ಹೀಗೂ ಉಂಟೆ! 12 ಜೈನ ವಿಗ್ರಹ ಅಂಚೆಯಲ್ಲಿ ವಾಪಸ್
ಪ್ರಮುಖ ಚೋರ ಸಂತೋಷ್ ದಾಸ್ ಪೊಲೀಸರ ಬಂಧನದಲ್ಲಿರುವಾಗ ಕಳುವಾದ ವಿಗ್ರಹಗಳು ಕೊರಿಯರಿನಲ್ಲಿ ವಾಪಸಾಗಿರುವುದು ವಿಚಿತ್ರವಾಗಿ ಕಿಂಡಿದೆ. ಗಮನಾರ್ಹವೆಂದರೆ ಸಂತೋಷ್ ದಾಸನ ಹೆಂಡತಿ-ಮಾವ (ದಿಗಂಬರ ದಾಸ್ -ದೀಪ್ತಿಮಯಿ) ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರೂ ಮತ್ತೊಂದು ಪ್ರಕರಣದಲ್ಲಿ ಛತ್ತೀಸ್ ಗಢ ಪೊಲೀಸರ ಬಂಧನದಲ್ಲಿದ್ದಾರೆ.
ಹೀಗಿರುವಾಗ ಒಟ್ಟು 12 ವಿಗ್ರಹಗಳು ಛತ್ತೀಸ್ ಗಢದ ರಾಯಪುರದಿಂದ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ speed post ಮೂಲಕ ಮಂಗಳವಾರ ಸಂಜೆ ಒರಿಸ್ಸಾದಿಂದ ಬಂದಿದೆ. ಭುವನೇಶ್ವರ ಪೋಸ್ಟ್ ಆಫೀಸಿನಿಂದ ನವೆಂಬರ್ 2ರಂದು ಇದನ್ನು ಪೋಸ್ಟ್ ಮಾಡಲಾಗಿದೆ. ಆದರೆ ಮೂಡುಬಿದಿರೆಯ ಪ್ರಾಚೀನ ಗುರು ಬಸದಿಯ ಸಿದ್ಧಾಂತ ಮಂದಿರಕ್ಕೆ ಸೇರಿದ 12 ಮೂರ್ತಿಗಳನ್ನು ಪಾರ್ಸೆಲ್ ಮಾಡಿದ್ದು ಯಾರು ಎನ್ನುವುದು ಇನ್ನೂ ನಿಖರವಾಗಿ ತಿಳಿದುಬಂದಿಲ್ಲ.
ಚಿನ್ನ, ಸ್ಫಟಿಕ, ರತ್ನ ಖಚಿತ ಇಷ್ಟೊಂದು ವಿಗ್ರಹಗಳು speed post ಮೂಲಕ ಬರಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪಾರ್ಸೆಲ್ ಬಂದಿರುವುದನ್ನು ಒಪ್ಪಿಕೊಳ್ಳುವ ಪೊಲೀಸರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಿದ್ದಾರೆ.
ಮೂಡುಬಿದಿರೆಯ ಭಟ್ಟಾರಕ ಶ್ರೀ ಇವುಗಳನ್ನು ತಕ್ಷಣವೇ ಪರಿಶೀಲಿಸಿ ಇವೆಲ್ಲವೂ ಸಿದ್ಧಾಂತ ಮಂದಿರಕ್ಕೆ ಸಂಬಂಧಿಸಿದ್ದು ಎಂದು ಖಚಿತಪಡಿಸಿದ್ದೂ ಆಗಿದೆ. ಕಮಿಷನರ್ ಮನೀಶ್ ಕರ್ಬೇಕರ್, ತನಿಖಾಧಿಕಾರಿ ಎಸಿಪಿ ರವಿಕುಮಾರ್, ಮೂಡುಬಿದಿರೆ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್ಸೈ ರಮೇಶ ಕುಮಾರ್ ಸಮಕ್ಷಮ ಪರಿಶೀಲಿಸಿರುವುದಾಗಿ ಭಟ್ಟಾರಕ ಶ್ರೀ ತಿಳಿಸಿದ್ದಾರೆ.
ವಜ್ರದ ಚಂದ್ರಪ್ರಭಾ ಸ್ವಾಮಿ, ಸ್ಫಟಿಕದ ಸಿದ್ಧ ಪರಮೇಷ್ಠಿ, ಸ್ಫಟಿಕದ ಮುನಿಸುವ್ರತ ಸ್ವಾಮಿ, ಕಚ್ಚಾಪನ್ನಾ ಅರಹಂತ ಪರಮೇಷ್ಠಿ, ನೀಲರತ್ನ ಮುನಿಸುವ್ರತ, ನೀಲರತ್ನ ಅರಹಂತ, ಸ್ಫಟಿಕರತ್ನ ಅರ್ಹನಾಥ, ಗಜಮುತ್ತಿನ ಚಂದ್ರಪ್ರಭ ಸ್ವಾಮಿ, ಪಚ್ಚೆ ಪಾರ್ಶ್ವನಾಥ, ನೀಲರತ್ನ ಮಲ್ಲಿನಾಥ ಸಿದ್ಧಪರಮೇಷ್ಠಿ, ತುಂಡಾದ ಸ್ಫಟಿಕದ ಸಿದ್ಧರು, ಸ್ಫಟಿಕ ಮತ್ತು ನೀಲದ ಚೂರುಗಳು, ಬೆಳ್ಳಿಯ ಚಿಕ್ಕ ಪೀಠ ಈಗ ಪೊಲೀಸರ ವಶದಲ್ಲಿರುವ ಸೊತ್ತುಗಳಾಗಿವೆ. 3 ವಿಗ್ರಹ ಈ ಹಿಂದೆಯೇ ಲಭಿಸಿದ್ದವು. 5 ಚಿನ್ನದ ವಿಗ್ರಹಗಳನ್ನು ಕರಗಿಸಲಾಗಿದೆ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದರು.