ಎಂ.ಎಂ.ಕಲಬುರ್ಗಿ ಹತ್ಯೆ : ಮಸಾಲಾವಾಲಾ ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರು, ಜೂನ್ 10 : ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಪ್ರವೀಣ್ ಪ್ರಕಾಶ್ ಚತುರ್ ಎಂಬ ಆರೋಪಿಯನ್ನು ಬಂಧಿಸಿದೆ. ತನಿಖೆ ಮುಕ್ತಾಯದ ಹಂತದಲ್ಲಿದ್ದು, ಚಾರ್ಜ್ಶೀಟ್ ಸಲ್ಲಿಸಲು ಎಸ್ಐಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಎಂ.ಎಂ.ಕಲಬುರ್ಗಿ ಹತ್ಯೆ ನಡುವೆ ಸಾಮ್ಯತೆ ಇದೆ. ಎರಡೂ ಹತ್ಯೆಗೆ ಒಂದೇ ಆಯುಧವನ್ನು ಬಳಕೆ ಮಾಡಲಾಗಿದೆ. ಕಲಬುರ್ಗಿ ಅವರನ್ನು ಕೊಂದ ಆರೋಪಿಗಳೇ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.
ಎಂ.ಎಂ.ಕಲಬುರ್ಗಿ ಹತ್ಯೆ, ಪ್ರಮುಖ ಆರೋಪಿ ಬಂಧಿಸಿದ ಎಸ್ಐಟಿ
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಅಮೋಲ್ ಕಾಳೆಯನ್ನು ಬಂಧಿಸಿದ್ದ ಎಸ್ಐಟಿ ಪೊಲೀಸರು ಆತನಿಂದ ಡೈರಿಯೊಂದನ್ನು ಜಪ್ತಿ ಮಾಡಿದ್ದರು. ಡೈರಿಯಲ್ಲಿದ್ದ ಮಾಹಿತಿ ಅನ್ವಯ ತನಿಖೆ ಮುಂದುವರೆಸಿ ಪ್ರವೀಣ್ ಪ್ರಕಾಶ್ ಚತುರ್ನನ್ನು ಬಂಧಿಸಿದ್ದಾರೆ.
ಎಂ.ಎಂ.ಕಲಬುರ್ಗಿ ಹತ್ಯೆಗೆ ಮಂಗಳೂರಲ್ಲಿ ತರಬೇತಿ ಪಡೆದಿದ್ದರು?
ಬೆಳಗಾವಿ ಮೂಲದ ಪ್ರವೀಣ್ ಪ್ರಕಾಶ್ ಚತುರ್ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ. ಆದರೆ, ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದಲ್ಲಿ ಆತ ಭಾಗಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದ್ದು, ಚಾರ್ಜ್ಶೀಟ್ನಲ್ಲಿ ಎಸ್ಐಟಿ ಎಲ್ಲಾ ವಿವರವನ್ನು ದಾಖಲು ಮಾಡಲಿದೆ.
600ಕ್ಕೂ ಹೆಚ್ಚು ಕೋಡ್ ವರ್ಡ್
ಅಮೋಲ್ ಕಾಳೆ ಡೈರಿಯಲ್ಲಿ 600ಕ್ಕೂ ಹೆಚ್ಚು ಕೋಡ್ ವರ್ಡ್ಗಳಿದ್ದವು. ಅವುಗಳಲ್ಲಿ ಮಸಾಲಾವಾಲಾ ಎಂಬ ಕೋಡ್ ವರ್ಡ್ ಡಿ-ಕೋಡ್ ಮಾಡಿದಾಗ ಪ್ರವೀಣ್ ಚತುರ್ ಸುಳಿವು ಸಿಕ್ಕಿತ್ತು. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೋಲ್ ಕಾಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೇರೆ-ಬೇರೆ ಹೆಸರು ಹೇಳಿ ಆತ ಎಸ್ಐಟಿ ಅಧಿಕಾರಿಗಳ ದಾರಿ ತಪ್ಪಿಸಿದ್ದ. ಬಳಿಕ ಪ್ರವೀಣ್ ಚತುರ್ ಬಗ್ಗೆ ಮಾಹಿತಿ ನೀಡಿದ್ದ.
ಡಿಪ್ಲೊಮಾ ಪದವೀಧರ
27 ವರ್ಷದ ಪ್ರವೀಣ್ ಪ್ರಕಾಶ್ ಚತುರ್ ಬೆಳಗಾವಿ ಮೂಲದವನು. ಡಿಪ್ಲೊಮಾ ಪದವೀಧರನಾದ ಈತ ಸ್ಥಳೀಯವಾಗಿ ಶಿವ ಪ್ರತಿಷ್ಠಾನ ಎಂಬ ಸಂಘಟನೆ ಜೊತೆ ಗುರುತಿಸಿಕೊಂಡಿದ್ದ. ಮಹಾರಾಷ್ಟ್ರದ ದಂತವೈದ್ಯ ವೀರೇಂದ್ರ ತಾವಡೆ ಪರಿಚಯವಾಗಿ ಅವರ ಜೊತೆ ಸೇರಿಕೊಂಡಿದ್ದ. ವೀರೇಂದ್ರ ತಾವಡೆ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಸಾಕ್ಷಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರವೀಣ್ ಪ್ರಕಾಶ್ ಚತುರ್ನನ್ನು ಎಸ್ಐಟಿ ವಿಚಾರಣೆ ಮಾಡಿತ್ತು. ಆದರೆ, ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾಗದ ಹಿನ್ನಲೆಯಲ್ಲಿ ಆತನನ್ನು ಸಾಕ್ಷಿಯಾಗಿ ಮಾಡಿ ಚಾರ್ಜ್ಶೀಟ್ನಲ್ಲಿ ಹೆಸರು ದಾಖಲಿಸಿದೆ. ಆದರೆ, ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಬಂದೂಕು ಚಾಲನೆ ತರಬೇತಿ
ಎಂ.ಎಂ.ಕಲಬುರ್ಗಿ ಹತ್ಯೆಗೂ ಮುನ್ನ ಬೆಳಗಾವಿ ಮತ್ತು ಧರ್ಮಸ್ಥಳದ ಕಾಡಿನಲ್ಲಿ ಬಂದೂಕು ಚಾಲನೆ ಮಾಡುವ ತರಬೇತಿ ನೀಡಲಾಗಿತ್ತು. ಈ ತರಬೇತಿಯಲ್ಲಿ ಪ್ರವೀಣ್ ಪ್ರಕಾಶ್ ಚತುರ್ ಪಾಲ್ಗೊಂಡಿದ್ದ. ಪ್ರವೀಣ್ ಪ್ರಕಾಶ್ ಚತುರ್ ಬಂಧನದಿಂದಾಗಿ ಪ್ರಕರಣದ ತನಿಖೆ ಮುಕ್ತಾಯದ ಹಂತ ತಲುಪಿದ್ದು, ಎಸ್ಐಟಿ ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದೆ.