ಕನ್ನಡ ದಿನಪತ್ರಿಕೆಗಳು ಕಂಡಂತೆ ಅಪ್ಪುಗೆ, ಕಣ್ಮಿಟುಕು ಮತ್ತು ಅವಿಶ್ವಾಸ!
Recommended Video
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಕೊನೆಗೂ ವಿಶ್ವಾಸ ಮತ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಲೋಕಸಭೆಯಲ್ಲಿ 12 ತಾಸಿನ ಚರ್ಚೆಯಲ್ಲಿ ಅತ್ಯಂತ ಗಮನ ಸೆಳೆದಿದ್ದು ರಾಹುಲ್ ಗಾಂಧಿ ಅವರ ಅಪ್ಪುಗೆಯ ನಡೆ, ಜೊತೆಗೆ ಕಣ್ಣು ಮಿಟಿಕಿಸಿದ ಪ್ರಹಸನ!
ಅವಿಶ್ವಾಸ ನಿರ್ಣಯ : ನರೇಂದ್ರ ಮೋದಿ ಪ್ರತ್ಯುತ್ತರ, ರಾಹುಲ್ ನಿರುತ್ತರ
ಇಂದು ಕನ್ನಡ ದಿನಪತ್ರಿಕೆಗಳಲ್ಲೆಲ್ಲ ಅದೇ ಮುಖಪುಟದ ಸುದ್ದಿಯಾಗಿ ರಾರಾಜಿಸುತ್ತಿದೆ. ಸಂಸತ್ತಿನಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಜು.20 ರಂದು ನಡೆದ ವಿಶ್ವಾಸ ಮತ ನಿರ್ಣಯ ಪ್ರಕ್ರಿಯೆಯಲ್ಲಿ ಬಿಜೆಪಿ 325 ಮತ ಪಡೆದು ವಿಶ್ವಾಸ ಮತ ಪ್ರಕ್ರಿಯೆಯಲ್ಲಿ ಗೆಲುವು ಸಾಧಿಸಿತು. ಸಂಸತ್ತಿನಲ್ಲಿ ಭಾಷಣ ಮಾಡಿದನ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಬಂದು ತಬ್ಬಿದ್ದು, ಮತ್ತು ಅದಕ್ಕೆ ಮೊನಚು ಪದಗಳಿಂದ ಮೋದಿ ಉತ್ತರಿಸಿದ್ದು ನಿನ್ನೆಯ ಅಧಿವೇಶನದ ಹೈಲೈಟ್ಸ್.
ಇವುಗಳನ್ನು ಕನ್ನಡ ದಿನಪತ್ರಿಕೆಗಳು ಹೇಗೆ ವಿವರಿಸಿವೆ ನೋಡಿ.
ವಿಜಯ ಕರ್ನಾಟಕ
'ಅವಿಶ್ವಾಸದ hugಜಗ್ಗಾಟ' ಎಂಬುದು ವಿಜಯ ಕರ್ನಾಟಕದ ಹೆಡ್ ಲೈನ್. ಇದು ಇಂದಿನ ಹೆಡ್ ಲೈನ್ ಆಫ್ ದಿ ಡೇ! 'ಮೋದಿ ಟಾರ್ಗೆಟ್ ಮಾಡಲು ಹೋಗಿ ರಾಹುಲ್ ಗೆ ಮುಖಭಂಗ, ರಫೆಲ್ ಡೀಲ್ ಕುರಿತ ರಾಹುಲ್ ಪ್ರಶ್ನೆಗೆ ಫ್ರಾನ್ಸ್ ಉತ್ತರ, ಅವಿಶ್ವಾಸ ನಿರ್ಣಯಕ್ಕೆ ಸಿಗಲಿಲ್ಲ ಬೆಂಬಲ, ಮೋದಿ ಸರ್ಕಾರ ನಿರಾಳ' ಈ ಸಾಲುಗಳಲ್ಲಿ ಅಧಿವೇಶನವನ್ನು ವಿವರಿಸಿದೆ ವಿಜಯ ಕರ್ನಾಟಕ.
ಸಂಸತ್ನಲ್ಲಿ ಮೋದಿ ಭಾಷಣ : 7 ಪ್ರಮುಖ ಹೇಳಿಕೆಗಳು
ಉದಯವಾಣಿ
'ಪ್ರತಿಪಕ್ಷಗಳ ಅವಿಶ್ವಾಸಕ್ಕೆ ಸೋಲಿನ ಅಪ್ಪುಗೆ' ಎಂಬ ಶೀರ್ಷಿಕೆ ನೀಡಿದೆ 'ಉದಯವಾಣಿ'. ನಂಬರ್ ಗೇಮ್ ನಲ್ಲಿ ಬಚಾವ್ ಆದ ಎನ್ ಡಿಎ ಸರ್ಕಾರ, ರಾಹುಲ್ ಭಾಷಣಕ್ಕೆ ಮೋದಿ ತೀಕ್ಷ್ಣ ಪ್ರತ್ಯುತ್ತರ ಎಂದು ಉದಯವಾಣಿ ಅವಿಶ್ವಾಸ ನಿರ್ಣಯದ ಪ್ರಹಸನವನ್ನು ವಿವರಿಸಿದೆ.
ಕನ್ನಡ ಪ್ರಭ
'ಅವಿಶ್ವಾಸಕ್ಕೆ ಭಾರೀ ಸೋಲು' ಎಂಬ ತಲೆಬರಹ ಮತ್ತು ಮೋದಿ ಪರ 325 ಮೋದಿ ವಿರುದ್ಧ 126 ಎಂಬ ಕಿಕ್ಕರ್ ನೀಡಿದೆ ಕನ್ನಡ ಪ್ರಭ. ಜೊತೆಗೆ ಮೋದಿಗೆ ರಾಹುಲ್ ಅಪ್ಪುಗೆಯನ್ನು ಹೈಲೈಟ್ ಮಾಡಿ ಚಿತ್ರ ಸಮೇತ ನೀಡಿದೆ.
ವಿಜಯವಾಣಿ
ವಿಶ್ವಾಸ ಗೆದ್ದ ಸರ್ಕಾರ, ಮೋದಿ ಚಾಂಪಿಯನ್ ಎಂಬ ತಲೆಬರಹ ನೀಡಿದೆ ವಿಜಯವಾಣಿ. ಪ್ರತಿಪಕ್ಷಗಳಿಗೆ ಮುಖಭಂಗ, ಬಿಜೆಪಿ ಪರ ಎಐಎಡಿಎಂಕೆ, ರಾಹುಲ್ ಆಲಿಂಗನ, ಕಣ್ಣಾಟದ ಪ್ರಹಸನ ಎಂದು ಇಡೀ ಅಧಿವೇಶನವನ್ನು ಕೆಲವೇ ಸಾಲುಗಳಲ್ಲಿ ವಿವರಿಸಿದೆ ವಿಜಯವಾಣಿ ದಿನಪತ್ರಿಕೆ.
ಹೊಸ ದಿಗಂತ
'ಮೋದಿಗೆ ಹೆಚ್ಚಿದ ಜನತೆಯ ವಿಶ್ವಾಸ' ಎಂದು ಈ ಗೆಲುವನ್ನು ವಿವರಿಸಿದೆ ಹೊಸದಿಗಂತ ಪತ್ರಿಕೆ. ರಾಹುಲ್ ಗಾಂಧಿ ಅಪ್ಪುಗೆಯ ಚಿತ್ರವನ್ನು ಮುಖಪುಟದಲ್ಲಿ ಪ್ರಕಟಿಸಿದೆ.
ವಿಶ್ವವಾಣಿ
ಅವಿಶ್ವಾಸ ನಿರ್ಣಯ ಗೋತಾ ಎಂಬ ತಲೆಬರಹ ನೀಡಿದೆ ವಿಶ್ವವಾಣಿ ಪತ್ರಿಕೆ. ಇಲ್ಲೂ ರಾಹುಲ್-ಮೋದಿ ಅಪ್ಪುಗೆಯ ಚಿತ್ರವೇ ರಾರಾಜಿಸಿದೆ. ಜೊತೆಗೆ ಅವಿಶ್ವಾಸ ನಿರ್ಣಯದ ಕುರಿತು ಗಣ್ಯರ ಪ್ರತಿಕ್ರಿಯೆಯನ್ನೂ ವಿಶ್ವವಾಣಿ ಮುಖಪುಟದಲ್ಲಿ ನೀಡಿದೆ.
ಪ್ರಜಾವಾಣಿ
'ರಾಹುಲ್ ಅಪ್ಪಿಕೋ ಆಂದೋಲನ' ಎಂಬುದು ಪ್ರಜಾವಾಣಿಯ ಹೆಡ್ ಲೈನ್. ಕಣ್ಣಾಮುಚ್ಚೆ ಕಾಡೇಗೂಡೆ ಎಂದು ರಾಹುಲ್ ಕಣ್ಣೇಟಿನ ಪ್ರಹಸನವನ್ನೂ ಚಿತ್ರ ಸಮೇತ ವಿವರಿಸಿದೆ. ಅವಿಶ್ವಾಸ ಚರ್ಚೆ: ಲೇವಡಿ, ಮೆಚ್ಚುಗೆಗೆ ಕಾರಣವಾದ ಕಣ್ಣು ಮಿಟುಕು: ಆಡಳಿತ ಪಕ್ಷದಿಂದ ತೀವ್ರ ಟೀಕೆ ಎಂದು ಅಧಿವೇಶನದ ಮುಖ್ಯಾಂಶವನ್ನು ಒಂದು ಪದದಲ್ಲಿ ವಿವರಿಸಿದೆ.
ವಾರ್ತಾ ಭಾರತಿ
'ಪ್ರಧಾನಿ ಭ್ರಷ್ಟಾಚಾರದ ಭಾಗೀದಾರ', ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಭಾರತೀಯರಲ್ಲವೇ ಎಂದು ರಾಹುಲ್ ಗಾಂಧಿ ಮಾತನ್ನೇ ತಲೆಬರಹವನ್ನಾಗಿ ನೀಡಿದೆ ವಾರ್ತಾ ಭಾರತಿ. ಜೊತೆಗೆ ಅಪ್ಪುಗೆಯ ಅದೇ ಚಿತ್ರ ಇಲ್ಲೂ ರಾರಾಜಿಸಿದೆ.
ಸಂಯುಕ್ತ ಕರ್ನಾಟಕ
'ಬ್ರಹ್ಮಾಸ್ತ್ರಕ್ಕೆ ತಣ್ಣೀರು' ಎಂಬುದು ಸಂಯುಕ್ತ ಕರ್ನಾಟಕದ ತಲೆಬರಹ. ಅವಿಶ್ವಾಸ ನಿರ್ಣಯಕ್ಕೆ ನಿರೀಕ್ಷಿತ ಸೋಲು ಎಂದು ನಿನ್ನೆಯ ಪ್ರಹಸನವನ್ನು ಸಂಯುಕ್ತ ಕರ್ನಾಟಕ ವಿವರಿಸಿದೆ. ಜೊತೆಗೆ ರಾಹುಲ್ ಮೋದಿ ಅಪ್ಪುಗೆಯ ಚಿತ್ರ ಮುಖಪುಟದ ಹೈಲೈಟ್ ಆಗಿದೆ.