ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ 10 ಲಕ್ಷಕ್ಕೂ ಅಧಿಕ, HC ಕಳವಳ
ಬೆಂಗಳೂರು, ಜು.6: ಕೋವಿಡ್ ಸಾಂಕ್ರಾಮಿಕ ಮತ್ತಿತರ ಕಾರಣದಿಂದಾಗಿ ರಾಜ್ಯದಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವುದಕ್ಕೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಸರ್ಕಾರವೇ ನಾನಾ ಇಲಾಖೆಗಳ ಮೂಲಕ ನಡೆಸಿ ಸಲ್ಲಿಸಿರುವ ದಾಖಲೆಗಳ ಪ್ರಕಾರ ರಾಜ್ಯಾದ್ಯಂತ ನಾನಾ ವಯೋಮಾನದ 10 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಇದು ಬಹು ದೊಡ್ಡ ಸಂಖ್ಯೆಯಾಗಿದ್ದು, ಇತ್ತೀಚಿನ ದಿನ ವರ್ಷಗಳಲ್ಲಿಯೇ ಇದು ಅತ್ಯಧಿಕ ಪ್ರಮಾಣ. ಹಾಗಾಗಿ ಅಷ್ಟು ದೊಡ್ಡ ಸಂಖ್ಯೆಯ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಸರ್ಕಾರಕ್ಕೆ ನಿಜಕ್ಕೂ ಸವಾಲಿನ ಕೆಲಸವಾಗಿದೆ.
ರಾಜ್ಯದಲ್ಲಿ 70 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ ಎಂದು ಶಿಕ್ಷಣ ಇಲಾಖೆ 2019ರಲ್ಲಿ ಹೇಳಿತ್ತು. ಅದಕ್ಕೆ ಹೋಲಿಸಿದರೆ ಮೂರು ವರ್ಷಗಳಲ್ಲಿ ಆ ಪ್ರಮಾಣ ಭಾರಿ ಏರಿಕೆಯಾಗಿದ್ದು, ಅದಕ್ಕೆ ಕೋವಿಡ್ ಸೇರಿದಂತೆ ನಾನಾ ಕಾರಣಗಳಿವೆ ಎಂಬ ಅಂಶ ಸಮೀಕ್ಷೆಯಲ್ಲಿ ಕಂಡು ಬಂದಿದೆ.
ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಕರೆತರುವ ವಿಚಾರಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೈಕೋರ್ಟ್ ಸ್ವಯಂಪ್ರೇರಿತ ವಾಗಿ ದಾಖಲಿಸಿಕೊಂಡಿರುವ ಪಿಐಎಲ್ ಬುಧವಾರ ಹಂಗಾಮಿ ಸಿಜೆ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗ ಬಂದಿತು.
ಆಗ ಅಮಿಕಸ್ ಕ್ಯೂರಿ ಕೆ.ಎನ್. ಫಣೀಂದ್ರ ಅವರಿಂದ ಹೈಕೋರ್ಟ್ಗೆ ಮೆಮೋ ಸಲ್ಲಿಸಿ, ರಾಜ್ಯದಾದ್ಯಂತ 6 ರಿಂದ 14 ವರ್ಷದವರೆಗಿನ 15,338 ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದಿದ್ದು, ಇದೇ ವಯೋಮಾನದ 10,018 ವಿದ್ಯಾರ್ಥಿಗಳು ಶಾಲೆಗಳಿಗೆ ನೋಂದಣಿಯೇ ಆಗಿಲ್ಲ. 3 ವರ್ಷದ ವರೆಗಿನ 4,54,238 ಹಾಗೂ 4ರಿಂದ 6 ವರ್ಷ ವಯೋಮಾನದ 5,33,206 ವಿದ್ಯಾರ್ಥಿಗಳು ಅಂಗನವಾಡಿಗಳಲ್ಲಿ ನೋಂದಾಯಿಸಿಕೊಂಡಿಲ್ಲ ಎಂದರು.
ಆಗ ನ್ಯಾಯಪೀಠ, ನ್ಯಾಯಾಲಯ ರಚಿಸಿರುವ ಉನ್ನತಾಧಿಕಾರ ಸಮಿತಿ ಜು.16ರಂದು ಸಭೆ ನಡೆಸಿ, ರಾಜ್ಯದಾದ್ಯಂತ ಶಾಲೆಗಳಿಂದ ಹೊರಗುಳಿದ ಮಕ್ಕಳ ವಿಚಾರ ಕುರಿತು ಚರ್ಚಿಸಬೇಕು. ಈ ಮಕ್ಕಳನ್ನು ಶಾಲೆಗೆ ಕರೆತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ನೀಡಬೇಕು ಎಂದು ನಿರ್ದೇಶಿಸಿ, ಜು.19ಕ್ಕೆ ವಿಚಾರಣೆ ಮುಂದೂಡಿತು.
ಈ ವೇಳೆ ಸಿವಿಕ್ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್, ಸರ್ಕಾರದ ಅಂಕಿ ಅಂಶಗಳಲ್ಲಿ ಹೇಳಲಾಗಿರುವ 10 ಲಕ್ಷ ಮಕ್ಕಳು ಮಾತ್ರವಲ್ಲ, 12 ಲಕ್ಷಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅತ್ತ ಗಮನಹರಿಸುತ್ತಿಲ್ಲ. ಆ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಕುರಿತು ತಾವು ಸಲ್ಲಿಸಿರುವ ಕಾರ್ಯತಂತ್ರದ ಮನವಿಯನ್ನು ಸರ್ಕಾರ ಪರಿಗಣಿಸಿಲ್ಲ ಎಂದು ದೂರಿದರು.
Recommended Video
ಮೂರು ವರ್ಷದಿಂದ ಸಮೀಕ್ಷೆ: ಹೈಕೋರ್ಟ್ಗೆ ಆದೇಶದ ಮೇರೆಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ ಬಗ್ಗೆ ಸರ್ಕಾರ 2020ರ ಡಿ.4 ಮತ್ತು 12ರಂದು ಸುತ್ತೋಲೆ ಹೊರಡಿಸಿತ್ತು. ನಿಗದಿಯಂತೆ 2021ರ ಫೆಬ್ರವರಿಯಲ್ಲಿ ಸಮೀಕ್ಷೆ ಮುಗಿಯಬೇಕಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೇರಿದಂತೆ ನಾನಾ ಕಾರಣಗಳಿಂದಾಗಿ ಸಮೀಕ್ಷೆ ವಿಳಂಬವಾಗಿ ಈ ವರ್ಷ ಜನವರಿಯಲ್ಲಿ ಪೂರ್ಣಗೊಂಡಿತ್ತು.