ಸಿದ್ದರಾಮಯ್ಯರನ್ನು ದಿಢೀರ್ ಭೇಟಿ ಮಾಡಿದ ಶಾಸಕ ಜಮೀರ್ ಅಹ್ಮದ್!
ಬೆಂಗಳೂರು, ಸೆ. 11: ಡ್ರಗ್ ಮಾಫಿಯಾ ವಿರುದ್ಧದ ತನಿಖೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಒಂದೆಡೆ ಬದ್ಧ ರಾಜಕೀಯ ವೈರಿಗಳು ಎನಿಸಿಕೊಂಡಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಸಿಎಂ ಯಡಿಯೂರಪ್ಪ ಅವರು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ.
ಮಾಜಿ ಸಿಎಂ ಎಚ್ಡಿಕೆ, ಸಿಎಂ ಯಡಿಯೂರಪ್ಪ ಅವರ ಭೇಟಿಯ ಬೆನ್ನಲ್ಲೆ ತಮ್ಮ ಪಕ್ಷದ ನಾಯಕರ ಸಿದ್ದರಾಮಯ್ಯ ಅವರನ್ನು ಶಾಸಕ ಜಮೀರ್ ಅಹ್ಮದ್ ಖಾನ್ ಅವರು ಭೇಟಿ ಮಾಡಿರುವುದರ ಹಿಂದೆ ರಾಜಕೀಯ ನಡೆ ಎದ್ದು ಕಾಣಿಸುತ್ತಿದೆ. ಡ್ರಗ್ ಮಾಫಿಯಾದಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಹೆಸರು ಥಳಕು ಹಾಕಿಕೊಳ್ಳುವಂತೆ ಸಮಾಜ ಸೇವಕ ಸಂಬರಗಿ ಆರೋಪಿಸಿದ್ದರು. ಪ್ರಶಾಂತ ಸಂಬರಗಿ ವಿರುದ್ಧ ಮೂರು ದಿನಗಳ ಹಿಂದೆಯೆ ಸಂಬರಗಿ ವಿರುದ್ದ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದ ಜಮೀರ್ ಅಹ್ಮದ್ ಅವರು ಇವತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಸರ್ಕಾರಕ್ಕೆ ಸವಾಲನ್ನೂ ಹಾಕಿದ್ದಾರೆ.
ಜಮೀರ್ ಬಂಧನ ಯಾಕಿಲ್ಲ?
ಡ್ರಗ್ ಮಾಫಿಯಾದೊಂದಿಗಿನ ನಂಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮೇಲೆ ಪ್ರಶಾಂತ ಸಂಬರಗಿ ಆರೋಪ ಮಾಡಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರು ಸಂಸದ ಪ್ರತಾಪ್ ಸಿಂಹ, ಇನ್ನೂ ಯಾಕೇ ಶಾಸಕ ಜಮೀರ್ ಅಹ್ಮದ್ ಅವರನ್ನು ಬಂಧಿಸಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಎಷ್ಟೇ ಪ್ರಭಾವಿಗಳಿದ್ದರೂ ಕ್ರಮಕೈಗೊಳ್ಳಲು ಮುಲಾಜಿಲ್ಲ ಎಂದಿದ್ದರು.
ಆತಂಕಕ್ಕೊಳಗಾದ ಜಮೀರ್?
ಇದರೊಂದಿಗೆ ಶಾಸಕ ಜಮೀರ್ ಅಹ್ಮದ್ ಅವರ ಒಂದು ಕಾಲದ ಸ್ನೇಹಿತ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದರು. ಹೀಗಾಗಿ ಶಾಸಕ ಜಮೀರ್ ಅಹ್ಮದ್ ಅವರು ಆತಂಕಕ್ಕೆ ಒಳಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ.
ತಮ್ಮ ಮೇಲೆ ಬಂದಿರುವ ಆರೋಪಗಳ ಕುರಿತು ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಮಾಹಿತಿ ಕೊಟ್ಟಿರುವ ಜಮೀರ್ ಅಹ್ಮದ್ ಖಾನ್ ಅವರು, ನನಗೂ ಡ್ರಗ್ ಮಾಫಿಯಾಕ್ಕೂ ಯಾವುದೇ ಸಂಬಂಧವಿಲ್ಲ. ನನ್ನನ್ನು ರಾಜಕೀಯವಾಗಿ ತುಳಿಯಲು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಶಾಸಕ ಜಮೀರ್ ಅಹ್ಮದ್ ಅವರು, ಪೊಲೀಸರು ಹುಡುಕುತ್ತಿರುವ ಫಾಜಿಲ್ ನಾಲ್ಕು ವರ್ಷದ ಹಿಂದೆ ಪರಿಚಯ ಇದ್ದ, ಈಗ ಸಂಪರ್ಕದಲ್ಲಿ ಇಲ್ಲ ಎಂದಿದ್ದಾರೆ. ಯಾರಾರೋ ಬರ್ತಿರ್ತಾರೆ ಅವರೆಲ್ಲಾ ಆಪ್ತರು ಅಂತಾ ಹೇಳುವುದಕ್ಕೆ ಆಗುತ್ತಾ? ಸರ್ಕಾರ ಯಾವುದಿದೆ ? ಕಾಂಗ್ರೆಸ್ ಸರ್ಕಾರ ಇದೆಯಾ? ಬಿಜೆಪಿ ಸರ್ಕಾರ ಇದೆ ತನಿಖೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಕಾಂಜಿಪಿಂಜಿ ಸಂಬರಗಿ
ಇನ್ನು ನಟಿ ಸಂಜನಾ ಅವರೊಂದಿಗಿನ ಸಂಪರ್ಕಕ ಕುರಿತು ಹೇಳಿಕೆ ಕೊಟ್ಟಿರುವ ಜಮೀರ್ ಅಹ್ಮದ್, ನಟಿ ಸಂಜನಾ ಎಲ್ಲಿದ್ದಾರೆ? ಪೊಲೀಸ್ ಕಸ್ಟಡಿಯಲ್ಲಿದ್ದಾರೆ ತಾನೇ? ತನಿಖೆ ಮಾಡಲಿ. ನಾನು ಡ್ರಗ್ ಪ್ರಕರಣದಲ್ಲಿ ಇದ್ದದ್ದು ಸಾಬೀತಾದರೆ ರಾಜ್ಯದಲ್ಲಿರೋ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರ ಕ್ಕೆ ಕೊಟ್ಟು ಬಿಡುತ್ತೇನೆ. ಇನ್ನು ಪ್ರಶಾಂತ ಸಂಬರಗಿಗೆ ಸಂಬಂಧಿಸಿದಂತೆ ಮಾತನಾಡಿರುವ ಜಮೀರ್ ಅಹ್ಮದ್, ಸಂಬರಗಿ ಕಾಂಜಿಪಿಂಜಿ. ಅವನು ಹೇಳೋದನ್ನು ಕೇಳೋದ್ಯಾಕೆ? ಸರ್ಕಾರ ತನಿಖೆ ಮಾಡಲಿ, ನಾನೂ ಕಾನೂನು ಹೋರಾಟ ಮಾಡುತ್ತೇನೆ. ನಟಿ ಸಂಜನಾರನ್ನು ಶ್ರೀಲಂಕಾದಲ್ಲಿ ಹೋಗಲಿ ಬೆಂಗಳೂರಿನಲ್ಲಿಯೇ ನೋಡಿಲ್ಲ ಎಂದಿದ್ದಾರೆ.
Recommended Video
FIR ದಾಖಲು
ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ಶಾಸಕ ಜಮೀರ್ ಅಹ್ಮದ್ ಅವರ ಪಾತ್ರವೂ ಇದೆ ಎಂದು ಹೇಳಿಕೆ ಕೊಟ್ಟಿದ್ದ ಪ್ರಶಾಂತ್ ಸಂಬರಗಿ ವಿರದ್ಧ ಎಫ್ಐಆರ್ ದಾಖಲಾಗಿದೆ. ಮೂರು ದಿನಗಳ ಹಿಂದೆ ಸಂಬರಗಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ನ್ಯಾಯಾಲಯದಲ್ಲಿ ಈ ಬಗ್ಗೆ ಖಾಸಗಿ ದೂರು ಸಲ್ಲಿಸಿದ್ದರು. ಇದೀಗ ಪ್ರಶಾಂತ್ ಸಂಬರಗಿ ವಿರುದ್ದ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಪ್ಐಆರ್ ಹಾಕಲಾಗಿದೆ.
ನ್ಯಾಯಾಲಯದ ಅದೇಶದ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 120/B, 504, 463, 465, 506 ಅಡಿಯಲ್ಲಿ ಸಂಬರಗಿ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯಿಂದ ಶುರುವಾದ ಡ್ರಗ್ ಮಾಫಿಯಾ ಜಾಲದ ಅನಾವರಣ, ಇದೀಗ ರಾಜಕೀಯ ನಾಯಕರ ಬುಡಕ್ಕೆ ಬಂದು ನಿಂತಿದೆ. ಸೂಕ್ತ ತನಿಖೆ ಮುಂದುವರೆದಲ್ಲಿ ಇನ್ನಷ್ಟು ಜನ ರಾಜಕಾರಣಿಗಳಿಗೆ ಕುತ್ತು ಬರಲಿದೆ ಎಂಬುದಂತೂ ನಿಜ.