ಬಿಡದಿಯಲ್ಲಿ ಸಿಗಲಿದೆ ಮಲೇಷಿಯಾದ ಮರಳು ಭಾಗ್ಯ
ಬೆಂಗಳೂರು, ಜನವರಿ 21: ಮರಳು ಕೊರತೆಗೆ ನೀಗಿಸಲು ರಾಜ್ಯದ ಜನತೆಗೆ ಕರ್ನಾಟಕ ಸರ್ಕಾರವು ಮರಳು ಭಾಗ್ಯವನ್ನು ಕರುಣಿಸಿದೆ. ಮಲೇಷಿಯಾದಿಂದ ನೈಸರ್ಗಿಕ ಮರಳನ್ನು ಆಮದು ಮಾಡಿಕೊಂಡಿದೆ. ಬ್ರ್ಯಾಂಡೆಡ್ ಮರಳು ಮೊದಲಿಗೆ ಬಿಡದಿಯಲ್ಲಿ ಸೋಮವಾರ(ಜನವರಿ 22) ದಿಂದ ಮಾರಾಟವಾಗಲಿದೆ ಎಂದು ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್ ಹೇಳಿದ್ದಾರೆ.
ಮುಂದಿನ ಹಂತದಲ್ಲಿ ಬೆಂಗಳೂರಿನ ಚನ್ನಸಂದ್ರ, ದೊಡ್ಡಬಳ್ಳಾಪುರ, ತುಮಕೂರಿನ ಕ್ಯಾತ್ಸಂದ್ರ, ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿ ರಾಜ್ಯದೆಲ್ಲೆಡೆ ಎಂಎಸ್ಎಲ್ಎಲ್ ಮಳಿಗೆಗಳಲ್ಲಿ ಮರಳು ಮೂಟೆಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು.
ಎಎಂಎಸ್ಐಎಲ್ ವತಿಯಿಂದ ನಿಗದಿತ ದರದಲ್ಲೇ ಮಾರಾಟ ಮಾಡಲಾಗುತ್ತದೆ. 50 ಕೆಜಿ ಚೀಲ ಹಾಗೂ ಟನ್ ಲೆಕ್ಕದಲ್ಲಿ ಮರಳನ್ನು ಖರೀದಿಸಬಹುದು. ಪ್ರತಿ ಟನ್ಗೆ ಜಿಎಸ್ಟಿ ತೆರಿಗೆ ಸೇರಿ 4 ಸಾವಿರ ದರ ನಿಗದಿಯಾಗಿದೆ. ಮೈಸೂರಿನಲ್ಲಿ ಚೀಲಕ್ಕೆ 4,200 ರು ಗೆ ಸಿಗಲಿದೆ.
ಸುವರ್ಣ ಸಂಭ್ರಮಕ್ಕೆ ಎಂಎಸ್ಐಎಲ್ನಿಂದ ನಾಲ್ಕು ಹೊಸ ಉತ್ಪನ್ನ ಬಿಡುಗಡೆ
ಮಲೇಷಿಯಾದಿಂದ ಹಡಗು ಮೂಲಕ ಆಂಧ್ರ ಪ್ರದೇಶದ ನಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ಬಂದರ್ನಲ್ಲಿ ಮೊದಲ ಹಂತವಾಗಿ 54 ಸಾವಿರ ಟನ್ ಮರಳು ಪೂರೈಕೆಯಾಗಿದೆ ಎಂದರು.
ವಾರ್ಷಿಕ 3 ಕೋಟಿ ಟನ್ ಗಳಷ್ಟು ಮರಳು ಬೇಡಿಕೆಯಿದೆ. ನದಿ ಪಾತ್ರದಿಂದ ಸುಮಾರು 40 ಲಕ್ಷ ಟನ್ ಗಳಷ್ಟು ಮರಳು ಪಡೆಯಲಾಗುತ್ತಿದೆ. 2 ಕೋಟಿಗೂ ಅಧಿಕ ಟನ್ ಗಳಷ್ಟು ಮರಳನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಒಟ್ಟು 60 ಲಕ್ಷ ಟನ್ ಗಳಷ್ಟು ಕೊರತೆ ಎದುರಿಸುತ್ತಿದ್ದೇವೆ ಎಂದು ಪ್ರಕಾಶ್ ಹೇಳಿದರು.