ಕರಾವಳಿ ಕರ್ನಾಟಕ, ಕೇರಳಕ್ಕೆ ಮಾತ್ರ ಸೀಮಿತವಾದ ಮುಂಗಾರು
ಬೆಂಗಳೂರು, ಜೂನ್ 17: ಮುಂಗಾರು ಇದೀಗ ಕರ್ನಾಟಕದ ಕರಾವಳಿ ಭಾಗ ಹಾಗೂ ಕೇರಳಕ್ಕೆ ಮಾತ್ರ ಸೀಮಿತವಾದಂತಿದೆ. ದೇಶದ ಕೃಷಿ ಕ್ಷೇತ್ರದ ಬೆನ್ನೆಲುಬಾಗಿರುವ ಮುಂಗಾರು ಮಾರುತಗಳು ಕೇರಳವನ್ನು ಪ್ರವೇಶಿಸಿ 8 ದಿನಗಳು ಉರುಳಿದರೂ ದೇಶಾದ್ಯಂತ ವ್ಯಾಪಿಸಿಲ್ಲ.
ಮುಂಗಾರು ಮಾರುತಗಳ ಪ್ರಭಾವದಿಂದ ಕೇರಳ ಹಾಗೂ ಕರ್ನಾಟಕ ಕರಾವಳಿ ಹೊರತುಪಡಿಸಿ ಬೇರೆಲ್ಲೂ ಹೆಚ್ಚು ಮಳೆಯಾಗಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಇನ್ನು 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ಮುಂಗಾರು ಚುರುಕು
ವಾಯು ಚಂಡಮಾರುತ ಬಾರದೇ ಇದ್ದಿದ್ದರೆ ಇಷ್ಟೊತ್ತಿಗಾಗಲೇ ಮುಂಗಾರು ಇಡೀ ದೇಶವನ್ನೇ ವ್ಯಾಪಿಸಿಕೊಳ್ಳುತ್ತಿತ್ತು. ಸದ್ಯ ಮುಂಗಾರು ಮಾರುತಗಳು ದಕ್ಷಿಣದಲ್ಲಿ ಮಂಗಳೂರು, ಮೈಸೂರು, ಕಡಲೂರು ಹಾಗೂ ಈಶಾನ್ಯದಲ್ಲಿ ಪಾಸಿಘಾಟ್, ಅಗರ್ತಲಾದಲ್ಲಿ ನೆಲೆ ನಿಂತಿದೆ. ಈಗ ವಾಯು ಚಂಡಮಾರುತ ದುರ್ಬಲವಾಗುತ್ತಿದ್ದು, ಸೋಮವಾರ ಸಂಜೆ ವಾಯುಭಾರ ಕುಸಿತ ರೂಪದಲ್ಲಿ ಗುಜರಾತ್ ಕರಾವಳಿಯನ್ನು ಹಾದು ಹೋಗಲಿದೆ.
ಬಳಿಕ ಎರಡು ಮೂರು ದಿನಗಳಲ್ಲಿ ಮುಂಗಾರು ದೇಶವನ್ನು ಆವರಿಸಲಿದೆ. ಮುಂಗಾರು ವಿಸ್ತರಣೆಯಾಗದ ಪರಿಣಾಮ ದೇಶದಲ್ಲಿ ಶೇ.43ರಷ್ಟು ಮಳೆಯ ಅಭಾವ ಉಂಟಾಗಿದೆ. ಮಹಾರಾಷ್ಟ್ರದಿಂದ ಗುಜರಾತ್ ವರೆಗಿನ ಕರಾವಳಿಯಲ್ಲಿ ಮಳೆಯಾಗಿದೆ.