ಕರ್ನಾಟಕ; 8% ಮಳೆ ಕೊರತೆಯೊಂದಿಗೆ ಅಂತ್ಯವಾದ ಮುಂಗಾರು ಅವಧಿ
ಬೆಂಗಳೂರು, ಅಕ್ಟೋಬರ್ 01: ಈ ಬಾರಿ ರಾಜ್ಯದಲ್ಲಿ ಒಟ್ಟಾರೆಯಾಗಿ 8% ಮಳೆ ಕೊರತೆಯೊಂದಿಗೆ ಮುಂಗಾರು ಅವಧಿ ಅಧೀಕೃತವಾಗಿ ಅಂತ್ಯವಾಗಿದೆ.
ಆಗಸ್ಟ್ ತಿಂಗಳಿನಲ್ಲಿ 47% ಮಳೆ ಕೊರತೆ ಉಂಟಾಗಿತ್ತು. ಸೆಪ್ಟೆಂಬರ್ ತಿಂಗಳಿನಲ್ಲಿ ಅಧಿಕ ಮಳೆಯಾಗಿದ್ದು, ರಾಜ್ಯದಲ್ಲಿ ಒಟ್ಟಾರೆ 8% ಮಳೆ ಕೊರತೆ ದಾಖಲಾಗಿದೆ.
ಈ ಬಾರಿ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆ; IMD
ನೈಋತ್ಯ ಮುಂಗಾರಿನ ನಾಲ್ಕು ತಿಂಗಳ ಅವಧಿಯು ಅಧೀಕೃತವಾಗಿ ಸೆಪ್ಟೆಂಬರ್ 30ಕ್ಕೆ ಅಂತ್ಯವಾಗಿದ್ದು, ರಾಜ್ಯದಲ್ಲಿ ಇದುವರೆಗೆ 787 ಎಂಎಂ ಮಳೆ ದಾಖಲಾಗಿದೆ. 852 ಎಂಎಂ ವಾಡಿಕೆ ಮಳೆ ಪ್ರಮಾಣವಾಗಿದ್ದು, ವಾಡಿಕೆಗಿಂತ ಒಟ್ಟಾರೆ 8% ಮಳೆ ಕೊರತೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈ ಬಾರಿ ಜೂನ್, ಜುಲೈ ತಿಂಗಳಿನಲ್ಲಿ ಅಧಿಕ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ದೀರ್ಘಾವಧಿ ಒಣಹವೆ ಮುಂದುವರೆದಿದ್ದು, ನಾಲ್ಕು ವರ್ಷಗಳಲ್ಲೇ ಆಗಸ್ಟ್ ತಿಂಗಳಿನಲ್ಲಿ ಅಧಿಕ ಮಟ್ಟದಲ್ಲಿ ಮಳೆ ಕೊರತೆ ಉಂಟಾಗಿತ್ತು.
ಈ ಅಂಕಿಸಂಖ್ಯೆಯನ್ನು ಸಾಮಾನ್ಯ ಮಳೆ ಮಟ್ಟ ಎಂದೇ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್ ತಿಳಿಸಿದ್ದಾರೆ.
ಕರ್ನಾಟಕ; ಅಕ್ಟೋಬರ್ 4ರ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆ
ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆ ಉಂಟಾಗಿದೆ. ಈ ಮುಂಗಾರು ಅವಧಿಯಲ್ಲಿ ಸಾಮಾನ್ಯವಾಗಿ ಈ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗುತ್ತಿತ್ತು. ಈ ಬಾರಿ ಮಲೆನಾಡು ಜಿಲ್ಲೆಗಳಲ್ಲಿ 1284 ಎಂಎಂ ಮಳೆಯಾಗಿದೆ. ಸಾಮಾನ್ಯವಾಗಿ ಇಲ್ಲಿ 1556 ಎಂಎಂ ವಾಡಿಕೆ ಮಳೆಯಾಗುತ್ತದೆ. ಇದೀಗ ವಾಡಿಕೆಗಿಂತ 18% ಮಳೆ ಕೊರತೆ ದಾಖಲಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ 2,692 ಎಂಎಂ ಮಳೆಯಾಗಿದ್ದು, ವಾಡಿಕೆಯಾಗಿ 3101 ಎಂಎಂ ಮಳೆ ದಾಖಲಾಗುತ್ತದೆ. ಈ ಬಾರಿ 13% ಕಡಿಮೆ ಮಳೆ ದಾಖಲಾಗಿದೆ. ರಾಜ್ಯದ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಒಟ್ಟಾರೆಯಾಗಿ ವಾಡಿಕೆಗಿಂತ 4% ಕಡಿಮೆ ಮಳೆ ದಾಖಲಾಗಿದೆ ಎಂದು ತಿಳಿಸಿದೆ.
ಕೋಲಾರದಲ್ಲಿ 61 ವರ್ಷಗಳಲ್ಲೇ ಈ ಬಾರಿ ಅತ್ಯಧಿಕ ಮಳೆ ದಾಖಲಾಗಿದೆ. ಕೋಲಾರ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, 621 ಎಂಎಂ ಮಳೆ ದಾಖಲಾಗಿದೆ (398 ಎಂಎಂ ವಾಡಿಕೆ ಮಳೆ ಮಟ್ಟ). ಕೋಲಾರದಲ್ಲಿ 56% ಅಧಿಕ ಮಳೆ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ ಅತಿ ಕಡಿಮೆ ಮಳೆ ಪ್ರಮಾಣ, ಅಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2479 ಎಂಎಂ ಮಳೆ ದಾಖಲಾಗಿದೆ. ಇದು 27% ಮಳೆ ಕೊರತೆ ಆಗಿದೆ ಎಂದು ಮಾಹಿತಿ ನೀಡಿದೆ.
ಜೂನ್, ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಸಾಮಾನ್ಯ ಮಳೆಯಾಗಿತ್ತು. ಇದರಿಂದ ಕೃಷಿ ಚಟುವಟಿಕೆ ಗರಿಗೆದರಿತ್ತು. ಆದರೆ ಹವಾಮಾನ ವೈಪರೀತ್ಯದಿಂದಾಗಿ ಆಗಸ್ಟ್ನಲ್ಲಿ ಮುಂಗಾರು ಕ್ಷೀಣಿಸಿತ್ತು. ಹೀಗಾಗಿ ಒಟ್ಟಾರೆ ಮಳೆ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯ ಪರಿಸ್ಥಿತಿ ಮರಳಿತ್ತು. ಸೆಪ್ಟೆಂಬರ್ ತಿಂಗಳ ಮೂರನೇ ವಾರದಲ್ಲಿ ಗುಲಾಬ್ ಚಂಡಮಾರುತ ಆರಂಭವಾದ ನಂತರ ಉತ್ತಮ ಮಳೆಯಾಗಿದೆ. ಇದಾಗ್ಯೂ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆಯಾಗಿದೆ.
'ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಉತ್ತಮ ಮಳೆ ನಡುವೆ ಸೆಪ್ಟೆಂಬರ್ ತಿಂಗಳಿನಲ್ಲಿ 77 ಲಕ್ಷ ಹೆಕ್ಟೇರ್ ಬೆಳೆಯನ್ನು ಬೆಳೆಯಲಾಗಿತ್ತು. ಈ ವರ್ಷವೂ ಕೃಷಿ ಇಳುವರಿ ಉತ್ತಮವಾಗಿ ದೊರೆಯುವ ನಿರೀಕ್ಷೆ ಇದೆ' ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ಆಯುಕ್ತ ತಿಳಿಸಿದ್ದಾರೆ.
2020-21ರಲ್ಲಿ ರಾಜ್ಯದಲ್ಲಿ ಆಹಾರ ಉತ್ಪಾದನೆ 154 ಲಕ್ಷ ಟನ್ ಇದ್ದು, ದಾಖಲೆ ಸೃಷ್ಟಿಸಿತ್ತು. 2019-20ರಲ್ಲಿ 141 ಲಕ್ಷ ಬೆಳೆ ಉತ್ಪಾದನೆಯಾಗಿತ್ತು. ಈ ಬಾರಿಯೂ ಒಳ್ಳೆ ಬೆಳೆ ನಿರೀಕ್ಷಿಸಲಾಗಿದೆ.
Recommended Video