ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನಾರಚನೆ: ಕರ್ನಾಟಕಕ್ಕೆ ಸ್ವಲ್ಪ ಸಿಹಿ-ಸ್ವಲ್ಪ ಕಹಿ ಸುದ್ದಿ!
ಬೆಂಗಳೂರು, ಜು. 06: ಭರ್ಜರಿ ಬಹುಮತದೊಂದಿಗೆ ಎರಡನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿರುವ ನರೇಂದ್ರ ಮೋದಿ ಅವರು ಈಗ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 7 ವರ್ಷಗಳಾಗಿವೆ. 2024ರಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಪ್ರಧಾನಿ ಮೋದಿ ಅವರು ಈಗಿನಿಂದಲೇ ಚುನಾವಣಾ ತಯಾರಿ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೆ ಪೂರಕವಾಗಿ ಕೇಂದ್ರ ಸಚಿವ ಸಂಪುಟಕ್ಕೆ ಶಕ್ತಿ ತುಂಬಲು ಪ್ರಧಾನಿ ಮೋದಿ ಮುಂದಾಗಿದ್ದಾರೆ ಎಂಬ ಮಾಹಿತಿಯಿದೆ.
Recommended Video
ಮೋದಿ ಸಂಪುಟ ಸೇರುವವರ ಪಟ್ಟಿ ರಾಷ್ಟ್ರಪತಿ ಭವನಕ್ಕೆ ರವಾನೆಯಾಗಿದ್ದು, ನಾಳೆ (ಜು. 07) ಸಂಜೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ ಎಂಬ ಖಚಿತ ಮಾಹಿತಿ ಬಂದಿದೆ. ಈ ಸಲ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯಕ್ಕೆ ಸ್ವಲ್ಪ ಸಿಹಿ, ಸ್ವಲ್ಪ ಕಹಿ ಸುದ್ದಿ ಸಿಗಲಿದೆ ಎನ್ನಲಾಗಿದೆ. ರಾಜ್ಯದಿಂದ ಎರಡು ಅಥವಾ ಮೂವರು ಸಂಸದರು ಮೋದಿ ಸಂಪುಟ ಸೇರಲಿದ್ದು, ಒಬ್ಬರು ಕ್ಯಾಬಿನೆಟ್ ದರ್ಜೆ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಖಚಿತ ಮಾಹಿತಿ 'ಒನ್ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.
ಪ್ರಧಾನಿ ಮೋದಿ ಅವರ ಸಂಪುಟ ಪುನಾರಚನೆ ತೀರ್ಮಾನದ ಹಿಂದೆ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಸೇರಿದಂತೆ ಹಲವು ಲೆಕ್ಕಾಚಾರಗಳಿವೆ. ಜೊತೆಗೆ ರಾಜ್ಯದಿಂದ ಯಾರು ಮೋದಿ ಸಂಪುಟ ಸೇರಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಮುಂದಿದೆ!
ಮಹತ್ವದ ಬದಲಾವಣೆಗೆ ಮೋದಿ ಸಜ್ಜು!
ಕೇಂದ್ರ ಸಂಪುಟ ಪುನಾರಚನೆಗೂ ಮೊದಲು ಮಹತ್ವದ ಪ್ರಯೋಗಕ್ಕೆ ಪ್ರಧಾನಿ ಮೋದಿ ಮುಂದಾಗಿದ್ದಾರೆ. ಸಂಪುಟ ದರ್ಜೆ ಸಚಿವರಾಗಿದ್ದ ಬಿಜೆಪಿ ಹಿರಿಯ ಪರಿಶಿಷ್ಟ ನಾಯಕರಾಗಿರುವ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ಕೈಬಿಡಲಾಗಿದೆ. ತಾವರ್ ಚಂದ್ ಗೆಹ್ಲೋಟ್ ಕರ್ನಾಟಕದ 19ನೇ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಗೆಹ್ಲೋಟ್ ಸಂಪುಟ ದರ್ಜೆ ಸಚಿವರಾಗಿದ್ದರು.
ಮೋದಿ ಕ್ಯಾಬಿನೆಟ್ ವಿಸ್ತರಣೆ: 20 ಹೊಸ ಮುಖಗಳಿಗೆ ಮಣೆ?
ಪ್ರಧಾನಿ ಮೋದಿ ತಮ್ಮ ಎರಡನೇಯ ಅವಧಿಯಲ್ಲಿ ಮೊದಲ ಸಲ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದಾರೆ. ಕರ್ನಾಟಕದಿಂದಲೂ ಪ್ರಧಾನಿ ಮೋದಿ ಸಂಪುಟವನ್ನು ಮೂವರು ಸೇರಲಿದ್ದಾರೆ ಎಂಬ ಖಚಿತ ಮಾಹಿತಿ ಬಂದಿದೆ.
ಮೋದಿ ಸಂಪುಟ ಸೇರಲಿದ್ದಾರೆ 20 ಹೊಸಬರು!
ಸದ್ಯ ಪ್ರಧಾನಿ ಮೋದಿ ಅವರ ಸಚಿವ ಸಂಪುಟದಲ್ಲಿ 53 ಸಚಿವರಿದ್ದಾರೆ. ಅವರಲ್ಲಿ ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿರುವುದರಿಂದ ಮೋದಿ ಸಂಪುಟದ ಸದಸ್ಯ ಸಂಖ್ಯೆ 52ಕ್ಕೆ ಇಳಿದಿದೆ. ಕೇಂದ್ರ ಸಂಪುಟದಲ್ಲಿ ಒಟ್ಟು 81 ಸಚಿವರನ್ನು ನೇಮಕ ಮಾಡಲು ಅವಕಾಶವಿದೆ. ಆದರೆ ಕನಿಷ್ಠ ಸಚಿವರು ಎಂಬ ತತ್ವದಡಿ ಪ್ರಧಾನಿ ಮೋದಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಮುಂದಿನ ಚುನಾವಣೆ ಹಾಗೂ ಕೊರೊನಾ ವೈರಸ್ ಸಂಕಷ್ಟದ ಹಿನ್ನೆಲೆಯಲ್ಲಿ ಅಭಿವೃದ್ಧಿ ವೇಗ ಹೆಚ್ಚಿಸಲು ಸಂಪುಟದ ಗಾತ್ರ ಹೆಚ್ಚಿಸಲು ಮೋದಿ ತೀರ್ಮಾನಿಸಿದ್ದಾರೆ ಎಂಬ ಮಾಹಿತಿಯಿದೆ. ಹೀಗಾಗಿ ನಾಡಿದ್ದು ಕನಿಷ್ಠ 20 ಸಂಸದರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರೆಲ್ಲರ ಪಟ್ಟಿಯನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಲಾಗಿದೆ.
ರಾಜ್ಯದ ಒಬ್ಬರು ಹೊರಕ್ಕೆ ಮೂವರಿಗೆ ಸಚಿವ ಸ್ಥಾನ?
ಕರ್ನಾಟಕದಿಂದ ಎರಡರಿಂದ ಮೂವರು ಸಂಸದರು ಪ್ರಧಾನಿ ಮೋದಿ ಸಚಿವ ಸಂಪುಟ ಸೇರಲಿದ್ದಾರೆ ಎಂಬ ಸಿಹಿ ಸುದ್ದಿಯಿದೆ. ಆದರೆ ಇದೇ ಸಂದರ್ಭದಲ್ಲಿ ಮೋದಿ ಸಂಪುಟದಿಂದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರನ್ನು ಕೈಬಿಡಲಾಗುತ್ತಿದೆ ಎಂಬ ಕಹಿ ಸುದ್ದಿಯೂ ಇದೆ. ಆದರೆ ಯಾರನ್ನು ಪ್ರಧಾನಿ ಮೋದಿ ಕೈಬಿಡುತ್ತಿದ್ದಾರೆ ಎಂಬುದರ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.
ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ ಅವರು ಮೋದಿ ಸಂಪುಟ ಸೇರುವುದು ಖಚಿತವಾಗಿದೆ. ಇದೇ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ದೆಹಲಿಗೆ ಅವರು ಪ್ರಯಾಣ ಬೆಳೆಸಿದ್ದಾರೆ. ಎಡಗೈ ಪರಿಶಿಷ್ಟ ಸಮುದಾಯಕ್ಕೆ ಸೇರಿದ ನಾರಾಯಣಸ್ವಾಮಿ ಅವರೊಂದಿಗೆ ಮತ್ತಿಬ್ಬರು ಮೋದಿ ಸಂಪುಟ ಸೇರಲಿದ್ದಾರೆ ಎಂಬ ಮಾಹಿತಿಯೂ ಇದೆ. ಸಂಸದರಾದ ಡಾ. ಉಮೇಶ್ ಜಾಧವ್ ಹಾಗೂ ಶೋಭಾ ಕರಂದ್ಲಾಜೆ ಅವರು ನೂತನ ಸಚಿವರಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಬಂದಿದೆ.
ಪುನಾರಚನೆ ಹಿಂದಿದೆ ಬಹುದೊಡ್ಡ ಲೆಕ್ಕಾಚಾರ
2024ರಲ್ಲಿ ನಡೆಯಲಿರುವ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಈ ಸಂಪುಟ ಪುನಾಚರಚನೆ ಅಥವಾ ವಿಸ್ತರಣೆ ನಡೆಯುತ್ತಿದೆ. ಅದರೊಂದಿಗೆ ಹಲವು ಲೆಕ್ಕಾಚಾರಗಳನ್ನು ಪ್ರಧಾನಿ ಮೋದಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ. 2019ರ ನಂತರ ಪ್ರಮುಖ ಎರಡು ರಾಜಕೀಯ ಪಕ್ಷಗಳು ಎನ್ಡಿಎ ಮೈತ್ರಿಕೂಟ ತೊರೆದಿವೆ. ಶಿವಸೇನೆ ಹಾಗೂ ಶಿರೋಮಣಿ ಅಕಾಲಿ ದಳ ಪಕ್ಷಗಳು ಎನ್ಡಿಎ ಮೈತ್ರಿಕೂಟದಿಂದ ಹೊರಕ್ಕೆ ಹೋಗಿವೆ. ಹೀಗಾಗಿ ಈ ಸಲ ಸಂಪುಟಕ್ಕೆ ಸೇರಲಿರುವವರಲ್ಲಿ ಎನ್ಡಿಎ ಮೈತ್ರಿಕೂಟದ ಮೈತ್ರಿ ಪಕ್ಷಗಳ ಸಂಸದರಿಗೆ ಹೆಚ್ಚಿನ ಅವಕಾಶ ಸಿಕ್ಕರೂ ಸಿಗಬಹುದು ಎಂಬ ಲೆಕ್ಕಾಚಾರಗಳಿವೆ.
ಈ ರಾಜ್ಯಗಳಿಗೆ ಸಿಗಲಿದೆ ಹೆಚ್ಚಿನ ಪ್ರಾಶಸ್ತ್ಯ?
ವಿಧಾನಸಭಾ ಚುನಾವಣೆ ನಡೆಯಲಿರುವ ಹಿಮಾಚಲ ಪ್ರದೇಶ, ಪಂಜಾಬ್, ಗುಜರಾತ್, ಮಣಿಪುರ, ಉತ್ತರಾಖಾಂಡ್ ಹಾಗೂ ಗೋವಾ ರಾಜ್ಯಗಳಿಗೆ ಎಹಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆಯಿದೆ. ಜೊತೆಗೆ ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ ಜ್ಯೋತಿರಾಧಿತ್ಯ ಸಿಂಧಿಯಾ, ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ತ್ರಿವೇಂದರ್ ಸಿಂಗ್ ರಾವತ್, ದಿ. ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ಅವರ ನಿಧನದಿಂದ ತೆರವಾಗಿರುವ ಸಚಿವಸ್ಥಾನಕ್ಕೆ ಅವರ ಪುತ್ರ ಚಿರಾಗ್ ಪಾಸ್ವಾನ್ ಅವರನ್ನು ಸಚಿವರನ್ನಾಗಿ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಒಟ್ಟಾರೆ ಹಲವು ಲೆಕ್ಕಾಚಾರಗಳೊಂದಿಗೆ ಪ್ರಧಾನಿ ಮೋದಿ ಅವರು ಕೇಂದ್ರದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದಾರೆ ಮಾಹಿತಿಯಿಯದೆ.