ಧರ್ಮಸ್ಥಳದಲ್ಲಿ ಮುದ್ದಹನುಮೇಗೌಡರ ಸುದ್ದಿಗೋಷ್ಠಿಯ ಮೇಲೆ ಎಲ್ಲರ ಚಿತ್ತ
Recommended Video
ಬೆಂಗಳೂರು, ಮೇ 2: ತುಮಕೂರು ಕ್ಷೇತ್ರವನ್ನು ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದರೂ ದೇವೇಗೌಡರ ವಿರುದ್ಧ ಕಣಕ್ಕಿಳಿದು ಅಂತಿಮ ಕ್ಷಣದಲ್ಲಿ ಧರ್ಮಸಂಕಟದಿಂದ ನಾಮಪತ್ರವನ್ನು ಹಿಂಪಡೆದಿದ್ದ ಸಂಸದ ಮುದ್ದಹನುಮೇಗೌಡರು ಇಂದು ಧರ್ಮಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ದೇವೇಗೌಡರ ವಿರುದ್ಧ ಮುದ್ದಹನುಮೇಗೌಡರು ಕಣಕ್ಕಿಳಿದಿದ್ದಕ್ಕೆ ಕಾಂಗ್ರೆಸ್ ನಾಯಕರು ಮುಜುಗರಕ್ಕೀಡಾಗಿದ್ದರು. ಮುದ್ದಹನುಮೇಗೌಡರ ಸಂಧಾನಕ್ಕೆ ಸಾಕಷ್ಟು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೈಕಮಾಂಡ್ ಕೂಡ ಇದರಲ್ಲಿ ಮಧ್ಯಪ್ರವೇಶ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮುದ್ದಹನುಮೇಗೌಡ ನಾಮಪತ್ರ ವಾಪಸ್, ಪರಮೇಶ್ವರ ಸ್ವಾಗತ
ಆದರೆ, ಕಳೆದ ವಾರ ಮುದ್ದಹನುಮೇಗೌಡರ ಕುರಿತ ಆಡಿಯೋವೊಂದು ಲೀಕ್ ಆಗಿತ್ತು. ಆ ಆಡಿಯೋದಲ್ಲಿ ಮುದ್ದಹನುಮೇಗೌಡರು ನಾಮಪತ್ರ ಹಿಂಪಡೆಯಲು ಮೂರೂವರೆ ಕೋಟಿ ರೂ. ಪಡೆದಿದ್ದಾರೆ. ಚುನಾವಣೆ ಮುಗಿದ ಬಳಿಕ ಇನ್ನಷ್ಟು ಹಣ ನೀಡಬೇಕೆಂದು ಬೇಡಿಕೆಯಿಟ್ಟಿದ್ದಾರೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಆಪ್ತನೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಬಳಿ ಹೇಳುತ್ತಿರುವುದು ರೆಕಾರ್ಡ್ ಆಗಿತ್ತು.
ಇಂದು ಧರ್ಮಸ್ಥಳಕ್ಕೆ ಹೋಗಿ ಮಂಜುನಾಥನ ದರ್ಶನ ಪಡೆದು 12 ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದು, ತಮಗೆ ಟಿಕೆಟ್ ಕೈತಪ್ಪಿದ್ದು, ತಮ್ಮ ಮೇಲಿನ ಆರೋಪಗಳು ಕುರಿತು ಸ್ಪಷ್ಟನೆ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಈ ಧರ್ಮಸ್ಥಳಕ್ಕೂ ಹಾಗೂ ಕರ್ನಾಟಕ ರಾಜಕೀಯಕ್ಕೂ ಅವಿನಾಭಾವ ಸಂಭಧವಿರುವುದು ಮಾತ್ರ ಸತ್ಯ. ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ ತನಗೊಂದು ಮಂತ್ರಿ ಸ್ಥಾನ ನೀಡಿದರೆ ತಾನು ಕೂಡ ಜೆಡಿಎಸ್ಗೆ ಸೇರುತ್ತೇನೆ ಎಂದು ಯಡಿಯೂರಪ್ಪ ತನ್ನ ಬಳಿ ಹೇಳಿದ್ದರು ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದರು.
ಆದರೆ, ಅದು ಸುಳ್ಳು ಆರೋಪವೆಂದು ಯಡಿಯೂರಪ್ಪ ಧರ್ಮಸ್ಥಳಕ್ಕೆ ಹೋಗಿ ಆಣೆ ಪ್ರಮಾಣ ಮಾಡಿದ್ದರು ಈಗ ಇದೇ ರೀತಿಯ ಮತ್ತೊಂದು ನಾಟಕ ನಡೆಯುವ ಸಾದ್ಯತೆ ಇದೆ.