ಮೊದಲ ದಿನವೇ ವಿಧಾನಸಭೆ ಕಲಾಪಕ್ಕೆ ಶಾಸಕರ ಗೈರು, ಕಾರಣ ಏನು ಗೊತ್ತಾ?
ಬೆಂಗಳೂರು, ಡಿ. 07: ವಿಧಾನ ಮಂಡಲ ಅಧಿವೇಶನ ಮೊದಲ ದಿನವೇ ವಿಧಾನಸಭೆ ಕಲಾಪಕ್ಕೆ ಶಾಸಕರ ಗೈರು ಎದ್ದು ಕಂಡಿತು. ಕೊರೊನಾ ವೈರಸ್ ಆತಂಕದಿಂದ ಶಾಸಕರು ಕಲಾಪಕ್ಕೆ ಗೈರು ಹಾಜರಾಗಿರಬಹುದು ಅಂದುಕೊಂಡಿದ್ದರೆ ತಪ್ಪು. ಪಕ್ಷಾತೀತವಾಗಿ ಶಾಸಕರು ವಿಧಾನಸಭೆ ಕಲಾಪಕ್ಕೆ ಗೈರಾಗಿದ್ದಾರೆ. ಶಾಸಕರು ಮಾತ್ರವಲ್ಲ ಬಹಳಷ್ಟು ಮಂತ್ರಿಗಳೂ ಕೂಡ ವಿಧಾನಸಭೆ ಕಲಾಪಕ್ಕೆ ಗೈರು ಹಾಜರಾಗಿದ್ದಾರೆ. ಮಂತ್ರಿಗಳು ಗೈರಾಗಿದ್ದಕ್ಕೆ ಸ್ವತಃ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಗರಂ ಆಗಿದ್ದರು.
ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾದಾಗ ಸದನದಲ್ಲಿ ಇದ್ದಿದ್ದು ಕೇವಲ 50ಕ್ಕೂ ಕಡಿಮೆ ಶಾಸಕರು. ಕಲಾಪವನ್ನು ಮುಂದೂಡುವಾಗಲೂ ಕೂಡ ಶಾಸಕರ ಸಂಖ್ಯೆ 70ರ ಗಡಿ ದಾಟಲೇ ಇಲ್ಲ. ಇಷ್ಟೇ ಅಲ್ಲ ವಿಧಾನಸಭೆ ಕಲಾಪವನ್ನೇ ಮೊಟಕು ಗೊಳಿಸುವಂತೆ ಎಲ್ಲ ಪಕ್ಷಗಳ ಶಾಸಕರು ತಮ್ಮ ನಾಯಕರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಶಾಸಕರ ಗೈರು ಹಾಜರಿಯ ಹಿಂದೆ ಅದೊಂದು ಕಾರಣವಿದೆ. ಏನದು ಕಾರಣ? ಮುಂದಿದೆ ಮಾಹಿತಿ.
ಪಕ್ಷಾತೀತವಾಗಿ ಶಾಸಕರು ಗೈರು!
ಇಂದು (ಡಿ.07) ಮೊದಲ ದಿನದ ವಿಧಾನಸಭೆ ಕಲಾಪ ಆರಂಭವಾದಾಗ 223 ಶಾಸಕರಲ್ಲಿ ಸದನದಲ್ಲಿ ಇದ್ದಿದ್ದು ಕೇವಲ 50 ಶಾಸಕರು ಮಾತ್ರ. ನಂತರ ಕೆಲವು ಶಾಸಕರು ಕಲಾಪಕ್ಕೆ ಬಂದರಾದರೂ ಆ ಸಂಖ್ಯೆ 70ನ್ನೂ ದಾಟಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸೇರಿದಂತೆ ಕೇವಲ 11 ಸಚಿವರು, ಬಿಜೆಪಿಯ 26 ಶಾಸಕರು, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ 25 ಶಾಸಕರು, ಜೆಡಿಎಸ್ ಪಕ್ಷದ ಕೇವಲ 5 ಶಾಸಕರು ಸೇರಿದಂತೆ 68 ಸದಸ್ಯರು ಮಾತ್ರ ಇಂದಿನ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ-ಬಿಜೆಪಿ ಶಾಸಕ ಮುನಿರತ್ನ ಭೇಟಿ: ಕುತೂಹಲ ಮೂಡಿಸಿದ ಮಾತು'ಕಥೆ'!
ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಗರಂ
ವಿಧಾನಸಬೆಯಲ್ಲಿ ಪ್ರಶ್ನೋತ್ತರ ಕಲಾಪದ ಬಳಿಕವಂತೂ ಮತ್ತಷ್ಟು ಶಾಸಕರು ಹಾಗೂ ಸಚಿವರು ಸದನದಿಂದ ತೆರಳಿದರು. ವಿಧಾನಸಭಾ ಕಲಾಪದಲ್ಲಿ ಕಡ್ಡಾಯವಾಗಿ ಹಾಜರಿರಬೇಕಿದ್ದ 9 ಸಚಿವರ ಪೈಕಿ ಕೇವಲ 3 ಸಚಿವರ ಮಾತ್ರ ಇದ್ದರು. ಸಚಿವರ ಗೈರು ಹಾಜರಾತಿ ಬಗ್ಗೆ ಪ್ರಸ್ತಾಪಿಸಿದ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಡಗೆ ಕಾಗೇರಿ ಅವರು ಸದನದಲ್ಲಿ ಕೇವಲ ಮೂರೇ ಸಚಿವರು ಇದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ಅಧಿವೇಶನ ಮೊಟಕುಗೊಳಿಸಲು ಶಾಸಕರ ಒತ್ತಾಯ
ಅಧಿವೇಶನವನ್ನು ಮೊಟಕು ಮಾಡಲು ಶಾಸಕರಿಂದ ಒತ್ತಡ ಬಂದಿದೆ ಎನ್ನಲಾಗಿದೆ. ಇದಕ್ಕೆ ಕಾರಣ ಗ್ರಾಮ ಪಂಚಾಯತ್ ಚುನಾವಣೆ. ಚುನಾವಣೆ ಬಂದಿರುವುದರಿಂದ ಅಧಿವೇಶನದಲ್ಲಿ ಭಾಗವಹಿಸಲು ಬಗ್ಗೆ ಶಾಸಕರು ನಿರಾಸಕ್ತಿ ತೋರಿದ್ದಾರೆ. ಅವಧಿಗೂ ಮುನ್ನವೇ ಅಧಿವೇಶನ ಮೊಟಕು ಮಾಡಿ ಎಂದೂ ಶಾಸಕರು ಒತ್ತಾಯ ಮಾಡುತ್ತಿದ್ದಾರೆ. ವಿಧಾನ ಮಂಡಳ ಅಧಿವೇಶನ ಮೊಟಕುಗೊಳಿಸುವಂತೆ ಶಾಸಕರು ತಮ್ಮ ತಮ್ಮ ಪಕ್ಷದ ನಾಯಕರಲ್ಲಿ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
Recommended Video
ಶುಕ್ರವಾರವೇ ಅಧಿವೇಶ ಮೊಟಕು?
ಗ್ರಾಮ ಪಂಚಾಯತ್ ಚುನಾವಣೆಯ ಜವಾಬ್ದಾರಿಯಿಂದಾಗಿ ಅಧಿವೇಶನದಲ್ಲಿ ಭಾಗವಹಿಸುವುದು ಕಷ್ಟ ಎಂದು ಶಾಸಕರು ಹೇಳುತ್ತಿದ್ದಾರೆ. ಸದನ ಸಲಹಾ ಸಮಿತಿ ಸಭೆ(BAC)ಯಲ್ಲಿ ಈ ಬಗ್ಗೆ ತಿರ್ಮಾನ ಮಾಡಿ ಎಂದು ಶಾಸಕರು ತಮ್ಮ ತಮ್ಮ ಪಕ್ಷದ ನಾಯಕರ ಮೇಲೆ ಒತ್ತಡ ತಂದಿದ್ದಾರೆ.
ಸ್ಪೀಕರ್ ನೇತೃತ್ವದಲ್ಲಿ ನಡೆಯಲಿರುವ ಸದನ ಸಲಹಾ ಸಮಿತಿ ಸಭೆಯಲ್ಲಿ ಅಧಿವೇಶನ ಮೊಟಕುಗೊಳಿಸುವ ಕುರಿತು ಅಂತಿಮ ತಿರ್ಮಾನ ಮಾಡುವ ಸಾಧ್ಯತೆಯಿದೆ. ಇದೇ ಶುಕ್ರವಾರ (ಡಿ. 11) ಸದನವನ್ನು ಮೊಟಕು ಮಾಡುವ ಪ್ರಯತ್ನವನ್ನು ಎಲ್ಲ ಪಕ್ಷಗಳ ನಾಯಕರು ಮಾಡಲಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 7 ರಿಂದ ಡಿಸೆಂಬರ್ 15ರವರೆಗೆ ವಿಧಾನಮಂಡಳ ಅಧಿವೇಶನ ನಡೆಸಲು ಸಮಯ ನಿಗದಿ ಮಾಡಲಾಗಿದೆ.