ಆಧುನಿಕ ಆಂಬ್ಯುಲೆನ್ಸ್ ವ್ಯವಸ್ಥೆ: ಹೈಕೋರ್ಟ್ ಚಾಟಿ ಬಳಿಕ ಎಚ್ಚೆತ್ತ ಸರ್ಕಾರ
ಬೆಂಗಳೂರು, ಜು.28. ರೋಗಿಗಳಿಗೆ ತ್ವರಿತವಾಗಿ ಸೇವೆ ಒದಗಿಸುವ ಆಧುನಿಕ ಅಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೊಳಿಸಲು ವಿಳಂಬ ಮಾಡಿದ್ದಕ್ಕಾಗಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಿದೆ.
ಕಳೆದ ಜು.19ರಂದು ನ್ಯಾಯಾಲಯ ಚಾಟಿ ಬೀಸಿದ್ದಕ್ಕೆ ಇದೀಗ ಸರ್ಕಾರ ಕಾಲಮಿತಿಯಲ್ಲಿ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಿದೆ, ಅಲ್ಲದೆ, ವೇಳಾಪಟ್ಟಿಯನ್ನೂ ಸಹ ಸಲ್ಲಿಕೆ ಮಾಡಿದೆ.
ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತು.
ಆಗ ಸರ್ಕಾರಿ ವಕೀಲರು, ಆಂಬುಲೆನ್ಸ್ ಸುಗಮ ಸಂಚಾರ ಯೋಜನೆಗಾಗಿ ಟೆಂಡರ್ ಕರೆಯಲು ಕ್ರಮ ಕೈಗೊಳ್ಳಲಾಗಿದೆ. ಕಾಲಮಿತಿಯಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಸರ್ಕಾರ ಪ್ರಮಾಣಪತ್ರ ಸಲ್ಲಿಸಿದೆ ಎಂದರು.
ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಸರ್ಕಾರ ಸಲ್ಲಿಸಿರುವ ಕಾಲಮಿತಿಗೆ ಬದ್ಧವಾಗಿರಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಅ.27 ಕ್ಕೆ ಮುಂದೂಡಿತು. ಜೊತೆಗೆ ಯೋಜನೆ ಜಾರಿ ಮುಂದೂಡದಂತೆ, ಟೆಂಡರ್ ಪ್ರಗತಿ ಬಗ್ಗೆ ವರದಿ ಸಲ್ಲಿಸಲು ಸೂಚನೆ ನೀಡಿತು.
ಇನ್ನೆಷ್ಟು ದಿನ ಬೇಕು?
ಕಳೆದ ವಿಚಾರಣೆ ವೇಳೆ ಫೆಬ್ರವರಿಯಲ್ಲಿ ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಸರ್ಕಾರವು ಮಾ.4ರಂದು ಆದೇಶ ಹೊರಡಿಸಿದೆ. ಇದೀಗ ನಾವು ಜುಲೈನಲ್ಲಿದ್ದೇವೆ. ಅಂದರೆ ಸರ್ಕಾರ ಆದೇಶ ಹೊರಡಿಸಿಯೇ ನಾಲ್ಕು ತಿಂಗಳು ಕಳೆದಿದೆ. ಇನ್ನೆಷ್ಟು ದಿನ ಬೇಕು ಎಂದು ಖಾರವಾಗಿ ಪ್ರಶ್ನಿಸಿತ್ತು.
ಅಂಬ್ಯುಲೆನ್ಸ್ ಸೇವೆ ಕಲ್ಪಿಸುವುದು ತುರ್ತು ಸಂದರ್ಭದಲ್ಲಿ ಮಾತ್ರ. ಹಾಗಾಗಿ, ಯೋಜನೆ ಜಾರಿ ಮಾಡಲು ಮತ್ತಷ್ಟು ವಿಳಂಬ ಮಾಡಿದರೆ ತುರ್ತು ಸೇವೆ ಕಲ್ಪಿಸುವ ಉದ್ದೇಶವೇ ವಿಫಲವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಸೂಚಿಸಿತು.
ಇದೇ ವೇಳೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆಯನ್ನು ಜಾರಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿದೆ.
ಆ್ಯಂಬುಲೆನ್ಸ್ಗಳಿಗೆ ಜಿಪಿಎಸ್ ವ್ಯವಸ್ಥೆ :
ಸರ್ಕಾರಿ ವಕೀಲರು, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗಾಗಿ ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸೇವೆಯನ್ನು ಮೇಲ್ದರ್ಜೆಗೇರಿಸಲು 2022ರ ಫೆ.14ರಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. ಅದಕ್ಕಾಗಿ 1360 ಕೋಟಿ ರು. ಮೊತ್ತದ ಟೆಂಡರ್ ಕೆರೆಯಲು ಮಾ.4ರಂದು ಆದೇಶ ಹೊರಡಿಸಿದೆ. ಆ್ಯಂಬುಲೆನ್ಸ್ ತುರ್ತು ಸೇವೆಗೆ ಕೋರಿ ಮಾಡುವ ಕರೆಗಳನ್ನು ಸ್ವೀಕರಿಸಲು 75 ಸೀಟು ಸಾಮರ್ಥ್ಯವಿರುವ ಕಾಲ್ ಸೆಂಟರ್ ತೆರೆಯಲು ಹಾಗೂ ಆ್ಯಂಬುಲೆನ್ಸ್ಗಳಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಸದ್ಯ ಟೆಂಡರ್ ಅಧಿಸೂಚನೆಯ ಕರಡು ಸಿದ್ಧಪಡಿಸಿ, ನ್ಯಾ.ರತ್ನಕಲಾ ನೇತೃತ್ವದ ಟೆಂಡರ್ ಪರಿಶೀಲನಾ ಸಮಿತಿಯ ಮುಂದೆ ಮಂಡಿಸಲಾಗಿದೆ. ಸಮಿತಿ ಅನುಮೋದನೆ ನೀಡಿದ ನಂತರ ಟೆಂಡರ್ ಕರೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅದಕ್ಕಾಗಿ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಅಲ್ಲದೆ, 2022ರ ಫೆ.14ರಂದು ಸಚಿವ ಸಂಪುಟ ಕೈಗೊಂಡ ನಿರ್ಣಯ ಮತ್ತು ಮಾ.4ರಂದು ಸರ್ಕಾರ ಹೊರಡಿಸಿರುವ ಆದೇಶದ ಜಾರಿಗೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಜು.27ರೊಳಗೆ ಸರ್ಕಾರ ವರದಿ ಸಲ್ಲಿಸಬೇಕು. ಆ ವರದಿಯಲ್ಲಿ ಯಾವಾಗ ಟೆಂಡರ್ ಕರೆಯಲಾಗುತ್ತದೆ ಮತ್ತು ಯಾವಾಗ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುತ್ತದೆ ಎಂಬ ಬಗ್ಗೆ ವೇಳಾಪಟ್ಟಿಯನ್ನು ಉಲ್ಲೇಖಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ.