ಕೊರೊನಾ ಸಂಕಷ್ಟದ ಮಧ್ಯೆ ಬಿಜೆಪಿಗೆ ಮತ್ತೊಂದು ಏಟು ಕೊಟ್ಟ ಡಿಕೆಶಿ!
ಬೆಂಗಳೂರು, ಸೆ. 20: ಕೆಪಿಸಿಸಿ ಸಾರಥ್ಯವನ್ನು ವಹಿಸಿಕೊಂಡ ಬಳಿಕ ಡಿ.ಕೆ. ಶಿವಕುಮಾರ್ ಅವರು ಮಾಡಿದ್ದ ಮೊದಲ ಮೆಗಾ ಪ್ಲಾನ್ ಸಕ್ಸಸ್ ಆಗುತ್ತಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಸುಮಾರು 60ಕ್ಕೂ ಹೆಚ್ಚು ನಾಯಕರು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ ಎಂಬ ಮಾಹಿತಿಯನ್ನು ಅವರೆ ಹಂಚಿಕೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಳೆದ ಜೂನ್ ತಿಂಗಳಿನಲ್ಲಿ ಸಮಿತಿಯೊಂದನ್ನು ರಚನೆ ಮಾಡಿದ್ದರು. ವಿವಿಧ ಕಾರಣಗಳಿಂದ ಕಾಂಗ್ರೆಸ್ ಪಕ್ಷವನ್ನು ತೊರೆದು ಹೋಗಿರುವವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವುದು ಸಮಿತಿಗೆ ಕೊಟ್ಟ ಜವಾಬ್ದಾರಿಯಾಗಿತ್ತು.
ಆ ಸಮಿತಿ ಇದೀಗ ಮೊದಲ ವರದಿಯನ್ನು ಕೊಟ್ಟಿದ್ದು, ಬರೊಬ್ಬರಿ 60 ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಮರಳಲು ಮಾತುಕತೆ ನಡೆಸಿದ್ದಾರೆ. ಸಮಿತಿ ಸದಸ್ಯರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಹಾಗೂಬ ಜೆಡಿಎಸ್ ಪಕ್ಷಗಳಲ್ಲಿರುವವರನ್ನು ಭೇಟಿ ಮಾಡಿದ್ದಾರೆ. ಆ ಪಕ್ಷಗಳಲ್ಲಿನ ತಾರತಮ್ಯ, ಕಡಗಣನೆ ಸೇರಿದಂತೆ ಸೈದ್ದಾಂತಿಕ ನಿಲುವುಗಳಿಗೆ ಹೊಂದಿಕೊಳ್ಳಲಾಗದೇ ಅವರೆಲ್ಲರೂ ಮತ್ತೆ ಕಾಂಗ್ರೆಸ್ ಪಕ್ಷ ಸೇರಲು ಬಯಸಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್ ಸೇರಲು ಬಯಸಿರುವ ಆ ನಾಯಕರು ಯಾರು? ಮುಂದಿದೆ ಮಾಹಿತಿ!
ಸಫಲವಾದ ಡಿಕೆಶಿ ರಾಜಕೀಯ ತಂತ್ರ
ಕಾಂಗ್ರೆಸ್ ಪಕ್ಷಕ್ಕೆ ಸೇರಲು ರಾಜ್ಯದ ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ನಾಯಕರು ಬಯಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಬೇರೆ ಪಕ್ಷಗಳಿಂದ ಕಾಂಗ್ರೆಸ್ ಸೇರಲು ಬಯಸುವವರ ಕುರಿತು ಮಾತುಕತೆ ನಡೆಸಲು ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ರಚಿಸಿದ್ದೇವೆ. ಈ ಸಮಿತಿ ಸ್ಥಳೀಯ ಮುಖಂಡರ ಜತೆ ಚರ್ಚಿಸಿ ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದನ್ನು ತೀರ್ಮಾನಿಸುತ್ತದೆ. ಪಕ್ಷಕ್ಕೆ ಬರುವವರು ಸ್ಥಳೀಯ ಕಾಂಗ್ರೆಸ್ ನಾಯಕರನ್ನು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕಾಗಿದೆ. ಈಗ ಪಕ್ಷಕ್ಕೆ ಸೇರಿಕೊಳ್ಳಲು ಬಯಸಿರುವವರ ಕುರಿತು ಆಯಾ ಜಿಲ್ಲೆಗಳ ಸ್ಥಳೀಯ ಕಾಂಗ್ರೆಸ್ ನಾಯಕರೊಂದಿಗೂ ಚರ್ಚೆ ನಡೆಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.
ಪುತ್ರ ಶರತ್ ಕಾಂಗ್ರೆಸ್ ಗೆ: ಅಡ್ಡಗೋಡೆಯ ಮೇಲೆ ದೀಪವಿಟ್ಟ ಬಿ.ಎನ್.ಬಚ್ಚೇಗೌಡ
ರಮೇಶ್ ಬಾಬು ಮೊದಲಿಗರು
ವಿಧಾನ ಪರಿಷತ್ ಚುನಾವಣೆ ಶೀಘ್ರದಲ್ಲೇ ಘೋಷಣೆಯಾಗುವ ಹಿನ್ನೆಲೆಯಲ್ಲಿ ರಮೇಶ್ ಬಾಬು ಅವರೊಂದಿಗೆ ತುರ್ತಾಗಿ ಮಾತುಕತೆ ನಡೆಸಿ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಸಮಿತಿ ವರದಿ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರೊಂದಿಗೆ ಚರ್ಚಿಸಿದ ಬಳಿಕ ರಮೇಶ್ ಬಾಬು ಹಾಗೂ ಅವರ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ರಮೇಶ್ ಬಾಬು ಜೆಡಿಎಸ್ನಿಂದ ಸ್ಪರ್ಧೆ ಮಾಡಿದ್ದರು. ಇದೀಗ ಜೆಡಿಎಸ್ನಲ್ಲಿ ಕಡೆಗಣನೆಯಿಂದಾಗಿ ಕಾಂಗ್ರೆಸ್ ಸೇರಿದ್ದಾರೆ.
ಉಳಿದವರು ಯಾರು?
ಕಾಂಗ್ರೆಸ್ ಸೇರಲು ಬಯಸಿರುವ 60 ಜನರಲ್ಲಿ ಮೊದಲಿಗರನ್ನಾಗಿ ಇದೀಗ ರಮೇಶ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷ ಸೇರಿಸಿಕೊಂಡಿದೆ. ಶೀಘ್ರದಲ್ಲಿಯೇ ಉಳಿದ 59 ನಾಯಕರ ಸೇರ್ಪಡೆ ಆಗಲಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ. ಆಪರೇಶನ್ ಕಮಲದ ಮೂಲಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರು ಅದನ್ನು ಮೀರಿ ಆಪರೇಶನ್ ಕಮಲಕ್ಕೆ ರಿವರ್ಸ್ ಆಪರೇಶನ್ ಮಾಡಲು ಯೋಜನೆ ರೂಪಿಸಿದ್ದರು. ಜೊತೆಗೆ ಸರ್ಕಾರ ರಚನೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ.
ಕಾಂಗ್ರೆಸ್ ಸೇರುತ್ತಿರುವ ಜೆಡಿಎಸ್ ಮಾಜಿ ವಕ್ತಾರ, ಮಾಜಿ ಎಂಎಲ್ಸಿ
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದ ಎಲ್ಲರಿಗೂ ಈವರೆಗೆ ಯಡಿಯೂರಪ್ಪ ಅವರು ನ್ಯಾಯ ಕೊಡಿಸಿಲ್ಲ. ಜೊತೆಗೆ ಬಿಜೆಪಿಯಲ್ಲಿಯೂ ನಾಯಕತ್ವ ಬದಲಾವಣೆಯ ಮಾತು ಜೋರಾಗಿ ಕೇಳಿಬರುತ್ತಿದೆ. ಹೀಗಾಗಿ ಭ್ರಮನಿರಸನಕ್ಕೆ ಒಳಗಾಗಿರುವ ಸಧ್ಯ ಬಿಜೆಪಿಯಲ್ಲಿರುವವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ತಿಳಿದು ಬಂದಿದೆ. ಹೀಗೆ ಕಾಂಗ್ರೆಸ್ ಸೇರುತ್ತಿರುವವರಲ್ಲಿ ಹಾಲಿ ಸಚಿವರ ಬಹಳಷ್ಟು ಆಪ್ತ, ಪ್ರಭಾವಿ ನಾಯಕರಿದ್ದಾರೆ ಎಂಬುದು ಗಮನಸಬೇಕಾದ ಅಂಶ. ಹೀಗಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಆಪರೇಶನ್ ಕಮಲ ಮಾಡಿ ಬೀಗುತ್ತಿದ್ದ ಬಿಜೆಪಿ ನಾಯಕರಿಗೆ ರಿವರ್ಸ್ ಆಪರೇಶನ್ ಮೂಲಕ ಡಿಕೆಶಿ ಏಟು ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರೊಬ್ಬರು ಮಾಹಿತಿ ನೀಡಿದರು.
Recommended Video
ರಿವರ್ಸ್ ಆಪರೇಶನ್ ಕಮಲ
ಮರಳಿ ಕಾಂಗ್ರೆಸ್ಸಿಗೆ ಸಮಿತಿಯಲ್ಲಿ ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷರಾಗಿರುವ ಸಮಿತಿಯಲ್ಲಿ 12 ಸದಸ್ಯರಿದ್ದಾರೆ. ಎಲ್ಲರೂ ಬೇರೆ ಪಕ್ಷಗಳ ನಾಯಕರೊಂದಿಗೆ ಸೌಹಾರ್ಧ ಸಂಬಂಧವನ್ನು ಹೊಂದಿದವರು. ಅವರೇ ಈಗ ಬಜೆಪಿ ನಾಯಕರೊಂದಿಗೆ ಮೊದಲ ಹಂತದ ಮಾತುಕತೆ ನಡೆಸಿ, ಯಶಸ್ವಿಯಾಗಿದ್ದಾರೆ.
ಮಾಜಿ ಶಾಸಕ ಬಿ.ಎ. ಹಸನಬ್ಬ ಅವರು ಸಮಿತಿ ಸಂಚಾಲಕರಾಗಿದ್ದು, ಮಾಜಿ ಶಾಸಕರಾದ ವಿ. ಮುನಿಯಪ್ಪ, ಅಜಯ್ ಕುಮಾರ್ ಸರನಾಯಕ್, ಅಭಯಚಂದ್ರ ಜೈನ್, ಸತೀಶ್ ಸೈಲ್, ಪ್ರಫುಲ್ಲಾ ಮಧುಕರ್, ಮಾಜಿ ಸಂಸದರಾದ ಆರ್. ಧ್ರುವನಾರಾಯಣ, ಬಿ.ಎನ್. ಚಂದ್ರಪ್ಪ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ವಿ.ವೈ. ಘೋರ್ಪಡೆ, ಮಾಜಿ ಮೇಯರ್ ಸಂಪತ್ರಾಜ್ ಹಾಗೂ ಕೃಪಾ ಆಳ್ವಾ ಸಮಿತಿಯ ಇತರ ಸದಸ್ಯರಾಗಿದ್ದಾರೆ. ಸಮಿತಿ ಕೊಡುವ ವರದಿ ಆಧರಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಸೇರಲು ಬಯಸುವ ಬೇರೆ ಪಕ್ಷಗಳ ನಾಯಕರೊಂದಿಗೆ ಖುದ್ದಾಗಿ ಮಾತುಕತೆ ನಡೆಸುತ್ತಿದ್ದಾರೆ.
ಪಕ್ಷ ಸೇರುವವರ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಯಾರ್ಯಾರೊಂದಿಗೆ ಮಾತುಕತೆ ನಡೆಸಲಾಗಿದೆ ಎಂಬುದನ್ನು ಸಮಿತಿ ಗೌಪ್ಯವಾಗಿಟ್ಟಿದೆ.