Breaking:ಕರ್ನಾಟಕದಲ್ಲಿ ತಗ್ಗಿದ ಮುಂಗಾರು ಆರ್ಭಟ: 3ಜಿಲ್ಲೆಗೆ ಭಾರಿ ಮಳೆ
ಬೆಂಗಳೂರು ಆಗಸ್ಟ್ 09: ಕರ್ನಾಟಕದಾದ್ಯಂತ ನಿರಂತರವಾಗಿ ಅಬ್ಬರಿಸಿದ್ದ ಮುಂಗಾರು ಮಳೆ ಸಹಜ ಸ್ಥಿತಿಯತ್ತ ಮುಖ ಮಾಡಿದೆ. ಅತ್ಯಧಿಕ ಭಾರಿ ಮಳೆ ದಾಖಲಾಗಿದ್ದ ಜಿಲ್ಲೆಗಳಲ್ಲಿ ಇದೀಗ ಸಾಧಾರಣದಿಂದ ಭಾರಿ ಮಳೆ ದಾಖಲಾಗುವ ಲಕ್ಷಣಗಳು ಕಂಡು ಬಂದಿದ್ದು, ಇದು ಪ್ರವಾಹ ಪೀಡಿತ ಪ್ರದೇಶದ ಜನರಲ್ಲಿ ನಿರಾಳತೆ ಮೂಡಿಸಿದೆ.
Recommended Video
ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದ ಬಿಟ್ಟುಬಿಡದೇ ಆರ್ಭಟಿಸಿದ್ದ ಮುಂಗಾರು ಮಳೆ ಬಹುತೇಕ ತಣ್ಣಗಾಗುವ ಮುನ್ಸೂಚನೆ ಇದೆ. ಮಲೆನಾಡಿನ ಮೂರು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಹಲವೆಡೆ ಮಾತ್ರ ಅತೀ ಭಾರಿ ಮಳೆ ಸುರಿಯಲಿದ್ದು, ಅವುಗಳಿಗೆ ಬುಧವಾರ ಮಾತ್ರ 'ಆರೆಂಜ್ ಅಲರ್ಟ್' ನೀಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ನಿರಂತರ ಹವಾಮಾನ ವೈಪರಿತ್ಯಗಳ ಪ್ರಭಾವದಿಂದ ಕರಾವಳಿ ಕರ್ನಾಟಕ, ಮಲೆನಾಡಿನ ಜಿಲ್ಲೆಗಳು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಅತೀ ಭಾರಿಯಿಂದ ಅತ್ಯಧಿಕ ಭಾರಿ ಮಳೆ ದಾಖಲಾಗಿತ್ತು. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮಡಿಕೇರಿ ಜಿಲ್ಲೆಗಳು ರೆಡ್ ಅಲರ್ಟ್ ಪಡೆದಿದ್ದವು. ಇದೀಗ ಆ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಬೀಳುವ ನಿರೀಕ್ಷೆ ಹಿನ್ನೆಲೆ 'ಯೆಲ್ಲೋ ಅಲರ್ಟ್' ಕೊಡಲಾಗಿದೆ.
ಆಗಸ್ಟ್ 13ರವರೆಗೆ ಕರಾವಳಿಗೆ ಮಳೆ
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಬೀದರ್, ಹಾವೇರಿ, ಕಲಬುರಗಿಗಳಲ್ಲಿ ಮುಂದಿನ 48ಗಂಟೆ ಒಂದೆರಡು ಕಡೆ ಭಾರಿ ಮಳೆ ಬಿದ್ದರೆ ಉಳಿದೆಡೆ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ. ಇನ್ನೂ ಮಲೆನಾಡಿನ ಜಿಲ್ಲೆ ಬಿಟ್ಟು ಉಳಿದ ದಕ್ಷಿಣ ಒಳನಾಡಿನ ಯಾವ ಭಾಗದಲ್ಲಿ ಅಷ್ಟಾಗಿ ಮಳೆ ಕಂಡು ಬಾರದು ಎನ್ನಲಾಗಿದೆ. ಆಗಸ್ಟ್ 13ರವರೆಗೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆ ಮುಂದುವರಿಯಲಿದ್ದು, 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.