ಉ.ಪ್ರ: ಹೊಸ ಪ್ರವಾಸೋದ್ಯಮ ಪಟ್ಟಿಯಿಂದ ತಾಜ್ ಮಹಲ್ ನಾಪತ್ತೆ!
ಲಕ್ನೋ, ಸೆಪ್ಟೆಂಬರ್ 03: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಬಿಡುಗಡೆ ಮಾಡಿದ ಹೊಸ ಪ್ರವಾಸೋದ್ಯಮ ಪಟ್ಟಿಯಿಂದ ಜಗತ್ತಿನ 7 ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಕಾಣೆಯಾಗಿದೆ!
ಯೋಗಿಗೆ ತಾಜ್ ಮಹಲ್ ಸಾಂಸ್ಕೃತಿಕ ಪರಂಪರೆ ಕೇಂದ್ರವೇ ಅಲ್ವಂತೆ!
ಇಲ್ಲಿನ ಪ್ರವಾಸೋದ್ಯಮ ಮಂತ್ರಿ ರಿತಾ ಬಹುಗುಣ ಅವರು ಬಿಡುಗಡೆ ಮಾಡಿದ ಪ್ರವಾಸೋದ್ಯಮ ಕರಪತ್ರದಲ್ಲಿ ಉತ್ತರ ಪ್ರದೇಶದ ಎಲ್ಲಾ ಪ್ರಮುಖ ಪ್ರವಾಸೋದ್ಯಮ ತಾಣಗಳನ್ನೂ ಉಲ್ಲೇಖಿಸಲಾಗಿದೆ. ಗೋರಖ್ಪುರದ ದೇವಸ್ಥಾನ, ಕೆಲವು ಪಾರಂಪರಿಕ ತಾಣಗಳು, ರಾಮಾಯಣದ ಪೌರಾಣಿಕ ತಾಣಗಳ ಬಗ್ಗೆಯೂ ಕರಪತ್ರದಲ್ಲಿ ಬರೆಯಲಾಗಿದೆ. ಆದರೆ ಈ ಪಟ್ಟಿಯಲ್ಲಿ ವಿಶ್ವಪ್ರಸಿದ್ಧ, ಉತ್ತರ ಪ್ರದೇಶದ ಅಗ್ರ ಪ್ರವಾಸೀ ತಾಣವಾದ ತಾಜ್ ಮಹಲ್ ಹೆಸರನ್ನೇ ಉಲ್ಲೆಖಿಸದಿರುವುದು ವಿವಾದ ಸೃಷ್ಟಿಸಿದೆ.
ಕಣ್ತಪ್ಪಿನಿಂದ ಈ ಸಮಸ್ಯೆ ಉಂಟಾಗಿದೆ ಎಂದಿರುವ ಸರ್ಕಾರ ತಕ್ಷಣವೇ ಪತ್ರಿಕಾ ಹೇಳಿಕೆಯೊಂದನ್ನು ನೀಡಿ, ಅದರಲ್ಲಿ ಉತ್ತರ ಪ್ರದೇಶದ ಪ್ರಮುಖ ಪ್ರವಾಸಿ ತಾಣಗಳ ಬಗ್ಗೆ ಹೇಳಿದ್ದು, ಅಗ್ರಸ್ಥಾನದಲ್ಲಿಯೇ ತಾಜ್ ಮಹಲ್ ಹೆಸರನ್ನು ಉಲ್ಲೇಖಿಸಿದೆ. ಒಟ್ಟಿನಲ್ಲಿ ಕಣ್ತಪ್ಪಿನಿಂದ ಆದ ಎಡವಟ್ಟು ಸರ್ಕಾರಕ್ಕೆ ಇರಿಸು ಮುರಿಸುಂಟಾಗುವಂತೆ ಮಾಡಿದೆ.
ತಾಜ್ ಮಹಲ್ ಸಮಾಧಿಯಷ್ಟೆ, ದೇಗುಲವಲ್ಲ: ಪುರಾತತ್ವ ಸಮೀಕ್ಷೆ ಇಲಾಖೆ
ಜುಲೈಯಲ್ಲಿ ಬಜೆಟ್ ಮಂಡನೆ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ, ಸಾಂಸ್ಕೃತಿಕ ಪರಂಪರೆಯ ಕೇಂದ್ರಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ಹೊರಗಿಟ್ಟಿತ್ತು. ಇದೀಗ ಮತ್ತೆ ಇದೇ ವಿವಾದವನ್ನು ಹುಟ್ಟುಹಾಕಿರುವುದು ಸರ್ಕಾರದ ನಡೆಯ ಕುರಿತು ಜನರಲ್ಲಿ ಬೇಸರ ಹುಟ್ಟಿಸಿದೆ.