ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ, ಎಲ್ಲಿ ಇಲ್ಲ
ಬೆಂಗಳೂರು, ಜೂನ್ 18: ನೈಋತ್ಯ ಮುಂಗಾರು ಕರ್ನಾಟಕದ ಕರಾವಳಿ ಮತ್ತು ಉತ್ತರ ಭಾಗದಲ್ಲಿ ಆಕ್ಟೀವ್ ಆಗಿದ್ದು, ರಾಜ್ಯದ ಅಲ್ಲಲ್ಲಿ ಮಳೆಯಾಗಲಿದೆ, ಉಳಿದ ಪ್ರದೇಶಗಳಲ್ಲಿ ಒಣಹವೆ ಮುಂದುವರೆಯಲಿದೆ. ಕರ್ನಾಟಕದ ಕರಾವಳಿ ಭಾಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಜೂನ್ 18 ರಿಂದ 22ರವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಳಗಾವಿ, ಹಾವೇರಿ, ಕಲಬುರಗಿ, ಚಿಕ್ಕಮಗಳೂರು ಕೊಡಗು, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಲಿದೆ.ಕರಾವಳಿ ಕರ್ನಾಟಕದಲ್ಲಿ ಮುಂಗಾರು ಚುರುಕುಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಳಗಾವಿ ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ: ಕರ್ನಾಟಕ-ಗೋವಾ ರಸ್ತೆ ಸಂಪರ್ಕ ಕಡಿತ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಟಣೆ ಹೊರಡಿಸಿದ್ದು, ಇಂದಿನಿಂದ ಜೂನ್ 20ರ ವರೆಗೂ ಬಿರುಸಿನ ಮುಂಗಾರು ಸಾಧ್ಯತೆ ಇದೆ. ಹೀಗಾಗಿ ಇಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ವಾರಾಂತ್ಯದವರೆಗೂ ಧಾರಾಕಾರ ಮಳೆ ಸುರಿಯಲಿದ್ದು, ಜಿಲ್ಲೆಯಲ್ಲಿ ಹಳದಿ ಅಲರ್ಟನ್ನು ಹವಾಮಾನ ಇಲಾಖೆ ಘೋಷಿಸಿದೆ.
ಒಂದು ವಾರದ ಅಂತರದಲ್ಲಿ ಸುಮಾರು 500 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ. ಗುಡುಗು ಮಿಶ್ರಿತ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಡಲಿಗಿಳಿದು ಮೀನುಗಾರಿಕೆ ನಡೆಸುವಾಗ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ. ಜೊತೆಗೆ ನದಿ ಮತ್ತು ಸಮುದ್ರ ತೀರಕ್ಕೆ ಸಾರ್ವಜನಿಕರು ತೆರಳಬಾರದು ಎಂದು ನದಿ ಪಾತ್ರದ ಜನರಿಗೆ ಎಚ್ಚರಿಕೆಯನ್ನು ನೀಡಿದೆ.
ಎಲ್ಲೆಲ್ಲಿ ಹೆಚ್ಚು ಮಳೆಯಾಗಿದೆ
ಅಂಕೋಲಾ, ಮೂಡಬಿದಿರೆ, ಕಾರವಾರ, ಕೊಲ್ಲೂರು, ಗೋಕರ್ಣ, ಹೊನ್ನಾವರ, ಕೋಟಾ, ಕದ್ರ, ಹೊಸನಗರ, ಕುಮಟಾ, ಗೇರುಸೊಪ್ಪ, ಶಿರಾಲಿ, ಕಾರ್ಕಳ, ಧರ್ಮಸ್ಥಳ, ಭಾಗಮಂಡಲ, ಹುಂಚದಕಟ್ಟೆ, ಪಣಂಬೂರಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಮುಂದಿನ ಮೂರ್ನಾಲ್ಕು ದಿನಗಳು ಇದೇ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳಲಿದೆ.
ಸಾಧಾರಣ ಮಳೆ ಎಲ್ಲೆಲ್ಲಿ?
ಸುಬ್ರಹ್ಮಣ್ಯ, ಬೆಳಗಾವಿ, ಕಮ್ಮರಡಿ, ಯಲ್ಲಾಪುರ, ಬನವಾಸಿ, ಮಾಣಿ, ಚಿಕ್ಕೋಡಿ, ಸಿದ್ದಾಪುರ, ಆಳಂದ, ಸಂಕೇಶ್ವರ, ತಾಳಗುಪ್ಪ, ಮಡಿಕೇರಿ, ಮುಂಡಗೋಡು, ಬೈಲಹೊಂಗಲ, ಶೃಂಗೇರಿ, ಕಲಬುರಗಿ, ಸುಳ್ಯ, ಬಸವನ ಬಾಗೇವಾಡಿ, ಬೀದರ್, ಮಹಾಲಿಂಗಪುರ, ಕಿರವತ್ತಿ, ವಿರಾಜಪೇಟೆ, ಜಮಖಂಡಿ, ಹಡಗಲಿ, ತ್ಯಾಗರ್ತಿಯಲ್ಲಿ ಸಾಧಾರಣ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ಎಲ್ಲೆಲ್ಲಿ ಮಳೆ
ನೈಋತ್ಯ ಮುಂಗಾರು ಚುರುಕುಗೊಂಡಿದ್ದು, ಕರ್ನಾಟಕದ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಮಳೆಯಾಗಲಿದೆ. ಜೂನ್ 26ರವರೆಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಮಳೆ ಇಲ್ಲ
ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯ ಬರುವ ಸಾಧ್ಯತೆ ಕಡಿಮೆ ಇದ್ದು, ಒಣಹವೆ ಮುಂದುವರೆಯಲಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಕಲಬುರಗಿ,ಹಾವೇರಿ, ಬೆಳಗಾವಿಯಲ್ಲಿ ಸಾಧಾರಣ ಮಳೆಯಾಗಲಿದೆ.