ಕರ್ನಾಟಕ ಬಿಜೆಪಿ ನಾಯಕರಿಗೆ ಬುದ್ಧಿವಾದ ಹೇಳಿ ಲೆಹರ್ ಸಿಂಗ್ ಪತ್ರ!
ಬೆಂಗಳೂರು, ಸೆಪ್ಟೆಂಬರ್ 21 : ಕರ್ನಾಟಕ ಬಿಜೆಪಿಯಲ್ಲಿ ಹಲವಾರು ಬೆಳವಣಿಗೆ ನಡೆಯುತ್ತಿವೆ. ಪ್ರತಿಪಕ್ಷಗಳಿಗೆ ತಿರುಗೇಟು ನೀಡುವಾಗ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಹೆಸರುಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಆಪ್ತರಾದ ಲೆಹರ್ ಸಿಂಗ್ ರಾಜ್ಯ ನಾಯಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ವಿಧಾನ ಪರಿಷತ್ ಸದಸ್ಯರೂ ಆಗಿರುವ ಅವರು ಎಲ್ಲದಕ್ಕೂ ನರೇಂದ್ರ ಮೋದಿ ಹೆಸರು ಎಳೆದು ತರುವುದನ್ನು ವಿರೋಧಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬದಲಾಯಿಸಿ, ಅಮಿತ್ ಶಾಗೆ ಪತ್ರ
2019ರ ಲೋಕಸಭೆ ಚುನಾವಣೆ ಮೇಲೆ ಗಮನ ಹರಿಸೋಣ. ದಕ್ಷಿಣ ಭಾರತದಲ್ಲಿ ಪಕ್ಷ ಪ್ರಬಲವಾಗಿರುವ ರಾಜ್ಯ ಕರ್ನಾಟಕ ಮಾತ್ರ. ಇಲ್ಲಿ ಹೆಚ್ಚಿನ ಸ್ಥಾನಗಳನ್ನುಗಳಿಸಬೇಕು ಎಂಬುದು ನಮ್ಮ ಗುರಿಯಾಗಬೇಕು ಎಂದು ಪತ್ರದಲ್ಲಿ ಲೆಹರ್ ಸಿಂಗ್ ವಿವರಸಿದ್ದಾರೆ.
ಕಾಂಗ್ರೆಸ್ ಅಸಮಾಧಾನ, ಬಿಜೆಪಿಗೆ ಲಾಭಕ್ಕಿಂತ ನಷ್ಟವಾಗಿದ್ದೇ ಹೆಚ್ಚು
'ರಾಜ್ಯದಲ್ಲಿ ನಿಮ್ಮ ಅಧಿಕಾರವಿದ್ದರೆ ಕೇಂದ್ರದಲ್ಲಿ ನಮ್ಮ ಅಧಿಕಾರವಿದೆ. ನರೇಂದ್ರ ಮೋದಿ ನಮ್ಮವರು' ಎಂದು ಯಡಿಯೂರಪ್ಪ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದ್ದರು. ಈ ಹೇಳಿಕೆ ನೀಡಿದ ಮರುದಿನವೇ ಲೆಹರ್ ಸಿಂಗ್ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಏನಿದೆ? ಚಿತ್ರಗಳಲ್ಲಿ ನೋಡಿ....
ಬಿಜೆಪಿ ನಾಯಕರಿಗೆ ಕುಮಾರಣ್ಣ, ಜೆಡಿಎಸ್ ಟಾರ್ಗೆಟ್ ಏಕೆ? 5 ಕಾರಣಗಳು
ನಮ್ಮ ಗುರಿ ಏನು?
ಲೆಹರ್ ಸಿಂಗ್ ತಮ್ಮ ಪತ್ರದಲ್ಲಿ ನಾನು ಬಿಜೆಪಿಯ ಕಾರ್ಯಕರ್ತ ಸುಮಾರು 45 ವರ್ಷಗಳಿಂದ ಪಕ್ಷದಲ್ಲಿದ್ದೇನೆ. ಕರ್ನಾಟಕದಲ್ಲಿ ಪಸ್ತುತ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಅರಿವಿದೆ. ನಾನು ನನ್ನ ಪಕ್ಷದ ನಾಯಕರಿಗೆ ಮಂದಿನ ಕೆಲವು ತಿಂಗಳುಗಳ ಕಾಲ ನಮ್ಮ ಗುರಿ ಏನೆಂದು ನೆನಪು ಮಾಡಲು ಬಯಸುತ್ತೇನೆ. 2019ರ ಚುನಾವಣೆಗೆ ನಾವು ಸಿದ್ಧರಾಗಬೇಕಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
2ನೇ ಬಾರಿ ಮೋದಿ ಪ್ರಧಾನಿಯಾಗಬೇಕು
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು 2ನೇ ಬಾರಿಗೆ ಆಯ್ಕೆಯಾಗಬೇಕು ಎಂಬುದು ನಮ್ಮ ಗುರಿಯಾಗಿದೆ. 2014ರ ಚುನಾವಣೆಗೆ ಹೋಲಿಕೆ ಮಾಡಿದರೆ ಪಕ್ಷ ಅದಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. ಪ್ರತಿಯೊಂದು ಲೋಕಸಭಾ ಕ್ಷೇತ್ರ ಸಹ ಮುಖ್ಯ. ದಕ್ಷಿಣ ಭಾರತದಲ್ಲಿ ಪ್ರಬಲ ರಾಜ್ಯವಾದ ಕರ್ನಾಟಕದಲ್ಲಿಯೂ ಹೆಚ್ಚು ಸ್ಥಾನಗಳಿಸಬೇಕು.
ಕೇಂದ್ರ ನಾಯಕರ ಗುರಿ
ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಕೇಂದ್ರ ನಾಯಕರ ಗಮನ ಬೇರೆ ಕಡೆ ಹೋಗಬಾರದು. ಕೇಂದ್ರ ನಾಯಕರು ಪ್ರಚಾರ ಕಾರ್ಯತಂತ್ರ, ಮೈತ್ರಿ ಮಾತುಕತೆ ಮುಂತಾದ ಚಟುವಟಿಕೆಯಲ್ಲಿ ಬ್ಯುಸಿಯಾಗಿದ್ದಾರೆ. ನಾವು ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ, ತೆಲಂಗಾಣ ಸೇರಿ 4 ಪ್ರಮುಖ ವಿಧಾನಸಭೆ ಚುನಾವಣೆ ಎದುರಿಸಬೇಕಿದೆ.
ಎಲ್ಲದಕ್ಕೂ ಮೋದಿ ಹೆಸರು ಏಕೆ?
ರಾಜ್ಯದಲ್ಲಿ ವಿಪಕ್ಷಗಳ ವಿರುದ್ಧ ಹೋರಾಡುತ್ತಿರುವಾಗ ಪ್ರತಿಯೊಂದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಹೆಸರು ತರುವುದನ್ನು ನಿಲ್ಲಿಸಬೇಕು. ಕೇಂದ್ರದ ಸಂಸ್ಥೆಗಳು, ಕೇಂದ್ರ ನಾಯಕರ ಹೆಸರು ಹೇಳುವುದನ್ನು ಕಡಿಮೆ ಮಾಡಬೇಕು ಎಂದು ಲೆಹರ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ.