ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸ್ಸು ತಿರಸ್ಕಾರ, ಹೈಕೋರ್ಟಿಗೆ ಮಾಹಿತಿ
ಬೆಂಗಳೂರು, ಡಿಸೆಂಬರ್ 10: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಗಾರರಿಗೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ. ಕರ್ನಾಟಕ ಸರ್ಕಾರವು ಸಲ್ಲಿಸಿದ್ದ ಶಿಫಾರಸ್ಸನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಹೈಕೋರ್ಟಿಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರು ಮಾಹಿತಿ ನೀಡಿದ್ದಾರೆ.
ಬಸವ ತತ್ತ್ವವನ್ನು ಪಾಲಿಸುವ ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ನೀಡಬೇಕೆಂದು ನ್ಯಾ. ನಾಗಮೋಹನ್ ದಾಸ್ ಸಮಿತಿ ನೀಡಿದ್ದ ವರದಿಯನ್ನು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟ ಮಾ.19 ರಂದು ಅಂಗೀಕರಿಸಿತ್ತು.
ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು : ಸಚಿವ ಸಂಪುಟದ ನಿರ್ಣಯ
ಒಂದು ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಗುರುತಿಸಿ ಅದಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇರುವುದರಿಂದ ಈ ಕುರಿತು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸದ್ಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಚೆಂಡು ಕೇಂದ್ರ ಸರ್ಕಾರದ ಅಂಗಳದಲ್ಲಿತ್ತು. ಆದರೆ, ಎರಡು ಬಾರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನರೇಂದ್ರ ಮೋದಿ ಸರ್ಕಾರವು ತಿರಸ್ಕರಿಸಿದೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ರಿಂದ ಮಾಹಿತಿ
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆ ಕೇಂದ್ರ ಸರ್ಕಾರ ಎರಡು ಬಾರಿ ತಿರಸ್ಕರಿಸಿದೆ ಎಂದು ಹೈಕೋರ್ಟಿಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಎಸ್ ಜಿ ಪ್ರಭುಲಿಂಗ್ ನಾವಡ್ಗಿ ತಿಳಿಸಿದರು.
ನವೆಂಬರ್ 13 ರಂದೇ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಹಿಂದೂ ಧರ್ಮದ ಶಾಖೆ ಎಂಬ ಹಿಂದಿನ ನಿಲುವಿಗೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ, ಗೃಹ ಇಲಾಖೆ ಬದ್ಧವಾಗಿವೆ. ಹೀಗಾಗಿ, ಕೇಂದ್ರ ಸರ್ಕಾರವು ಶಿಫಾರಸ್ಸನ್ನು ತಿರಸ್ಕಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಪ್ರತ್ಯೇಕ ಧರ್ಮ ಕುರಿತ್ ಪಿಐಎಲ್ ಕೂಡಾ ರದ್ದು
ಬೌದ್ಧ, ಪಾರ್ಸಿ, ಸಿಖ್ ಧರ್ಮಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದೆ. ಹಿಂದೂ ಧರ್ಮದಲ್ಲಿರುವ ಇನ್ನಿತರ ಪಂಗಡಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲು ಸಾಧ್ಯವಿಲ್ಲ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಉಲ್ಲೇಖವನ್ನು ಆಧಾರಿಸಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ಪ್ರಸ್ತಾಪಿಸಿದ ಮುಖ್ಯನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠವು, ಪಿಐಎಲ್ ರದ್ದುಗೊಳಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಜಿ.ಆರ್. ಗುರುಮಠ್ ಅವರು ಪಿಐಎಲ್ ಅರ್ಜಿ ಹಿಂಪಡೆಯುವುದಾಗಿ ಹೇಳಿದ್ದಾರೆ.
ಪ್ರತ್ಯೇಕ ಧರ್ಮ ಶಿಫಾರಸ್ಸನ್ನು ಯುಪಿಎ ತಿರಸ್ಕರಿಸಿತ್ತು
2013 ರಲ್ಲೂ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಎದ್ದಿದ್ದಾಗ, ನವೆಂಬರ್ 14, 2013 ರಲ್ಲಿ ಕರ್ನಾಟಕ ಸರ್ಕಾರಕ್ಕೆ ಭಾರತೀಯ ರಿಜಿಸ್ಟ್ರಾರ್ ಜನರಲ್ ಪತ್ರ ಬರೆದಿದ್ದರು. ಈ ಪತ್ರದಲ್ಲಿ ವೀರಶೈವ ಮತ್ತು ಲಿಂಗಾಯತಗಳೆರಡೂ ಹಿಂದು ಧರ್ಮದ ಪಂಥಗಳೇ ಹೊರತು ಅವು ಸ್ವತಂತ್ರ ಧರ್ಮವಲ್ಲ ಎಂದು ಹೇಳಿದ್ದರು. ಅಂದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರವೇ ಈ ಸ್ವತಂತ್ರ ಧರ್ಮದ ಪರಿಕಲ್ಪನೆಯನ್ನು ಸಾರಾಸಗಟಾಗಿ ನಿರಾಕರಿಸಿತ್ತು.
ಪರಿಶಿಷ್ಟ ಜಾತಿಯ ಜನರಿಗೆ ನಷ್ಟವಾಗಲಿದೆ
ಈ ನಿರ್ಧಾರದಿಂದ ಪರಿಶಿಷ್ಟ ಜಾತಿಯ ಜನರಿಗೆ ನಷ್ಟವಾಗಲಿದೆ ಎಂದು ಆಗಿನ ಪ್ರಧಾನಿಯಾಗಿದ್ದ ಡಾ.ಮನಮೋಹನ್ ಸಿಂಗ್ ಹೇಳಿದ್ದರು. ಲಿಂಗಾಯತ ಪ್ರತ್ಯೇಕ ಧರ್ಮವಾದರೆ ವೀರಶೈವ ಮತ್ತು ಲಿಂಗಾಯತ ಸಮುದಾಯದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಜನರು ತಮಗೆ ಈಗಾಗಲೇ ಸಿಗುತ್ತಿರುವ ಮೀಸಲಾತಿಯ ಸೌಲಭ್ಯದಿಂದ ವಂಚಿತರಾಗಬೇಕಾಗುತ್ತದೆ. ಲಿಂಗಾಯತರು ಅಲ್ಪಸಂಖ್ಯಾತ ವಿಭಾಗದಲ್ಲಿ ಬರುವುದರಿಂದ, ಅಲ್ಪಸಂಖ್ಯಾತರಿಗೆ ಭಾರತ ಸರ್ಕಾರ ಏನೆಲ್ಲ ಸೌಲಭ್ಯ ನೀಡುತ್ತದೆಯೋ ಆ ಸೌಲಭ್ಯವನ್ನು ಲಿಂಗಾಯತ ಧರ್ಮದ ಎಲ್ಲರೂ ಪಡೆಯುತ್ತಾರೆ. ಆದ್ದರಿಂದ ಎಸ್ಸಿಗಳಿಗೆ ಪ್ರತ್ಯೇಕ ಮೀಸಲಾತಿ ಇರುವುದಿಲ್ಲ. ಇದರಿಂದ ನಷ್ಟವಾಗುವುದು ಎಸ್ಸಿಗಳಿಗೇ. ಈ ಕಾರಣಕ್ಕಾಗಿಯೇ ಯುಪಿಎ ಸರ್ಕಾರ ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ನೀಡಲು ಹಿಂದೇಟು ಹಾಕಿತ್ತು. ಇದರಿಂದ ಎಸ್ಸಿಗಳ ಮತ ಕಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ಕಾಂಗ್ರೆಸ್ಸಿಗಿತ್ತು ಎಂದು ಅರ್ಜುನ್ ರಾಮ್ ಮೇಗ್ವಾಲ್ ಹೇಳಿದ್ದಾರೆ.