ದೆಹಲಿ ಭೇಟಿ ಬಗ್ಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ!
ಬೆಂಗಳೂರು, ಆ. 23: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಳೆದ ಶನಿವಾರ ದಿಢೀರ್ ದೆಹಲಿಗೆ ತೆರಳಿದ್ದರು. ದೆಹಲಿಗೆ ತೆರಳುವ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಸುದೀರ್ಘ ಚರ್ಚೆ ನಡೆಸಿದ್ದರು. ಅದೇ ಸಂದರ್ಭದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಹಾಗೂ ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್ ಕಚೇರಿಗಳ ಮೇಲೆ ಏಕಕಾಲಕ್ಕೆ ಇಡಿ ನಡೆದಿತ್ತು. ಶಾಸಕ ಜಮೀರ್ ಜೊತೆಗೆ ಮಾಜಿ ಶಾಸಕ ರೋಷನ್ ಬೇಗ್ ನಿವಾಸದ ಮೇಲೂ ಇಡಿ ದಾಳಿ ಮಾಡಿತ್ತು.
ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ನಾಯಕರ ಮನೆ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ಶುಕ್ರವಾರ ರಾತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆಯ ಬಳಿಕ ಶನಿವಾರ ಬೆಳಗ್ಗೆ ಶಾಸಕ ಜಮೀರ್ ಅಹ್ಮದ್ ದಿಢೀರ್ ದೆಹಲಿಗೆ ತೆರಳಿದ್ದು ಕುತೂಹಲ ಮೂಡಿಸಿತ್ತು. ಈ ಹಿಂದೆ ಇಡಿ ತನಿಖೆಗೆ ಒಳಗಾಗಿದ್ದ ಡಿಕೆಶಿ ಅವರನ್ನು ಭೇಟಿ ಮಾಡಿ ಜಮೀರ್ ಅಹ್ಮದ್ ಸಲಹೆಗಳನ್ನು ಪಡೆದಿದ್ದಾರೆ. ದೆಹಲಿಗೆ ತೆರಳಿ ಕಾಂಗ್ರೆಸ್ ನಾಯಕ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರನ್ನು ಭೇಟಿ ಮಾಡಿ ತಮ್ಮ ಪ್ರಕರಣದ ವಕಾಲತ್ತು ವಹಿಸಿಕೊಳ್ಳುವಂತೆ ಮನವಿ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಈಗ ಬೆಂಗಳೂರಿಗೆ ಹಿಂದಿರುಗಿದ ಬಳಿಕ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ದೆಹಲಿ ಭೇಟಿಯ ಬಗ್ಗೆ ವಿವರಣೆ ಕೊಟ್ಟಿದ್ದಾರೆ. ದೆಹಲಿ ಭೇಟಿ ಬಗ್ಗೆ ಜಮೀರ್ ಅಹ್ಮದ್ ಹೇಳುತ್ತಿರುವುದೇನು?
ಜಮೀರ್ ಅಹ್ಮದ್ ದೆಹಲಿಗೆ ಹೋಗಿದ್ಯಾಕೆ?
ನಾನು ವೈಯಕ್ತಿಕ ಕೆಲಸ ಮೇಲೆ ದೆಹಲಿಗೆ ಹೋಗಿ ವಾಪಾಸ್ ಬಂದಿದ್ದೇನೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ. ಶನಿವಾರ ಭಾನುವಾರ ಇಡಿ ಕಚೇರಿ, ವಿಚಾರಣೆ ಯಾವುದು ಇರುವುದಿಲ್ಲ. ನನ್ನ ವೈಯುಕ್ತಿಕ ಕೆಲಸ ಮುಗಿಸಿಕೊಂಡು ವಾಪಸ್ ಆಗಿದ್ದೇನೆ. ಬಹಳ ವರ್ಷಗಳಿಂದ ನಾನು ದೆಹಲಿಗೆ ಹೋಗಿ ಬಂದು ಮಾಡುತ್ತೇನೆ ವಿಪಕ್ಷಗಳು, ನಾನು ಈಗ ಮಾತ್ರ ದೆಹಲಿಗೆ ಹೋಗಿ ಬಂದ ರೀತಿಯಲ್ಲಿ ಭಾವಿಸಿಕೊಳ್ಳುತ್ತಿವೆ ಎಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆ ಕೊಟ್ಟಿದ್ದಾರೆ.
ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್?
ಆದರೆ ಇಡಿ ನೋಟೀಸ್ ಬರುವ ಸೂಚನೆ ಇರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆಯಂತೆ ಹಿರಿಯ ನ್ಯಾಯವಾದಿಗಳನ್ನು ಭೇಟಿ ಮಾಡಲು ಜಮೀರ್ ದೆಹಲಿಗೆ ಹೋಗಿದ್ದರು ಎಂಬ ಮಾಹಿತಿಯಿತ್ತು. ಈಗ ಅಲ್ಲದಿದ್ದರೂ ಮುಂದಿನ ದಿನಗಳಲ್ಲಿ ಇಡಿ ಇಲಾಖೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಕೊಡಬಹುದು. ಹೀಗಾಗಿ ಮುಂಜಾಗ್ರತೆಯಿಂದ ಮೊದಲೇ ಹಿರಿಯ ವಕೀಲರನ್ನು ಭೇಟಿ ಮಾಡಿ ವಿಚಾರಣೆ ಎದುರಿಸಿರುವುದು ಹೇಗೆ ಎಂಬುದನ್ನು ಜಮೀರ್ ಅಹ್ಮದ್ ತಿಳಿದುಕೊಳ್ಳಲು ದೆಹಲಿಗೆ ಹೋಗಿದ್ದಾರೆ ಎನ್ನಲಾಗಿತ್ತು.
ಡಿ.ಕೆ. ಶಿವಕುಮಾರ್ ಸಲಹೆಯಂತೆ ಸಿಬಲ್ ಭೇಟಿ?
ಹಿಂದೆ ಡಿ.ಕೆ. ಶಿವಕುಮಾರ್ ಅವರು ಇಡಿ ಇಲಾಖೆಯ ವಿಚಾರಣೆಗೆ ಒಳಗಾದಾಗ ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ವಕಾಲತ್ತು ವಹಿಸಿದ್ದರು. ಆದರೆ ಕಪಿಲ್ ಸಿಬಲ್ ಅವರನ್ನು ದಿಢೀರ್ ಭೇಟಿ ಮಾಡುವುದು ಸಾಧ್ಯಗುವುದಿಲ್ಲ. ಹೀಗಾಗಿ ಮೊಂದೊಂದು ದಿನ ಏಕಾಏಕಿ ನೋಟೀಸ್ ಬಂದಲ್ಲಿ ಅವರನ್ನು ಸಂಪರ್ಕಿಸುವುದು ಸಾಧ್ಯವಾಗುವುದಿಲ್ಲ. ಆದರಿಂದ ಮೊದಲೇ ಅವರನ್ನು ಭೇಟಿ ಮಾಡಲು ಶಾಸಕ ಜಮೀರ್ ಅಹ್ಮದ್ ದೆಹಲಿಗೆ ತೆರಳಿದ್ದಾರೆ. ಕಪಿಲ್ ಸಿಬಲ್ ಭೇಟಿ ಮಾಡುವಂತೆ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು.
Recommended Video
ಮತ್ತೆ ಜಮೀರ್ ಪರ ಮಾತನಾಡಿದ ಡಿಕೆಶಿ!
ಶಾಸಕ ಜಮೀರ್ ಅಹ್ಮದ್ ಖಾನ್ ದೆಹಲಿಯಿಂದ ಹಿಂದಿರುಗುತ್ತಿದ್ದಂತೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಮ್ಮೆ ಅವರ ಪರವಾಗಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, "ಶಾಸಕ ಜಮೀರ್ ಅಹ್ಮದ್ ನನ್ನ ತಪ್ಪಿಲ್ಲ ಅಂತ ಹೇಳಿದ್ದಾರೆ. ಈ ವಿಚಾರದಲ್ಲಿ ಹೆಚ್ಚು ಮಾತನಾಡಲ್ಲ. ಆದರೆ ದೇಶದಲ್ಲಿ ಎಲ್ಲ ಕಡೆಯೂ ಹೀಗೇ ಆಗುತ್ತಿದೆ. ಇದರ ವಿರುದ್ದ ನಾವೂ ಕೂಡ ಹೋರಾಟ ಮಾಡುತ್ತಿದ್ದೇವೆ. ಜಮೀರ್ ಅಹ್ಮದ್ ಪರವಾಗಿ ನಮ್ಮ ಪಕ್ಷವಿದೆ ಎಂದು ಡಿಕೆಶಿ ಹೇಳಿದ್ದಾರೆ.