ಸಂಚಾರಿ ನಿಯಮ ಉಲ್ಲಂಘನೆ; ದಂಡ ಎಷ್ಟು ಕಡಿತವಾಗಲಿದೆ?
ಬೆಂಗಳೂರು, ಸೆಪ್ಟೆಂಬರ್ 12 : ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ದಂಡ ಶುಲ್ಕವನ್ನು ಕಡಿತಗೊಳಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಯಾವ ದಂಡದಲ್ಲಿ ಎಷ್ಟು ಕಡಿತ ಮಾಡಲಾಗುತ್ತದೆ? ಎಂಬ ಕುತೂಹಲ ಜನರಲ್ಲಿ ಇದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, "ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ದಂಡ ಶುಲ್ಕವನ್ನು ಕಡಿಮ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳು ಸ್ವತಂತ್ರವಾಗಿವೆ" ಎಂದು ಹೇಳಿದ್ದಾರೆ. ಕರ್ನಾಟಕದ ಸಾರಿಗೆ ಇಲಾಖೆ ದಂಡ ಮೊತ್ತ ಕಡಿತ ಮಾಡುವುದಾಗಿ ಈಗಾಗಲೇ ಘೋಷಣೆ ಮಾಡಿದೆ.
ದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆ
ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಹೇಳಿಕೆ ನೀಡಿದ್ದು, "ದಂಡದ ಮೊತ್ತ ಜಾಸ್ತಿಯಾಗಿರುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಬೇರೆ-ಬೇರೆ ರಾಜ್ಯಗಳಲ್ಲಿ ಕಡಿಮೆ ಮಾಡಿರುವಂತೆ ನಮ್ಮಲ್ಲೂ ಕಡಿತ ಮಾಡುವ ಯೋಚನೆ ಇದೆ" ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್: ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತ
ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಆದರೆ, ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡ ಶುಲ್ಕದ ಬಗ್ಗೆ ಜನರ ಅಸಮಾಧಾನವಿದೆ. ಗುಜರಾತ್ ರಾಜ್ಯದಲ್ಲಿಯೂ ದಂಡ ಕಡಿಮೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ದೇಶದಲ್ಲೇ ಅತಿ ಹೆಚ್ಚು ದಂಡ ಬಿದ್ದ ದಾಖಲೆ ಒಡಿಶಾ ಟ್ರಕ್ ಡ್ರೈವರ್ ಗೆ!
ಎಷ್ಟು ಕಡಿಮೆಯಾಗಲಿದೆ ದಂಡ?
ಹೆಲ್ಮೆಟ್ ರಹಿತ ಚಾಲನೆಯ ದಂಡ ಶುಲ್ಕವನ್ನು 500 ರೂ.ಗೆ ಇಳಿಕೆ ಮಾಡಲಾಗುತ್ತದೆ. ಲೈಸೆನ್ಸ್ ರಹಿತ ಚಾಲನೆಗೆ ಇರುವ ದಂಡನ್ನು 5 ಸಾವಿರದಿಂದ 2 ಸಾವಿರ ರೂ.ಗೆ ಇಳಿಕೆ ಮಾಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ಇನ್ನು ಅಂತಿಮ ತೀರ್ಮಾನ ಕೈಗೊಂಡಿಲ್ಲ.
2 ದಿನದಲ್ಲಿ ಆದೇಶ ಪ್ರಕಟ
ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ದಂಡ ಶುಲ್ಕವನ್ನು ಬೇರೆ ರಾಜ್ಯಗಳು ಸಹ ಕಡಿಮೆ ಮಾಡುತ್ತಿವೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಈ ಕುರಿತು ಮಾಹಿತಿ ನೀಡಿದ್ದು, "ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಬೇರೆ ರಾಜ್ಯಗಳಿಂದ ಮಾಹಿತಿ ಪಡೆಯಲು ಸೂಚನೆ ನೀಡಿದ್ದೇನೆ. 2ದಿನದೊಳಗೆ ಮಾಹಿತಿ ಸಿಗುವ ನಿರೀಕ್ಷೆ ಇದೆ. ಈ ಮಾಹಿತಿ ಬಂದ ತಕ್ಷಣ ಕ್ರಮ ಕೈಗೊಳ್ಳುತ್ತೇವೆ" ಎಂದು ಹೇಳಿದರು.
ಗುಜರಾತ್ನಲ್ಲಿ ಎಷ್ಟು ಕಡಿಮೆ?
ಗುಜರಾತ್ ರಾಜ್ಯದಲ್ಲಿ ಹೆಲ್ಮೆಟ್ ಧರಿಸದಿದ್ದರೆ 500 ರೂ., ಸೀಟ್ ಬೆಲ್ಟ್ ಹಾಕಿಲ್ಲದಿದ್ದರೆ 500 ರೂ., ಡಿಎಲ್ ಇಲ್ಲದಿದ್ದರೆ 2 ಸಾವಿರ (ಬೈಕ್), 3 ಸಾವಿರ (ಕಾರು) ದಂಡವನ್ನು ವಿಧಿಸಲು ತೀರ್ಮಾನಿಸಲಾಗಿದೆ. ಕರ್ನಾಟಕದಲ್ಲಿಯೂ ಇದೇ ಮಾದರಿಯಲ್ಲಿ ದಂಡ ಸಂಗ್ರಹ ಮಾಡಲಾಗುತ್ತದೆ.
ಕೇಂದ್ರ ಸಚಿವರು ಹೇಳುವುದೇನು?
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ದಂಡ ಶುಲ್ಕದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಆದಾಯ ಹೆಚ್ಚಿಸಿಕೊಳ್ಳುವ ಯೋಜನೆಯಲ್ಲ. ರಸ್ತೆ ಅಪಘಾತದಿಂದ ಆಗುವ ಸಾವುಗಳ ಬಗ್ಗೆ ನಿಮಗೆ ಕಾಳಜಿ ಇಲ್ಲವೇ?. ರಾಜ್ಯ ಸರ್ಕಾರಗಳು ದಂಡ ಶುಲ್ಕವನ್ನು ಕಡಿತಗೊಳಿಸಲು ಬಯಸಿವೆ. ಜನರು ದಂಡ ಶುಲ್ಕದಿಂದ ಹೆದರಿದ್ದಾರೆ ಎಂಬುದು ಸತ್ಯವಲ್ಲ" ಎಂದು ಹೇಳಿದ್ದಾರೆ.