ಆನಂದ್ ಸಿಂಗ್ ಗೆ ಜಾರಿ ನಿರ್ದೇಶನಾಲಯದಿಂದ ಬೆದರಿಕೆ: ಕುಮಾರಸ್ವಾಮಿ
ಬೆಂಗಳೂರು, ಮೇ 17: ಕಾಂಗ್ರೆಸ್ ಪಾಳಯದಿಂದ ನಾಪತ್ತೆಯಾಗಿರುವ ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಜಾರಿ ನಿರ್ದೇಶನಾಲಯದ ಬೆದರಿಕೆಗೆ ಮಣಿದಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
"ಮೋದಿ ಸರಕಾರ ಕೇಂದ್ರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳುತ್ತಿದೆ. ಇವರು ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬುದು ಗೊತ್ತಿದೆ. 'ಅವರು ಜಾರಿ ನಿರ್ದೇಶನಾಲಯವನ್ನು ಬಳಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದಲ್ಲಿ ನನ್ನ ಪ್ರಕರಣ ಇದೆ. ಅವರು ನನ್ನನ್ನು ಬಿಡುವುದಿಲ್ಲ. ದಯವಿಟ್ಟು ಕ್ಷಮಿಸಿ ನಾನು ನನ್ನ ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ' ಎಂದು ಆನಂದ್ ಸಿಂಗ್ ಬೇರೊಬ್ಬ ಕಾಂಗ್ರಸ್ ಶಾಸಕರಿಗೆ ಹೇಳಿದ್ದಾರೆ," ಎಂದು ಕುಮಾರಸ್ವಾಮಿ ತಿಳಿಸಿದರು.
ಸಖತ್ 'ಕೈ' ಕೊಟ್ಟು ಕಾಂಗ್ರೆಸ್ಸಿಗೆ 'ದುಃಖ' ತಂದರೆ ಆನಂದ್ ಸಿಂಗ್?
ಇನ್ನು, "ನಮ್ಮ ತಂದೆಯವರ ಬಳಿ ಪ್ರಾದೇಶಿಕ ಪಕ್ಷಗಳ ಜೊತೆ ಮಾತನಾಡುವಂತೆ ಕೇಳಿಕೊಳ್ಳುತ್ತೇನೆ. ನೋಡಿ ಬಿಜೆಪಿ ಸಾಂವಿಧಾನಿಕ ಸಂಸ್ಥೆಗಳನ್ನು ನಾಶ ಮಾಡುತ್ತಿದೆ. ದೇಶದ ಹಿತಾಸಕ್ತಿಯನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಬೇಕಿದೆ," ಎಂದು ಕುಮಾರಸ್ವಾಮಿ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
"ನಮ್ಮ ಶಾಸಕರನ್ನು ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು. ಬಿಜೆಪಿ ಮತ್ತು ಅವರ ಸಚಿವರು ಶಾಸಕರ ಖರೀದಿಗೆ ಯತ್ನಿಸುತ್ತಿದ್ದಾರೆ. ಕೇಂದ್ರ ಸರಕಾರದ ವರ್ತನೆಯನ್ನು ಜನರು ಗಮನಿಸಬೇಕು. ಬಿಜೆಪಿಗೆ ಬಹುಮತ ಇಲ್ಲ. ರಾಜ್ಯಪಾಲರು ಈ ರೀತಿ ವರ್ತಿಸಿದ್ದು ಹೇಗೆ? ಅವರು ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ," ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಶಾಸಕರಿಗೆ ಬಿಜೆಪಿಯಿಂದ ರೂ. 100 ಕೋಟಿ ಆಮಿಷ: ಕುಮಾರಸ್ವಾಮಿ
ಈ ಆನಂದ್ ಸಿಂಗ್ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಆನಂದ್ ಸಿಂಗ್ ಪ್ರಧಾನಿ ನರೇಂದ್ರ ಮೋದಿಯವರ ಹಿಡಿತದಲ್ಲಿ ಇದ್ದಾರೆ ಎಂದು ಹೇಳಿದರು.