ರಾಜ್ಯದಲ್ಲಿ ಮುಂಗಾರು ದುರ್ಬಲ, ಕೆಲವೆಡೆ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರು, ಜೂನ್ 22: ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಹಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಸೋಮವಾರದಿಂದಲೇ ಮಳೆ ಬಹುತೇಕ ಕಡಿಮೆಯಾಗಿದೆ. ಬೆಳಗಾವಿ ಭಾಗದಲ್ಲಿ ಪ್ರವಾಹ ಭೀತಿಯೂ ಸಧ್ಯಕ್ಕಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹೇಳಲಾಗಿದೆ.
ಮುಂಗಾರು: ರಾಜ್ಯದ 7 ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ
ಕರಾವಳಿಯಲ್ಲಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. 3.9 ಮೀಟರ್ನಷ್ಟು ಎತ್ತರದ ಅಲೆಗಳು ಏಳುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಶಿವಮೊಗ್ಗದಲ್ಲಿ ಮಳೆಯಿಲ್ಲ
ಶಿವಮೊಗ್ಗದ ಆಗುಂಬೆ, ಹುಲಿಕಲ್ ಪ್ರದೇಶದಲ್ಲೂ ಮಳೆಯ ಪ್ರಮಾಣ ಕಡಿಮೆಯಾಗಿದೆ, 24 ತಾಸುಗಳ ಹಿಂದೆ ಲಿಂಗನಮಕ್ಕಿಗೆ 40,059 ಕ್ಯೂಸೆಕ್ ನೀರು ಹರಿದುಬರುತ್ತಿತ್ತು. ಈಗ ಕಡಿಮೆಯಾಗಿದೆ. ಭದ್ರಾ ಜಲಾಶಯದ ಒಳಹರಿವು 13 ಸಾವಿರ ಕ್ಯೂಸೆಕ್ ಇದೆ.
ಬೆಳಗಾವಿಯಲ್ಲೂ ನಿಂತ ಮಳೆ
ಬೆಳಗಾವಿ ಹಾಗೂ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿಮಳೆ ನಿಂತಿದೆ, ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ನಿಂದ 85,750 ಕ್ಯೂಸೆಕ್ ಹಾಗೂ ದೂಧ್ಗಂಗಾ ನದಿಯಿಂದ 28,828 ಕ್ಯೂಸೆಕ್ ಸೇರಿ ಒಟ್ಟು 1,12,578 ಕ್ಯೂಸೆಕ್ ನೀರು ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ ಸೇರುತ್ತಿದೆ.
ಜೂನ್ 20ರಂದು ಮಳೆಯಾದ ಪ್ರದೇಶಗಳು
ಭಾನುವಾರ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ 30.ಮಿ.ಮೀ, ರಂಜಾಳದಲ್ಲಿ 33 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದಲ್ಲಿ 14 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಲ್ಲಿ 23 ಮಿ.ಮೀ, ಹೊರನಾಡು 59 ಮಿ.ಮೀ, ಸಾಗರದ ತಾಳವಟ್ಟಿ 24.ಮಿ.ಮೀ, ತುಮಕೂರು ಜಿಲ್ಲೆ ತಿಪಟೂರಿನಲ್ಲಿ 12 ಮಿ.ಮೀ, ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ32 ಮಿ.ಮೀ, ಶಿರಾಲಿ 24 ಮಿ.ಮೀ, ಹೊನ್ನಾವರದಲ್ಲಿ 33 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಸಾಧಾರಣ ಮಳೆ
ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದ್ದು, ಸಾಧಾರಣ ಮಳೆಯಾಗಲಿದೆ, ಜೂನ್ 21 ರಂದು ಕರಾವಳಿ ಭಾಗದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ,ಮಲೆನಾಡಿನ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತಾದರೂ ಮಳೆ ಕಡಿಮೆ ಪ್ರಮಾಣದಲ್ಲಿ ಬಂದಿದೆ.