ಹವಾಮಾನ ಇಲಾಖೆ ಆಶ್ವಾಸನೆ ಹುಸಿ? ಮುಂಗಾರು ವಿಳಂಬ?
ಜೂನ್ ಮೊದಲ ವಾರದಲ್ಲಿ ಕರ್ನಾಟಕವನ್ನು ಪ್ರವೇಶಿಸಬೇಕಿದ್ದ ಮುಂಗಾರು ಮಾರುತಗಳು ಜೂನ್ ತಿಂಗಳು ಆರಂಭವಾದರೂ ಇನ್ನೂ ಪ್ರವೇಶಗೊಂಡಿಲ್ಲ.
ಬೆಂಗಳೂರು, ಜೂನ್ 5: ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಲಿದ್ದು, ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಹೆಚ್ಚಾಗಿ ಮಳೆಯಾಗಲಿದೆ ಎಂದು ಹೇಳಿದ್ದ ಹವಾಮಾನ ಇಲಾಖೆಯ ಅಧಿಕಾರಿಗಳ ಮಾತು ಸುಳ್ಳಾಗಿದೆ.
ಮೇ ತಿಂಗಳಲ್ಲಿನ ಸುರಿದ ಅವಧಿ ಪೂರ್ವ ಮುಂಗಾರು ಮಳೆ ರೈತ ಸಮುದಾಯದಲ್ಲಿ ಖುಷಿ ತಂದಿತ್ತು. ಜೂನ್ ಮೊದಲ ವಾರದಲ್ಲೇ ಮುಂಗಾರು ಆರಂಭವಾಗುತ್ತದೆ ಎಂದೂ ಹೇಳಿದ್ದರು. ಆದರೆ, ಅಂಥ ಲಕ್ಷಣಗಳ್ಯಾವೂ ಕಾಣುತ್ತಿಲ್ಲ ಎಂಬುದು ರೈತರ ಅಳಲಾಗಿದೆ.[ಮಳೆಗಾಗಿ ತಲಕಾವೇರಿಯಲ್ಲಿ ಸಚಿವ ಎಂ ಬಿ ಪಾಟೀಲ್ ವಿಶೇಷ ಪೂಜೆ]
ಆದರೂ, ಜೂನ್ 9ರೊಳಗೆ ಮುಂಗಾರು ಆರಂಭವಾಗುತ್ತದೆಂದು ಈ ಹಿಂದೆ ಹವಾಮಾನ ಇಲಾಖೆಯು ಹೇಳಿದ್ದರಿಂದಾಗಿ ಅಲ್ಲಿಯವರೆಗೆ ರೈತರು ಕಾಯಬೇಕಾಗಿದೆ. ಆಗಲೂ ಮಳೆಯಾಗದಿದ್ದಲ್ಲಿ ಅನ್ನದಾತ ಚಿಂತೆಗೆ ಬೀಳುವುದು ಖಾತ್ರಿ ಎಂಬಂತಾಗಿದೆ.[ಮುದ್ದಾದ ನೆನಪುಗಳ ಬಿಚ್ಚಿಡುವ ಬೆಂಗಳೂರಿನ ಮಳೆ!]
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ ಎಂದು ಈಗ ಮತ್ತೊಂದು ಮಾಹಿತಿಯೂ ಹರಿದಾಡುತ್ತಿದೆ. ಹಾಗಾದಲ್ಲಿ, ಮಂಗಾರು ಮಳೆ ಮಾರುತಗಳು ಕರ್ನಾಟಕವನ್ನು ಪ್ರವೇಶಿಸುವ ಕಾಲಕ್ಕೆ ಬಂಗಾಳದ ವಾಯುಭಾರ ಕುಸಿತವಾಗಿ ಉಂಟಾಗುವ ಮಳೆಗೂ ತಾಳೆಯಾಗಲಿದೆ.[ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ಅಧಿಕಾರಿಗಳ ರಜೆಗೆ ಬಿತ್ತು ಕತ್ತರಿ!]
ಆದರೂ, ನಿರೀಕ್ಷಿತವಾಗಿ ಮುಂಗಾರು ಆರಂಭವಾಗದಿದ್ದರೆ ರೈತರು ಉತ್ತಮ ಮಳೆಗಳಿಂದ ವಂಚಿತರಾಗಿ ಸಂಕಷ್ಟಕ್ಕೀಡಾಲಿದ್ದಾರೆಂಬ ಆತಂಕ ಎಲ್ಲೆಡೆ ಮನೆ ಮಾಡಿದೆ.