ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ: ಬಿಎಸ್ವೈ ಕೈಬಿಟ್ಟರೂ ಮೋದಿ ಕೈಬಿಡಲಿಲ್ಲ
ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರದ ಸಂಪುಟ ವಿಸ್ತರಣೆಯ ವಿಚಾರ ಎದ್ದಾಗ, ರಾಜ್ಯದಿಂದ ಶಿವಕುಮಾರ್ ಉದಾಸಿ, ಉಮೇಶ್ ಜಾಧವ್ ಮಂತ್ರಿಯಾಗಬಹುದು ಎನ್ನುವ ಮಾತು ಚಾಲ್ತಿಯಲ್ಲಿತ್ತು. ಆದರೆ, ಎಲ್ಲೂ ಶೋಭಾ ಕರಂದ್ಲಾಜೆಯವರ ಹೆಸರು ಕೇಳಿ ಬರುತ್ತಿರಲಿಲ್ಲ.
Recommended Video
ಅಚ್ಚರಿಯಂತೆ, ಕೊನೇ ಕ್ಷಣದಲ್ಲಿ ಶೋಭಾ ಕರಂದ್ಲಾಜೆ ಮೋದಿ ಸರಕಾರಕ್ಕೆ ಸೇರ್ಪಡೆಯಾದರು. ಕೇಂದ್ರದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಸಚಿವರಾಗಿದ್ದ ಸದಾನಂದ ಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶೋಭಾ ಮಂತ್ರಿಯಾದರು.
ವ್ಯಕ್ತಿಚಿತ್ರ: ಕೇಂದ್ರ ಸಚಿವೆ, ಹೋರಾಟಗಾರ್ತಿ ಸಂಸದೆ ಶೋಭಾ
ಶೋಭಾ ಕರಂದ್ಲಾಜೆ ಸತತವಾಗಿ ಎರಡನೇ ಬಾರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದಕ್ಕೂ ಮುನ್ನ, ತಮ್ಮ ರಾಜಕೀಯ ಜೀವನದಲ್ಲಿ ರಾಜ್ಯದ ಮಂತ್ರಿಯೂ ಆಗಿದ್ದ ಶೋಭಾಗೆ ದೆಹಲಿ ರಾಜಕಾರಣ ಇಷ್ಟವಿರಲಿಲ್ಲ.
ರಾಜ್ಯದಲ್ಲೇ ಪ್ರಬಲ ಮಹಿಳಾ ನಾಯಕಿಯಾಗಿ ಹೊರಹೊಮ್ಮ ಬೇಕು ಎನ್ನುವ ಶೋಭಾ ಆಸೆಗೆ ಹಲವು ಕಾರಣಗಳು ತಣ್ಣೀರು ಎರಚಿದವು. ಆದರೆ, ಸಂಘ ಮತ್ತು ಪಕ್ಷದ ಕಟ್ಟಾಳುವಾಗಿದ್ದ ಶೋಭಾಗೆ ಹೈಕಮಾಂಡ್ ಶ್ರೀರಕ್ಷೆ ಇತ್ತು.
ಮೋದಿ ಸಂಪುಟದಲ್ಲಿ ಕರ್ನಾಟಕದ ಸಚಿವರು, ಖಾತೆಗಳು
ಯಡಿಯೂರಪ್ಪನವರ ಸರಕಾರದಲ್ಲಿ ಗ್ರಾಮೀಣಾಭಿವೃದ್ದಿ ಖಾತೆ
2008ರಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಯಶವಂತಪುರದಲ್ಲಿ ಈಗ ಬಿಎಸ್ವೈ ಸಂಪುಟದಲ್ಲಿ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ವಿರುದ್ದ ಜಯಗಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದ ಶೋಭಾಗೆ ಮೊದಲ ಪ್ರಯತ್ನದಲ್ಲೇ ಯಶಸ್ಸು ಸಿಕ್ಕಿತ್ತು. ಯಡಿಯೂರಪ್ಪನವರ ಸರಕಾರದಲ್ಲಿ ಆಯಕಟ್ಟಿನ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ಶೋಭಾ ನಿರ್ವಹಿಸಿದ್ದರು. ವಿಧಾನಸಭೆಗೆ ಆಯ್ಕೆಯಾಗುವ ಮುನ್ನ ಶೋಭಾ, ಮೇಲ್ಮನೆಯ ಸದಸ್ಯರಾಗಿದ್ದರು.
ಯಡಿಯೂರಪ್ಪನವರಿಗೆ ಅತ್ಯಂತ ನಿಕಟವರ್ತಿಯಾಗಿದ್ದ ಶೋಭಾ
ಬಿಎಸ್ವೈ ಸರಕಾರ ಅಧಿಕಾರದಲ್ಲಿದ್ದಾಗ ಈಗ ಏನು ಬಿ.ವೈ.ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿಯವರೇ ಮಾಡುತ್ತಿದ್ದಾರೋ, ಅದೇ ಆರೋಪ 2008ರ ವೇಳೆ ಶೋಭಾ ಕರಂದ್ಲಾಜೆ ಮೇಲಿತ್ತು. ಯಡಿಯೂರಪ್ಪನವರಿಗೆ ಅತ್ಯಂತ ನಿಕಟವರ್ತಿಯಾಗಿದ್ದ ಶೋಭಾ ವಿರುದ್ದ ರಾಜ್ಯದ ಸಚಿವರುಗಳೇ ಅಸಮಾಧಾನವನ್ನು ಹೊರಹಾಕಿದ್ದರು. ಇದು ಒಂದು ಹಂತದಲ್ಲಿ ವಿಪರೀತ ಎನ್ನುವ ಹಂತಕ್ಕೆ ಹೋದಾಗ, ವರಿಷ್ಠರು ಶೋಭಾಗೆ ಲೋಕಸಭೆಗೆ ಸ್ಪರ್ಧಿಸುವಂತೆ ಸೂಚಿಸಿದರು.
ಯಡಿಯೂರಪ್ಪನವರ ಆಪ್ತವಲಯದಿಂದ ಶೋಭಾ ದೂರಕ್ಕೆ ಸರಿಯುತ್ತಾ ಸಾಗಿದರು
ಒಲ್ಲದ ಮನಸ್ಸಿನಿಂದಲೇ ಲೋಕಸಭೆಗೆ 2014ರಲ್ಲಿ ಸ್ಪರ್ಧಿಸಿದ ಶೋಭಾ, ಅಲ್ಲೂ ಮೊದಲ ಪ್ರಯತ್ನದಲ್ಲೇ ಯಶಸ್ಸುಗಳಿಸಿದರು. ಸುಮಾರು 1.8 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ ಶೋಭಾಗೆ ಅನಿವಾರ್ಯವಾಗಿ ರಾಜ್ಯ ರಾಜಕಾರಣದಿಂದ ದೂರ ಸರಿಯಬೇಕಾಯಿತು. ಆ ವೇಳೆ ವಿರೋಧ ಪಕ್ಷದ ನಾಯಕರಾದ ಯಡಿಯೂರಪ್ಪನವರ ಆಪ್ತವಲಯದಿಂದ ಶೋಭಾ ದೂರಕ್ಕೆ ಸರಿಯುತ್ತಾ ಸಾಗಿದರು.
ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ: ಬಿಎಸ್ವೈ ಕೈಬಿಟ್ಟರೂ ಮೋದಿ ಕೈಬಿಡಲಿಲ್ಲ
ಕಳೆದ ಲೋಕಸಭಾ (2019) ಚುನಾವಣೆಯಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಲೀಡ್ ನಿಂದ ಗೆದ್ದ ಶೋಭಾ, ಕಳೆದ ಕೆಲವು ತಿಂಗಳಿನಿಂದ ರಾಜ್ಯ ರಾಜಕಾರಣದ ಬಗ್ಗೆ ತಲೆಯೂ ಹಾಕುತ್ತಿರಲಿಲ್ಲ. ಬಿಎಸ್ವೈ ಆಪ್ತವಲಯದಲ್ಲಿದ್ದ ಶೋಭಾಗೆ ಈಗ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆ. ಭಾಷೆಯ ಸಮಸ್ಯೆಯಿಂದ ಹೊರಬಂದರೆ ಶೋಭಾ ಕರಂದ್ಲಾಜೆ ಗಟ್ಟಿಗತಿ ನಾಯಕಿಯೇ. ಒಟ್ಟಿನಲ್ಲಿ, ಶೋಭಾ ಅವರು ಯಡಿಯೂರಪ್ಪ ಆಪ್ತವಲಯದಿಂದ ದೂರ ಹೋದರೂ, ನಂಬಿದ ಸಂಘ ಮತ್ತು ಪಕ್ಷ ಅವರನ್ನು ಕೈಬಿಟ್ಟಿಲ್ಲ ಎನ್ನುವುದು ಅವರ ಅಭಿಮಾನಿಗಳ ಮಾತು.