ನಾಡ ಧ್ವಜ: ಸಿದ್ದು ಟ್ವೀಟಿಗೆ ಪ್ರತಾಪ್ ಹಾಗೂ ಪ್ರಜೆಗಳ ಪ್ರತಿಕ್ರಿಯೆ
ಬೆಂಗಳೂರು, ಮಾರ್ಚ್ 11: ಕರ್ನಾಟಕ ಸರ್ಕಾರವು ಅಂಗೀಕರಿಸಿರುವ ತ್ರಿವರ್ಣ ನಾಡಧ್ವಜದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ ಮೂರು ಬಣ್ಣಗಳ ಬಳಕೆ ಬಗ್ಗೆ ವಿವರಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಗೆ ಪ್ರತಿಕ್ರಿಯಿಸಿರುವ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ, ಬಣ್ಣಗಳಿಗೆ ವಿಕೃತ ಅರ್ಥ ನೀಡಿ ಅಪಾರ್ಥ ಮಾಡಬೇಡಿ ಎಂದಿದ್ದಾರೆ.
ಸಿದ್ದರಾಮಯ್ಯನವರೇ ನಮ್ಮ ಕನ್ನಡ ಬಾವುಟದ ಬಣ್ಣಗಳು ಅರಿಶಿನ ಕುಂಕುಮದ ಸಂಕೇತ. ನೀವು ಆ ಬಣ್ಣಗಳಿಗೆ ಬೇರೆ ವಿಕೃತ ಅರ್ಥ ಕಲ್ಪಿಸಬೇಡಿ.ಕೆಂಪು ಡೇಂಜರ್ ಎನ್ನುತ್ತಾರೆ. ನೀವು ಸಹ ಈ ರಾಜ್ಯಕ್ಕೆ ಡೇಂಜರ್ ಆಗಿದ್ದೀರಿ ಎಂದು ಟ್ವಿಟರ್ನಲ್ಲಿ ಸಂಸದ ಪ್ರತಾಪ್ಸಿಂಹ ಅವರು ಸಿಎಂ ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ.
ಹೊಸ ಕನ್ನಡ ಧ್ವಜ ರೆಡಿ, ಕೇಂದ್ರ ಒಪ್ಪುವುದಷ್ಟೆ ಬಾಕಿ
ಸಿಎಂ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರತಾಪ್ ಸಿಂಹ ಅವರು ಪ್ರತಿಕ್ರಿಯಿಸಿದ ಬೆನ್ನಲ್ಲೇ, ಸಾರ್ವಜನಿಕರಿಂದ ಭರಪೂರ ಪ್ರತಿಕ್ರಿಯೆಗಳು ಹರಿದು ಬರುತ್ತಿದೆ. ರಾಜ್ಯಕ್ಕೆ ಪ್ರತ್ಯೇಕ ರಾಜ್ಯಧ್ವಜ ಬೇಕೆ? ಈ ಬಳಕೆಯಲ್ಲಿರುವ ಧ್ವಜ ಏನು ಮಾಡುವುದು? ಸರ್ಕಾರದ ಪ್ರಸ್ತಾವಿತ ಧ್ವಜಕ್ಕೆ ಮಾನ್ಯತೆ ಸಿಗಲಿದೆಯೇ? ಎರಡು ಪಕ್ಷದವರು ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡುತ್ತಿರುವುದು ಸರಿಯೇ? ಎಂದೆಲ್ಲ ಪ್ರಶ್ನಿಸಲಾಗಿದೆ.
|
ಬಣ್ಣಗಳ ವಿವರಣೆ ನೀಡಿದ್ದ ಸಿಎಂಗೆ ಪ್ರತಾಪ್ ಟಾಂಗ್
ಸಿದ್ದರಾಮಯ್ಯನವರೇ ನಮ್ಮ ಕನ್ನಡ ಬಾವುಟದ ಬಣ್ಣಗಳು ಅರಿಶಿನ ಕುಂಕುಮದ ಸಂಕೇತ. ಇದು ಕನ್ನಡ ಸಂಸ್ಕೃತಿಯ ಪ್ರತೀಕ. ನೀವು ಆ ಬಣ್ಣಗಳಿಗೆ ಬೇರೆ ವಿಕೃತ ಅರ್ಥ ಕಲ್ಪಿಸಬೇಡಿ. ಕೆಂಪು ಡೇಂಜರ್ ಎನ್ನುತ್ತಾರೆ. ನೀವು ಸಹ ಈ ರಾಜ್ಯಕ್ಕೆ ಡೇಂಜರ್ ಆಗಿದ್ದೀರಿ ಎಂದು ಟ್ವಿಟರ್ನಲ್ಲಿ ಸಿಎಂ ಕಾಲೆಳೆದಿರುವ ಸಂಸದ ಪ್ರತಾಪ್ಸಿಂಹ ಅವರು ಇಂಗ್ಲೀಷ್ ಭಾಷೆ ಬಳಸಿ ಟ್ವೀಟ್ ಮಾಡಿದ್ದಾರೆ.
|
ಧ್ವಜದ ಸಮಸ್ಯೆ ಯಾರಿಗೆ ಬೇಕು?
ಸಧ್ಯಕ್ಕೆ ಕನ್ನಡ ಧ್ವಜದ ಅಗತ್ಯ ಯಾರಿಗೂ ಇಲ್ಲ ಸ್ವಾಮಿ ಹಾಗೂ ನೀವು ಅದನ್ನು ಪದೇಪದೇ ಕೆಣಕಿ ಅವರ ಜಾಗಕ್ಕೆ ಇಳಿಯಬೇಡಿ, ಐಬಿಪಿಎಸ್ ಮೋಸ ಸೇರಿದಂತೆ ಅನೇಕ ಸಮಸ್ಯೆಗಳಿವೆ. ಜನರು ಅವನ್ನು ನಿರೀಕ್ಷಿಸುತ್ತಿದ್ದಾರೆಯೇ ಹೊರತು ಧ್ವಜದ ವಾದ ವಿವಾದವನ್ನಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅವರಿಗೆ ಸಾರ್ವಜನಿಕರೊಬ್ಬರು ಕಿವಿಮಾತು ಹೇಳಿದ್ದಾರೆ.
|
ಮೋದಿ ಎಲ್ಲೆಡೆ ಇರಲು ಸಾಧ್ಯವಿಲ್ಲ
ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಸರ್ಕಾರವನ್ನು ಎದುರಿಸಲು ಪ್ರತಿ ಬಾರಿ ಪ್ರಧಾನಿ ಮೋದಿ ಅವರು ಯುದ್ಧಕ್ಕೆ ಬರಲು ಸಾಧ್ಯವಿಲ್ಲ. ಮೋದಿ ಅವರು ಎಲ್ಲೆಡೆ ಇರಲು ಸಾಧ್ಯವಿಲ್ಲ. ನಿಮ್ಮಂಥ ಸ್ಥಳೀಯ ನಾಯಕರು, ಸಮಸ್ಯೆಗಳತ್ತ ಗಮನ ಹರಿಸಿ, ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದೀರಿ. ನಿಮ್ಮ ಕಾರ್ಯ ಯಶಸ್ವಿಯಾಗಲಿ, ಕಾಂಗ್ರೆಸ್ ಯಾವುದೇ ಚುನಾವಣೆ ಗೆಲ್ಲಬಾರದು, ಬಿಜೆಪಿ ಗೆಲುವು ನಿಮ್ಮ ಹೆಗಲ ಮೇಲಿನ ಜವಾಬ್ದಾರಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
|
ಅರಸಿನ ಕುಂಕುಮ ಸಿದ್ದರಾಮಯ್ಯಗೆ ಗೊತ್ತಿಲ್ಲ
ಅರಸಿನ(ಬಾವುಟದಲ್ಲಿರುವ ಹಳದಿ ಬಣ್ಣ) ಕುಂಕುಮ ಎಂದರೆ ಏನೆಂಬುದು ಸಿಎಂ ಸಿದ್ದರಾಮಯ್ಯಗೆ ಗೊತ್ತಿರಲ್ಲ. ಅವರು ನಾಸ್ತಿಕರು, ನೀವು ಅವರಿಗೆ ವಿವರಿಸಿದರೂ ಪ್ರಯೋಜನವಿಲ್ಲ ಎಂದು ಟ್ವೀಟ್ ಮಾಡಲಾಗಿದೆ.
|
ಶರಭ ಮಾತ್ರ ಏಕೆ, ವರಾಹ ಏಕಿಲ್ಲ?
ಕರ್ನಾಟಕದ ಇತಿಹಾಸದಲ್ಲಿ ಪ್ರಮುಖವಾಗಿ ಬಳಕೆಯಾದ ವರಾಹ(ಕಾಡು ಹಂದಿ) ಚಿತ್ರವನ್ನು ಈಗಿನ ಹೊಸ ನಾಡಧ್ವಜದಲ್ಲಿ ಬಳಸಲಾಗಿಲ್ಲ. ಈ ಮೂಲಕ ವಿಜಯನಗರ, ಹೊಯ್ಸಳ ಸೇರಿದಂತೆ ಕರ್ನಾಟಕದ ಘನತೆಯನ್ನು ಎತ್ತಿಹಿಡಿದ ರಾಜರುಗಳಿಗೆ ಅಪಮಾನ ಮಾಡಲಾಗಿದೆ. ಶರಭ ಎಂಬ ಕಾಲ್ಪನಿಕ ಪ್ರಾಣಿ ಬಳಸಲಾಗಿದ್ದು ಮಾತ್ರ ಏಕೆ ಎಂದು ಪ್ರಶ್ನಿಸಲಾಗಿದೆ. ಜತೆಗೆ ವಿವಿಧ ಬಾವುಟಗಳ ಚಿತ್ರಗಳನ್ನು ಟ್ವೀಟ್ ಮಾಡಲಾಗಿದೆ.
|
ಸತ್ಯಮೇವ ಜಯತೆ ಏಕಿಲ್ಲ
ಸತ್ಯಮೇವ ಜಯತೇ ಎಂಬ ವಾಕ್ಯ ಬಳಸಿದರೆ ಸಂಸ್ಕೃತ ಭಾಷೆಗೆ ಮನ್ನಣೆ ನೀಡಲಾಗುತ್ತದೆ ಎಂಬ ಅಭಿಪ್ರಾಯವೋ ಏನೋ, ಇಲ್ಲಿ ತನಕ ಬಳಕೆಯಲ್ಲಿದ್ದ ವಾಕ್ಯಕ್ಕೆ ಕತ್ತರಿ ಹಾಕಲಾಗಿರುವುದು ಸರಿಯಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.