುಲಭವಾಗಿ ವಂಚಿತರನ್ನಾಗಿಸಬಹುದು.