ಮೂರು ಜಿಲ್ಲೆಯಲ್ಲಿ Orange ಅಲರ್ಟ್; ಅಂಕೋಲದಲ್ಲಿ ಭಾರಿ ಮಳೆ
ಬೆಂಗಳೂರು, ಜೂನ್ 14 : ಕರ್ನಾಟಕದ ಕರಾವಳಿಯಲ್ಲಿ ನೈಋತ್ಯ ಮುಂಗಾರು ಚುರುಕುಗೊಂಡಿದೆ. ಮೂರು ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಣೆ ಮಾಡಲಾಗಿದೆ. ಶನಿವಾರ ಅಂಕೋಲದಲ್ಲಿ 20 ಸೆಂ. ಮೀ. ಅತಿ ಹೆಚ್ಚು ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಜೂನ್ 14 ಮತ್ತು 15ರಂದು ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. 45 ರಿಂದ 55 ಕಿ. ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ.
ಅಂಕೋಲಾದಲ್ಲಿ ಭಾರೀ ಮಳೆ: 40 ಕ್ಕೂ ಹೆಚ್ಚು ಮನೆಗಳು ಜಲಾವೃತ
ಜೂನ್ 15ರ ನಂತರ ಕರಾವಳಿಯಲ್ಲಿ ಮಳೆ ಪ್ರಮಾಣ ಕೊಂಚ ತಗ್ಗಲಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ವಾರಾಂತ್ಯದಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಳೆ
ಶನಿವಾರ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 20 ಸೆಂ. ಮೀ. ಅತಿ ಹೆಚ್ಚು ಮಳೆಯಾಗಿದೆ. ಕೋಟ, ಕೊಲ್ಲೂರಿನಲ್ಲಿ 9, ಕುಂದಾಪುರ, ಹೊನ್ನಾವರದಲ್ಲಿ 8, ಗೋಕರ್ಣ, ಸಿದ್ದಾಪುರದಲ್ಲಿ 6, ಕಾರವಾರದಲ್ಲಿ 5, ಕಾರ್ಕಳದಲ್ಲಿ 4 ಸೆಂ. ಮೀ. ಮಳೆಯಾಗಿದೆ.
ರಾಜ್ಯಾದ್ಯಂತ ವ್ಯಾಪಿಸಿದ ಮುಂಗಾರು: ಕರಾವಳಿಗೆ ಎಚ್ಚರಿಕೆ
ಮಂಗಳೂರು, ನಿಪ್ಪಾಣಿ ಮತ್ತು ಹೊಸನಗರದಲ್ಲಿ 3, ಚಿಕ್ಕೋಡಿ, ಹುಂಚದಕಟ್ಟೆ ಹಾಗೂ ಕಮ್ಮರಡಿಯಲ್ಲಿ 2 ಸೆಂ. ಮೀ. ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಇದ್ದು, ಉಷ್ಣಾಂಶ ಕಡಿಮೆಯಾಗಿದೆ. ಆಗಾಗ ತುಂತುರು ಮಳೆಯಾಗುವ ನಿರೀಕ್ಷೆ ಇದೆ.
ಕೊಡಗು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಿದ್ದು ಶನಿವಾರ ದಿನವಿಡೀ ಮಳೆಯಾಗಿದೆ. ಶೀತಗಾಳಿ ಬೀಸುತ್ತಿದ್ದು, ಮುಂದಿನ ಎರಡು ದಿನಗಳ ಕಾಲ ಮಳೆ ಮತ್ತಷ್ಟು ಬಿರುಸಾಗುವ ನಿರೀಕ್ಷೆ ಇದೆ. ಮಡಿಕೇರಿ, ಭಾಗಮಂಡಲ, ತಲಕಾವೇರಿ ನಾಪೋಕ್ಲು ಭಾಗದಲ್ಲಿಯೂ ಉತ್ತಮ ಮಳೆಯಾಗುತ್ತಿದೆ.