ಮುರುಡೇಶ್ವರದ ಮಾಹಿತಿ ಬೆರಳ ತುದಿಯಲ್ಲಿ ಪಡೆಯಿರಿ!
ಉತ್ತರ ಕನ್ನಡ, ಅಕ್ಟೋಬರ್ 01 : ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರು ಇನ್ನುಮುಂದೆ ಬೆರಳ ತುದಿಯಲ್ಲಿಯೇ ಮಾಹಿತಿಗಳನ್ನು ಪಡೆದುಕೊಳ್ಳಬಹುದು. ಇಂತಹ ವ್ಯವಸ್ಥೆ ಮಾಡಲು ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ.
ಬೆಂಗಳೂರು ಮೂಲದ ಕೋ ರೋವರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ 'ಕೋ ರೋವರ್ ಕನೆಕ್ಟ್' ಎಂಬ ಅಪ್ಲಿಕೇಶನ್ ಅನ್ನು ಮುರುಡೇಶ್ವರದಲ್ಲಿ ಪರಿಚಯಿಸಲಾಗಿದೆ. ಜಿಲ್ಲಾಡಳಿತದ ಅಧಿಕಾರಿಗಳು, ಪ್ರವಾಸಿಗರು, ಸಂಸ್ಥೆಯ ಸಿಬ್ಬಂದಿ ಹಾಗೂ ಸೇವಾದಾರರನ್ನು ಒಂದುಗೂಡಿಸುವ ವೇದಿಕೆಯಾಗಿ ಈ ಇದು ಸಿದ್ಧಗೊಂಡಿದೆ.
ಉತ್ತಮ ಹೋಟೆಲ್ ಹಾಗೂ ವಸತಿಗೃಹಗಳ ವಿವರ, ಸಮೀಪದ ಪ್ರವಾಸಿ ಸ್ಥಳಗಳ ಮಾಹಿತಿ, ಟ್ಯಾಕ್ಸಿ, ಬಸ್, ರೈಲು ಹಾಗೂ ವಿಮಾನ ಸಂಚಾರದ ವೇಳಾಪಟ್ಟಿ ಮತ್ತು ಬುಕ್ಕಿಂಗ್ ಸೌಲಭ್ಯ ಅಪ್ಲಿಕೇಶನ್ ಮೂಲಕ ಸಿಗಲಿದೆ. ಪ್ರಮುಖವಾಗಿ ತುರ್ತು ಪರಿಸ್ಥಿತಿ ಹಾಗೂ ಅಪಾಯಕ್ಕೆ ಸಿಲುಕಿದಾಗ ನೆರವಿಗೆ ಬರಲು ಈ ಅಪ್ಲಿಕೇಶನ್ ಪ್ರಯೋಜನಕಾರಿಯಾಗಿದೆ.
ಪ್ರವಾಸಿಗರು ಅಪಾಯಕ್ಕೆ ಸಿಲುಕಿದರು ಪ್ಯಾನಿಕ್ (panic) ಬಟನ್ ಅನ್ನು ಒತ್ತಿದರೆ, ಅದು ರಕ್ಷಣಾ ತಂಡ, ಸಂಸ್ಥೆಯ ಸಿಬ್ಬಂದಿ, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗೆ ಸಂದೇಶವನ್ನು ರವಾನಿಸುತ್ತದೆ. ಆ ಮೂಲಕ ಅವರನ್ನು ರಕ್ಷಿಸಲು ಸಹಾಯಕವಾಗಲಿದೆ.
ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ
'ಕೋ ರೋವರ್ ಕನೆಕ್ಟ್' ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿದೆ. ಮುರುಡೇಶ್ವರಕ್ಕೆ ಭೇಟಿ ನೀಡುವ ಮೊದಲು ಅದರಲ್ಲಿ ಕೇಳುವ ಎಲ್ಲ ವಿವರಗಳನ್ನು ಭರ್ತಿ ಮಾಡಿ, ನೋಂದಾಯಿಸಿಕೊಳ್ಳಬೇಕು. ಆಗ ಅಲ್ಲಿ ಭೇಟಿ ನೀಡಬಹುದಾದ ಸುತ್ತಮುತ್ತಲಿನ ಸ್ಥಳಗಳು, ಮನರಂಜನಾ ಕಾರ್ಯಕ್ರಮಗಳು ಹಾಗೂ ಸಾಹಸ ಕ್ರೀಡಾ ಚಟುವಟಿಕೆಗಳ ಮಾಹಿತಿ ದೊರೆಯಲಿದೆ. ಪ್ರವಾಸಿಗರ ಜತೆ ಗುಂಪು ಅಥವಾ ವೈಯಕ್ತಿಕವಾಗಿ ಸಂದೇಶ (ಚಾಟ್) ಕಳುಹಿಸುವ ಅವಕಾಶ ಕೂಡ ಇದರಲ್ಲಿದೆ. ಫೋಟೋ, ಸ್ಥಳದ ಮ್ಯಾಪ್ ಅನ್ನು ಅವರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಸ್ಥೆಯ ಸಿಬ್ಬಂದಿಯನ್ನು ಇದರ ಮೂಲಕ ಸಂಪರ್ಕಿಸಬಹುದು.
ಅಪಾಯಕ್ಕೆ ಸಿಲುಕಿದರೆ ರಕ್ಷಣೆ
ಪ್ರವಾಸಿಗರು ಅಪಾಯಕ್ಕೆ ಸಿಲುಕಿದಾಗ ಇಲ್ಲಿರುವ ಪ್ಯಾನಿಕ್ (panic) ಬಟನ್ ಅನ್ನು ಒತ್ತಿದರೆ, ಅದು ರಕ್ಷಣಾ ತಂಡ, ಸಂಸ್ಥೆಯ ಸಿಬ್ಬಂದಿ, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆಗೆ ಸಂದೇಶವನ್ನು ರವಾನಿಸುತ್ತದೆ. ಜಿಪಿಎಸ್ನ ಸಹಾಯದಿಂದ ಅವರಿರುವ ಜಾಗದ ಸಮೇತ ಅವರ ಗುಂಪಿನ ಎಲ್ಲ ಸದಸ್ಯರಿಗೆ ಆ ಸಂದೇಶ ರವಾನೆಯಾಗುತ್ತದೆ. ಆ ಮೂಲಕ ಅವರನ್ನು ರಕ್ಷಿಸಲು ಇದು ಸಹಾಯ ಮಾಡಲಿದೆ.
ಯಾವುದೇ ಶುಲ್ಕವಿಲ್ಲ
'ಉತ್ತಮ ಸೇವೆಯನ್ನು ಹೊಂದಿರುವ ಹೋಟೆಲ್ ಮಾಲೀಕರು ಹಾಗೂ ಸೇವಾ ಪೂರೈಕೆದಾರರನ್ನು ನಾವು ಈ ಆ್ಯಪ್ನಲ್ಲಿ ಸೇರಿಸಿದ್ದೇವೆ. ಪ್ರವಾಸಿಗರು ಅಥವಾ ಸೇವೆ ಒದಗಿಸುವ ಸಂಸ್ಥೆಯವರಿಗೆ ನಾವು ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ. ಅದನ್ನು ಸರ್ಕಾರ ನಮಗೆ ಪಾವತಿಸಲಿದೆ. ಜತೆಗೆ ಇದು ಕಡಿಮೆ ಇಂಟರ್ನೆಟ್ ಬಳಸಿ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸಲಿದೆ' ಎನ್ನುತ್ತಾರೆ ಕೋ ರೋವರ್ ಸಂಸ್ಥೆಯ ಸಿಇಒ ಅಂಕುಶ್ ಸಭರ್ವಾಲ್.
ಜಿಲ್ಲೆಯಾದ್ಯಂತ ವಿಸ್ತರಣೆ
'ಮುರುಡೇಶ್ವರದಲ್ಲಿ ಪ್ರಥಮ ಬಾರಿಗೆ ಈ ಅಪ್ಲಿಕೇಶನ್ ಅನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದೇವೆ. ಪ್ರಪಂಚದ ಎರಡನೇ ಅತಿದೊಡ್ಡ ಶಿವನ ಪ್ರತಿಮೆ, ಸ್ಕೂಬಾ ಡೈವಿಂಗ್ ಸೇರಿದಂತೆ ಜಲ ಸಾಹಸ ಚಟುವಟಿಕೆಯನ್ನು ಈ ತಾಣ ಹೊಂದಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ. ಇದು ಹೆಚ್ಚು ಉಪಯೋಗವಾಗಲಿದೆ. ಮುಂಬರುವ ದಿನಗಳಲ್ಲಿ ಗೋಕರ್ಣ, ಕಾರವಾರ ಮತ್ತು ಜಿಲ್ಲೆಯ ಇತರ ಪ್ರವಾಸಿ ತಾಣಗಳಲ್ಲೂ ಇದನ್ನು ವಿಸ್ತರಿಸಲಿದ್ದೇವೆ' ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.