ವೈಎಸ್ವಿ ದತ್ತ ಬಿಫಾರಂಗೆ ಕಾಯುತ್ತಿದ್ದರೆ ಅತ್ತ ದೇವೇಗೌಡ್ರು ಆಡಿದ್ದೇ ಬೇರೆ
Recommended Video
ಕಳೆದ ಅಸೆಂಬ್ಲಿ ಚುನಾವಣೆಯ ಹೊತ್ತಿನಲ್ಲಿ ದೇವೇಗೌಡರಿಗೆ ಮಾಧ್ಯಮದವರ ಪ್ರಶ್ನೆಯೊಂದು ಎದುರಾಯಿತು. ಅಲ್ಲಾ.. ಗೌಡ್ರೇ.. ವೈಎಸ್ವಿ ದತ್ತ ಅವರಿಗೆ ಟಿಕೆಟ್ ನೀಡುವುದಿಲ್ಲವಂತೆ..ಹೌದಾ.. ಅದಕ್ಕೆ ಗೌಡ್ರು.. ಅಯ್ಯೋ.. ದತ್ತ ನಮ್ಮ ಪಕ್ಷದಲ್ಲಿರುವ ಒಬ್ಬನೇ ಬ್ರಾಹ್ಮಣ, ಅವರಿಗೆ ಟಿಕೆಟ್ ನೀಡದೇ ಇರಲು ಸಾಧ್ಯವೇ ಎಂದು ಉತ್ತರಿಸಿದ್ದರು.
ಅದರಂತೇ.. ದತ್ತ ಕಡೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ದತ್ತ ಅವರ ಸೋಲಿಗೆ ಪಕ್ಷಾತೀತವಾಗಿ ಎಲ್ಲರೂ ಬೇಸರಿಸಿದ್ದುಂಟು. ಇದಾದ ನಂತರ, ಸಂಪುಟ ವಿಸ್ತರಣೆಯ ವೇಳೆ, ದತ್ತ ಅವರನ್ನು ಸಚಿವರನ್ನಾಗಿ ಮಾಡಿ, ನಂತರ ಎಂಎಲ್ಸಿ ಮಾಡಬಹುದು ಎನ್ನುವ ಲೆಕ್ಕಾಚಾರವಾಗಿತ್ತು. ಆದರೆ, ಅದ್ಯಾವುದೂ ನಡೆಯದೇ ದತ್ತ ಮುನಿಸಿಕೊಂಡಿದ್ದರು. ತಮ್ಮ ಮಾನಸಪುತ್ರನನ್ನು ಕರೆದು ಗೌಡ್ರು ಸಮಾಧಾನ ಪಡಿಸಿದ್ದರು.
ರಾಜಕೀಯ ಬಿಕ್ಕಟ್ಟಿಗೆ ದೇವೇಗೌಡರು ಬಳಸಿದ ಪಾಶುಪತಾಸ್ತ್ರ ಯಶಸ್ವಿಯಾಯಿತೆ?
ಇಷ್ಟೆಲ್ಲಾ ಪೀಠಿಕೆ ಏನಕ್ಕೆ ಅಂದರೆ, ವಿಧಾನಪರಿಷತ್ ಚುನಾವಣೆಯಲ್ಲಿ ದತ್ತ ಅವರ ಹೆಸರು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಂಚೂಣಿಯಲ್ಲಿತ್ತು. ಇವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದ ಇನ್ನೊಂದು ಹೆಸರೆಂದರೆ ಎನ್ ಎಚ್ ಕೋನರೆಡ್ಡಿ.
ಜೊತೆಗೆ, ಪಿಜಿಆರ್ ಸಿಂಧ್ಯಾ, ರಮೇಶ್ ಬಾಬು, ಬಿಬಿ ನಿಂಗಯ್ಯ, ಮಧು ಬಂಗಾರಪ್ಪ, ಆರ್ ಪ್ರಕಾಶ್, ಅಮರನಾಥ್ ಮತ್ತು ಪ್ರೊ. ರಂಗಪ್ಪ ಅವರ ಹೆಸರೂ ಕೇಳಿ ಬರುತ್ತಿತ್ತು. ಒಂದು ಹುದ್ದೆಗೆ ಇಷ್ಟೆಲ್ಲಾ ಹೆಸರು ಕೇಳಿ ಬರುತ್ತಿದ್ದರೂ, ಬಿಫಾರಂ ನಮಗೇ ಸಿಗುತ್ತೆ ಅನ್ನುವ ಅಚಲ ವಿಶ್ವಾಸದಲ್ಲಿದ್ದವರು, ದತ್ತ ಮತ್ತು ಕೋನ ರೆಡ್ಡಿ.
ಆದರೆ, ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿ, ಜೆಡಿಎಸ್ ವರಿಷ್ಠ ದೇವೇಗೌಡರು ಬಿಫಾರಂ ನೀಡಿದ್ದು, ಪಕ್ಷದ ಯುವ ಘಟಕದ ರಮೇಶ್ ಗೌಡ ಅವರಿಗೆ. ಖುದ್ದು ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರಿಗೂ ಗೌಡರ ಈ ನಡೆ ಆಶ್ಚರ್ಯಕ್ಕೀಡು ಮಾಡುವಂತೆ ಮಾಡಿದೆ.
ಕುಟುಂಬದ ಹಿಂಬಾಲಕ ರಮೇಶ್ ಗೌಡ ಅವರಿಗೆ ಬಿಫಾರಂ ವಿತರಣೆ
ಸೋಮವಾರದ (ಸೆ 24) ದಿನ ರಾಜಕೀಯದಲ್ಲಿ ಹೆಚ್ಚಿನ ಅನುಭವವನ್ನು ಹೊಂದಿರುವ ವೈಎಸ್ವಿ ದತ್ತ, ರಮೇಶ್ ಬಾಬು, ಪ್ರಕಾಶ್, ಅಮರನಾಥ್, ಕೋನ ರೆಡ್ಡಿ ದೇವೇಗೌಡರ ಮನೆಯಲ್ಲಿ ಕಾಯುತ್ತಿರುವಾಗಲೇ ಅವರಿಗೆಲ್ಲಾ ಆಶ್ಚರ್ಯ ಕಾದಿತ್ತು. ಪಕ್ಷದ ಮುಖಂಡರೇ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ದೇವೇಗೌಡ್ರು, ತಮ್ಮ ಕುಟುಂಬದ ಹಿಂಬಾಲಕ ಎಚ್ ಎಂ ರಮೇಶ್ ಗೌಡ ಅವರಿಗೆ ಬಿಫಾರಂ ವಿತರಿಸಿದ್ದರು. ರೇವಣ್ಣರ ಆಪ್ತ ಸಹಾಯಕನ ಜೊತೆಗೆ ತೆರಳಿ ರಮೇಶ್ ಗೌಡ ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್ ಬಚಾವೋ ಸರ್ಜರಿಗೆ ಮುಂದಾದ ದೇವೇಗೌಡ
ಮುಖ್ಯಮಂತ್ರಿಗಳೇ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದರು
ಎನ್ ಎಚ್ ಕೋನರೆಡ್ಡಿಗೆ ಖುದ್ದು ಮುಖ್ಯಮಂತ್ರಿಗಳೇ ಟಿಕೆಟ್ ನೀಡುವ ಭರವಸೆಯನ್ನು ನೀಡಿದ್ದರು. ಬೆಂಗಳೂರಿಗೆ ತಯಾರಾಗಿ ಬರುವಂತೆ, ಸಿಎಂ ಫೋನಿನಲ್ಲಿ ಸೂಚಿಸಿದ್ದರು ಎನ್ನುವ ಮಾಹಿತಿಯಿದೆ. ಕೋನರೆಡ್ಡಿ ಎಲ್ಲಾ ಪೂರ್ವತಯಾರಿ ಮಾಡಿಕೊಂಡಿದ್ದರು. ಆದರೆ ಆಗಿದ್ದು ಇನ್ನೊಂದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ, ಕುಮಾರಸ್ವಾಮಿ ಮುಂದೆ ಕೋನರೆಡ್ಡಿ ಬಿಕ್ಕಿಬಿಕ್ಕಿ ಅತ್ತಿದ್ದರು. ಎಂಎಲ್ಸಿ ಚುನಾವಣೆಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದಾಗಿ ಎಚ್ಡಿಕೆ ಭರವಸೆ ನೀಡಿದ್ದರು.
ಪರಿಷತ್ ನ ಒಂದು ಸ್ಥಾನ: ಜೆಡಿಎಸ್ ನಲ್ಲಿ ಐದು ಮಂದಿ ತಿಪ್ಪರಲಾಗ!
ರಮೇಶ್ ಅವರ ಹೆಸರು ಅಂತಿಮವಾಗಲು ಗೌಡರ ಪುತ್ರಿಯ ತೀವ್ರ ಒತ್ತಡವೇ ಕಾರಣ
ರಮೇಶ್ ಗೌಡ ಅವರ ಹೆಸರು ಅಂತಿಮವಾಗಲು ದೇವೇಗೌಡರ ಪುತ್ರಿಯ ತೀವ್ರ ಒತ್ತಡವೇ ಕಾರಣ ಎನ್ನಲಾಗಿದೆ. ದೇವೇಗೌಡರ ಕುಟುಂಬದ ಒಡನಾಟವೊಂದನ್ನು ಬಿಟ್ಟರೆ, ಅರ್ಹತೆ ಮತ್ತು ರಾಜಕೀಯ ಅನುಭವದಲ್ಲಿ ರಮೇಶ್ ಗೌಡ ಅಷ್ಟೇನೂ ಪ್ರಾಭಲ್ಯವನ್ನು ಹೊಂದಿರಲಿಲ್ಲ. ಆದರೂ, ಪಕ್ಷದ ಯುವ ಕಾರ್ಯಕರ್ತನಿಗೆ ಗೌಡ್ರು ಬಿಫಾರಂ ನೀಡಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರೇ ಬೇಸರ
ಟಿಕೆಟ್ ಆಕಾಂಕ್ಷಿಗಳನ್ನು ಬಿಟ್ಟು, ಇನ್ನೊಬ್ಬರಿಗೆ ಟಿಕೆಟ್ ನೀಡಿದ್ದಕ್ಕೆ ಖುದ್ದು ಜೆಡಿಎಸ್ ರಾಜ್ಯಾಧ್ಯಕ್ಷರೇ ಬೇಸರಿಸಿಕೊಂಡಿದ್ದಾರೆ. ಅನುಭವ, ಹಿರಿತನ, ಪಕ್ಷಕ್ಕಾಗಿ ದುಡಿದ ವ್ಯಕ್ತಿಗಳು, ಇದ್ಯಾವುದನ್ನೂ ಪರಿಗಣಿಸದೇ ರಮೇಶ್ ಗೌಡ ಅವರಿಗೆ ಟಿಕೆಟ್ ನೀಡಿದ್ದು ವಿಶ್ವನಾಥ್ ಆಕ್ಷೇಪಕ್ಕೆ ಕಾರಣವಾಯಿತು. ದತ್ತಾ ಕೂಡಾ ಟಿಕೆಟ್ ಸಿಗದೇ ಇರುವುದಕ್ಕೆ ನೊಂದಿದ್ದಾರೆ.
ಗೌಡರ ನಡೆಯ ಹಿಂದೆ, ಇನ್ನೇನೋ ರಾಜಕೀಯ ಇದೆಯೋ
ನಾಮ ನಿರ್ದೇಶನದ ಅವಕಾಶ ಇನ್ನೂ ಇರುವುದರಿಂದ, ಗೌಡರ ನಡೆಯ ಹಿಂದೆ, ಇನ್ನೇನೋ ರಾಜಕೀಯ ಇದ್ದರೂ ಇರಬಹುದು ಎನ್ನುವ ಮಾತು ಕೇಳಿಬರುತ್ತಿದೆ. ಸದ್ಯದ ಮಟ್ಟಿಗೆ, ಜೆಡಿಎಸ್ ವರಿಷ್ಠ ದೇವೇಗೌಡರು, ಶ್ರೀಮಂತಿಕೆಗೆ ಬೆಲೆ ನೀಡಿದರೇ ಎನ್ನುವ ಸಂಶಯ ಜೆಡಿಎಸ್ ವಲಯದಲ್ಲಿ ಕಾಡುತ್ತಿದೆ.