ಜ್ಯೋತಿಷಿ ಗ್ರಹಣ ಭವಿಷ್ಯ: ಪ್ರಾಣ ಉಳಿಯಲು ಊರು ಬಿಟ್ಟ 60 ಕುಟುಂಬ
ಚಿಕ್ಕಮಗಳೂರು, ಜುಲೈ 27: ಚಂದ್ರ ಗ್ರಹಣ- ಸೂರ್ಯ ಗ್ರಹಣದಂದು ಜ್ಯೋತಿಷಿಗಳು ಹೇಳುವ ಆಚರಣೆ- ಪದ್ಧತಿ ಮತ್ತೊಂದನ್ನು ಗೇಲಿ ಮಾಡಿ, ಇವೆಲ್ಲ ಸಹಜ ವಿದ್ಯಮಾನ, ನೋಡುತ್ತಾ ಖುಷಿ ಪಡಬೇಕೇ ವಿನಾ ಹೆದರಬಾರದು ಎಂದು ಧೈರ್ಯ ಹೇಳುವ ಮಂದಿ ಇರುವ ಕಾಲ- ಸನ್ನಿವೇಶ ಹಾಗೂ ನೆಲದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.
ಜ್ಯೋತಿಷಿಯ ಮಾತಿಗೆ ಹೆದರಿ ಹದಿನೈದು ವರ್ಷದಿಂದ ವಾಸವಾಗಿದ್ದ ಸ್ಥಳವನ್ನೇ ಅಲೆಮಾರಿ ಕುಟುಂಬಗಳು ತೊರೆದಿವೆ. ಹೀಗೆ ಜ್ಯೋತಿಷಿ ಮಾತು ಕೇಳಿ ಊರು ಬಿಟ್ಟು ಹೋಗಿರುವುದು ಒಂದೆರಡು ಕುಟುಂಬವಲ್ಲ. ಲೆಕ್ಕ ಹಾಕಿ ನೋಡಿದರೆ 60ಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ಊರು ತೊರೆದಿವೆ.
ಚಂದ್ರ ಗ್ರಹಣದ ವೇಳೆ ಕೈಗೊಳ್ಳಬೇಕಾದ ಶಾಂತಿ-ಪರಿಹಾರದ ಪೂರ್ಣ ವಿವರ
ಚಿಕ್ಕಮಗಳೂರು ಜಿಲ್ಲೆ ಎನ್.ಆರ್. ಪುರ ತಾಲೂಕಿನ ಬಾಳೆಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗುವಾನಿ ಎಂಬಲ್ಲಿ ಈ ಘಟನೆ ನಡೆದಿದೆ. ಕಳೆದ ನಾಲ್ಕು ವರ್ಷದಿಂದ ಈ ಸ್ಥಳದಲ್ಲಿ 29 ಜನ ಮೃತ ಪಟ್ಟಿದ್ದರು. ನೀವು ಈ ಜಾಗದಲ್ಲಿ ಇದ್ದರೆ ಎರಡು ದಿನದಲ್ಲಿ ಮೂರು ಹೆಣ ಬೀಳುತ್ತವೆ ಎಂದ ಜ್ಯೋತಿಷಿ ಮಾತನ್ನು ಕೇಳಿ ಬೆಚ್ಚಿಬಿದ್ದಿದ್ದಾರೆ.
ಜ್ಯೋತಿಷಿ ಮಾತು ನಂಬಿದ ಅಲೆಮಾರಿ ಕುಟುಂಬಗಳು ಒಂದೇ ದಿನದಲ್ಲಿ ತಾವು ಸಾಕಿದ ಹಸು, ಮೇಕೆ, ಕೋಳಿ, ನಾಯಿ ಸೇರಿದಂತೆ ಗುಡಿಸಲು ಸಹ ಬಿಟ್ಟು ಗ್ರಾಮ ತೊರೆದಿದ್ದಾರೆ.